ಗೌರಿ ಹತ್ಯೆ, ನಾರಾಯಣ ಗೌಡ ಹಾಗೂ ಜ್ಯೋತಿಷಿ ದ್ವಾರಕಾನಾಥ್ ವಿಚಾರಣೆ
ಬೆಂಗಳೂರು, ಸೆಪ್ಟೆಂಬರ್ 20: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ 'ಅಗ್ನಿ' ಶ್ರೀಧರ್ ರನ್ನು ಪ್ರಶ್ನೆ ಮಾಡಲಾಗಿದೆ ಎಂಬ ಸುದ್ದಿಗೆ ಮತ್ತಷ್ಟು ಹೆಸರುಗಳು ಸೇರ್ಪಡೆಯಾಗುತ್ತಿವೆ. ಜಯ ಕರ್ನಾಟಕ ಸಂಘಟನೆಯ ಸ್ಥಾಪಕ ಮುತ್ತಪ್ಪ ರೈ ಆಯಿತು. ಇದೀಗ ಕರವೇ ಅಧ್ಯಕ್ಷ ನಾರಾಯಣ ಗೌಡ ಅವರನ್ನು ಪ್ರಶ್ನೆ ಮಾಡಲಾಗಿದೆ. ಜ್ಯೋತಿಷಿ ದ್ವಾರಕಾನಾಥ್ ಅವರನ್ನು ಕೂಡ ಎಸ್ ಐಟಿ ಪ್ರಶ್ನೆ ಮಾಡಿದೆ.
ಗೌರಿ ಲಂಕೇಶ್ ಹತ್ಯೆ: ಅಗ್ನಿ ಶ್ರೀಧರ್, ಮುತ್ತಪ್ಪ ರೈ ಹೇಳಿಕೆ ದಾಖಲು
ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆಯ ಕೈಗಳು ಎಲ್ಲೆಲ್ಲೂ ಚಾಚುತ್ತಿವೆ. ಹತ್ಯೆಗೆ ಇರಬಹುದಾದ ಎಲ್ಲ ಆಯಾಮಗಳಿಂದಲೂ ತನಿಖೆ ನಡೆಯುತ್ತಿವೆ ಎಂಬುದಕ್ಕೆ ಉದಾಹರಣೆಗಳು ಸಿಕ್ಕುತ್ತಿವೆ. ಗೌರಿ ಲಂಕೇಶ್ ಪತ್ರಿಕೆಯಲ್ಲಿ ಯಾರ್ಯಾರ ವಿರುದ್ಧ ಲೇಖನಗಳನ್ನು ಬರೆದಿದ್ದರು ಹಾಗೂ ಯಾರು ಗೌರಿ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕಿದ್ದರು ಅಂಥವರ ವಿಚಾರಣೆಗೆ ಎಸ್ ಐಟಿ ಮುಂದಾಗಿದೆ.
ಸೆಪ್ಟೆಂಬರ್ ಐದರಂದು ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿರುವ ಮನೆಯ ಬಳಿಯೇ ಗೌರಿ ಲಂಕೇಶ್ ಅವರ ಹತ್ಯೆಯಾಗಿತ್ತು. ಆ ನಂತರ ಪ್ರಕರಣವನು ಸರಕಾರವು ವಿಶೇಷ ತನಿಖಾ ತಂಡಕ್ಕೆ ವಹಿಸಿತ್ತು. ತೀವ್ರ ಗತಿಯಲ್ಲಿ ತನಿಖೆ ಪ್ರಗತಿಯಲ್ಲಿದೆ.
ದೀರ್ಘ ವಿಚಾರಣೆಯ ನಂತರ ಜ್ಯೋತಿಷಿ ದ್ವಾರಕಾ ನಾಥ್, ನನಗೆ ಗೌರಿ ಅವರ ಮೇಲೆ ಯಾವುದೇ ವೈಯಕ್ತಿಕ ದ್ವೇಷ ಇರಲಿಲ್ಲ ಎಂದು ತಿಳಿಸಿದ್ದಾರೆ ಎಂಬುದಾಗಿ ಮಾಧ್ಯಮಗಳು ವರದಿ ಮಾಡಿವೆ. ಉಳಿದವರು ಸಹ ಇದೇ ರೀತಿಯ ಮಾತುಗಳನ್ನು ಆಡಿದ್ದಾರೆ.