ಭಾರಿ ಅಪಾಯದ ಸ್ಥಿತಿಯಲ್ಲಿ ಬೆಂಗಳೂರಿನ ಗೊಟ್ಟಿಗೆರೆ ಕೆರೆ
ಬೆಂಗಳೂರು, ಡಿ.18: ಸುಮಾರು 500 ವರ್ಷಗಳಷ್ಟು ಹಳೆಯದಾದ ಗೊಟ್ಟಿಗೆರೆ ಕೆರೆ ಈಗ ಬೆಂಗಳೂರು-ಮೈಸೂರು ನೈಸ್ ಪೆರಿಫೆರಲ್ ರಸ್ತೆಗೆ ತಾಗಿಕೊಂಡಿರುವ ಬಸವಪುರ ಹಳ್ಳಿಯಿಂದ ಸಂಸ್ಕರಣೆಗೊಳ್ಳದೆ ಬರುವ ಚರಂಡಿ ನೀರಿನಿಂದಾಗಿ ಭಾರಿ ಅಪಾಯವನ್ನು ಎದುರಿಸುತ್ತಿದೆ.

ಬನ್ನೇರುಘಟ್ಟ ರಸ್ತೆಯ ಗೊಟ್ಟಿಗೆರೆ ನಿವಾಸಿಗಳು ಈಗ ಕೆರೆ ಸಂರಕ್ಷಣೆ ನಡೆಸಬೇಕು ಮತ್ತು ಇದನ್ನು ಮೂಲಸ್ವರೂಪದಲ್ಲೇ ಉಳಿಸಬೇಕೆಂದು ಧ್ವನಿಯೆತ್ತಿದ್ದಾರೆ. ಜತೆಗೆ, ಅವರು ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್ ಪಿಸಿಬಿ)ಗೆ ದೂರು ದಾಖಲಿಸಿದ್ದಾರೆ. ಇದೀಗ ವಿಷಯವನ್ನು ಗಂಭೀರವಾಗಿ ಪರಿಗಣಿಸಿದೆ.

ಕೆಎಸ್ ಪಿಸಿಬಿ ಈಗ ಜಲ (ಮಾಲಿನ್ಯ ತಡೆ ಮತ್ತು ನಿಯಂತ್ರಣ) ಕಾಯ್ದೆ ಉಲ್ಲಂಘನೆಗಾಗಿ ಬಿಡಬ್ಲ್ಯೂಎಸ್ಎಸ್ ಬಿ ಮುಖ್ಯ ಎಂಜಿನಿಯರ್ ಗೆ ನೋಟಿಸ್ ಜಾರಿಗೊಳಿಸಿದ್ದಾರೆ ಎಂದು ತಿಳಿದುಬಂದಿದೆ.
ಗೊಟ್ಟಿಗೆರೆ ನಿವಾಸಿಗಳ ಪ್ರಕಾರ, ಬಸವಪುರ ಗ್ರಾಮದಲ್ಲಿ ಬಿಡಬ್ಲ್ಯೂಎಸ್ಎಸ್ ಬಿ ಕೈಗೆತ್ತಿಕೊಂಡಿರುವ, ನೀರಿನ ಮತ್ತು ನೆಲದಡಿಯ ಪೈಪ್ ಲೈನ್ ತ್ಯಾಜ್ಯ ಔಟ್ ಲೆಟ್ ನಿಂದ ತ್ಯಾಜ್ಯ ಸಂಸ್ಕರಣಾ ಘಟಕ (ಎಸ್ ಟಿಪಿ)ಕ್ಕೆ ಜೋಡಣೆಯಾಗುವುದಿಲ್ಲ.

ಭೂಗತ ಚರಂಡಿ ವ್ಯವಸ್ಥೆಯು ಸಂಸ್ಕರಣಾ ಘಟಕವನ್ನೂ ಹೊಂದಿರಬೇಕು ಎಂದು ಅವರು ಬೊಟ್ಟು ಮಾಡುತ್ತಾರೆ. ಭೂಗತ ಚರಂಡಿ ವ್ಯವಸ್ಥೆಯು ಎಸ್ ಟಿಪಿಗೆ ಜೋಡಣೆಯಾದ ಕಾರಣ, ಸಂಸ್ಕರಣಗೊಳ್ಳದ ತ್ಯಾಜ್ಯ ನೀರು ಗೊಟ್ಟಿಗೆರೆ ಕೆರೆಯನ್ನು ಸೇರುತ್ತಿದೆ.
ಈ ಸಮಸ್ಯೆಯನ್ನು ನಿವಾರಿಸಲು ಬಿಡಬ್ಲ್ಯೂಎಸ್ಎಸ್ ಬಿ ಮತ್ತು ಬಿಬಿಎಂಪಿ ತಕ್ಷಣವೇ ಮುಂದೆ ಬರಬೇಕು ಎಂದು ಕೆಎಸ್ ಪಿಸಿಬಿ ಅಧಿಕಾರಿಗಳು ಹೇಳುತ್ತಾರೆ. 500 ವರ್ಷಗಳ ಹಳೆಯ ಗೊಟ್ಟಿಗೆರೆ ಕೆರೆಯು ಪ್ರಾಣಿ ಮತ್ತು ಸಸ್ಯ ಸಂಕುಲದ ಬಹುದೊಡ್ಡ ನೀರಿನ ಮೂಲವಾಗಿದೆ. ಇದಿಷ್ಟೇ ಅಲ್ಲದೆ ಈ ಕೆರೆಯು ಅಂತರ್ಜಲ ಮರುಪೂರಣ ವ್ಯವಸ್ಥೆಗೂ ಕೊಡುಗೆ ನೀಡುತ್ತದೆ ಎಂದು ಗೊಟ್ಟಿಗೆರೆ ನಿವಾಸಿಗಳು ಬೊಟ್ಟು ಮಾಡುತ್ತಾರೆ.

ಅವರ ಪ್ರಕಾರ, ನ್ಯಾಯಮೂರ್ತಿ ಎನ್.ಕೆ.ಪಾಟೀಲ್ ನೇತೃತ್ವದ ಸಮಿತಿಯು ಗೊಟ್ಟಿಗೆರೆ ಕೆರೆಯ ಅಭಿವೃದ್ಧಿಗೆ ನೀಡಿದ ಶಿಫಾರಸುಗಳು ಇನ್ನೂ ಜಾರಿಗೆ ಬಂದಿಲ್ಲ. 2011ರಲ್ಲಿ ನಗರದ ಕೆರೆಗಳು ಕಣ್ಮರೆಯಾಗುತ್ತಿರುವ ಸಂಬಂಧ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದನ್ನು ವಿಚಾರಣೆ ನಡೆಸಿದ ಕರ್ನಾಟಕ ಉಚ್ಛ ನ್ಯಾಯಾಲಯವು ನಗರದ ಕೆರೆಗಳನ್ನು ಸಂರಕ್ಷಿಸುವ ಸಂಬಂಧ ಮಾರ್ಗದರ್ಶಿ ಸೂತ್ರ ರಚಿಸಲು ನ್ಯಾಯಮೂರ್ತಿ ಎನ್.ಕೆ.ಪಾಟೀಲ್ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿತ್ತು.

ಜಲ ಸಂಪನ್ಮೂಲವನ್ನು ಸ್ವಚ್ಛಗೊಳಿಸುವ ಅಗತ್ಯವಿರುವುದರಿಂದ ಸ್ಥಳೀಯಾಡಳಿತದ ಅಧಿಕಾರಿಗಳು ಈ ಶಿಫಾರಸುಗಳನ್ನು ತಕ್ಷಣವೇ ಅನುಷ್ಠಾನಗೊಳಿಸಬೇಕೆಂದು ಗೊಟ್ಟಿಗೆರೆ ನಿವಾಸಿಗಳು ಬಯಸಿದ್ದಾರೆ. ಗೊಟ್ಟಿಗೆರೆ ಕೆರೆಯನ್ನು ರಕ್ಷಿಸುವ ಸಲುವಾಗಿ ನೈಸ್ ಎಕ್ಸ್ ಪ್ರೆಸ್ ವೇಯ ಮಾರ್ಗ ಬದಲಾಯಿಸಲು ತ್ವರಿತವಾಗಿ ಕಾರ್ಯ ಕೈಗೊಂಡಿದ್ದ ಪರಿಸರ ಸಂಘಟನೆಗಳು ಹಾಗೂ ಎನ್ ಜಿಒಗಳು ಈಗ ಗೊಟ್ಟಿಗೆರೆ ಕೆರೆಯ ಸ್ವರೂಪವನ್ನು ಹಾಗೆಯೇ ಉಳಿಸಿಕೊಳ್ಳುವ ಈ ವಿಷಯದಲ್ಲೂ ಹೋರಾಡಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ. (ಒನ್ಇಂಡಿಯಾ ಕನ್ನಡ)












Click it and Unblock the Notifications