ಬೆಂಗಳೂರು ಬಿಲ್ಡರ್ ಕೊಲೆ ಪ್ರಕರಣ: ಭೂಗತಪಾತಕಿ ರವಿ ಪೂಜಾರಿ ಖುಲಾಸೆ
ಬೆಂಗಳೂರು, ಆಗಸ್ಟ್ 22: ಇಪ್ಪತ್ತು ವರ್ಷಗಳ ಹಿಂದಿನ ಕೊಲೆ ಪ್ರಕರಣದಲ್ಲಿ ಭೂಗತಪಾತಕಿ ರವಿ ಪೂಜಾರಿ ಖುಲಾಸೆಗೊಂಡಿದ್ದಾರೆ. 2001ರಲ್ಲಿ ಬೆಂಗಳೂರಿನ ಸುಬ್ಬರಾಜು ಎಂಬ ಬಿಲ್ಡರ್ ಕೊಲೆಯಾಗಿತ್ತು. ಈ ಪ್ರಕರಣದಲ್ಲಿ ರವಿ ಪೂಜಾರಿ ಆರೋಪಿಯಾಗಿದ್ದರು. ಇದೀಗ ವಿಶೇಷ ನ್ಯಾಯಾಲಯವೊಂದು ಸಾಕ್ಷ್ಯಾಧಾರ ಕೊರತೆಯಿಂದ ರವಿ ಪೂಜಾರಿಯನ್ನು ಖುಲಾಸೆಗೊಳಿಸಿ ತೀರ್ಪು ನೀಡಿದೆ.
ಆಗಸ್ಟ್ 18ರಂದು ವಿಶೇಷ ಕೋರ್ಟ್ ನ್ಯಾಯಾಧೀಶರು ಈ ತೀರ್ಪು ನೀಡಿರುವುದು ತಿಳಿದುಬಂದಿದೆ. "ಬಿಲ್ಡರ್ ಅನ್ನು ಕೊಲ್ಲಲು 2001 ಜನವರಿ 5ಕ್ಕೆ ಮುಂಚೆ ರವಿ ಪೂಜಾರಿ ಮತ್ತಿತರ ಆರೋಪಿಗಳು ಸಂಚು ರೂಪಿಸಿದ್ದರು ಎನ್ನುವುದಕ್ಕೆ ಸೂಕ್ತ ಸಾಕ್ಷ್ಯಾಧಾರ ಇಲ್ಲ" ಎಂದು ನ್ಯಾಯಾಧೀಶರು ತಮ್ಮ ತೀರ್ಪಿನಲ್ಲಿ ತಿಳಿಸಿದ್ದಾರೆ.
'ಆಕಸ್ಮಿಕ' ಸಿನಿಮಾ ನೆನಪು ಮಾಡುವಂತ ಕೃತ್ಯ ಬೆಂಗಳೂರಿನಲ್ಲಿ!
2001, ಜನವರಿ 5ರಂದು ಬಿಲ್ಡರ್ ಸುಬ್ಬರಾಜು ಅವರನ್ನು ಶೇಷಾಧ್ರಿಪುರಂನ ಅವರ ಕಚೇರಿಯಲ್ಲೇ ಕೊಲೆ ಮಾಡಲಾಗಿತ್ತು. ಸುಬ್ಬರಾಜು ಅವರ ಇಬ್ಬರು ಮಕ್ಕಳ ಕಣ್ಣೆದುರೇ ಆ ಘಟನೆ ನಡೆದುಹೋಗಿತ್ತು.
ಬೆಂಗಳೂರಿನಲ್ಲಿ ಪ್ರತಿಷ್ಠಿತ ಪ್ರದೇಶದಲ್ಲಿ ಸುಬ್ಬರಾಜು ಆಸ್ತಿ ಕೊಳ್ಳಲು ಮುಂದಾಗಿದ್ದರು. ದುಬೈನಿಂದಲೇ ಆಗ ಬೆಂಗಳೂರಿನ ಭೂಗತಲೋಕ ಆಳುತ್ತಿದ್ದ ಮುತ್ತಪ್ಪ ರೈ ಅವರಿಂದ ಸುಬ್ಬರಾಜುಗೆ ಬೆದರಿಕೆ ಇತ್ತೆನ್ನಲಾಗಿದೆ. ರವಿ ಪೂಜಾರಿ ಮತ್ತಿತರರನ್ನು ಬಳಸಿ ಮುತ್ತಪ್ಪ ರೈ ಸುಬ್ಬರಾಜುವಿನ ಹತ್ಯೆ ಮಾಡಿಸಿದ್ದ ಎಂಬ ಆರೋಪ ಇದೆ.
ರವಿ ಪೂಜಾರಿ ಇತರ ಏಳು ಮಂದಿ ಜೊತೆ ಸೇರಿ ಸುಬ್ಬರಾಜು ಹತ್ಯೆಗೆ ಸ್ಕೆಚ್ ಹಾಕಿದ್ದ. ಯೂಸುಫ್ ಬಚಕಾನ ಮತ್ತು ನಿತಿನ್ ಸಾವಂತ್ ಎಂಬಿಬ್ಬರು ಶೂಟರ್ಗಳನ್ನು ನೇಮಿಸಲಾಗಿತ್ತು. ಈ ಇಬ್ಬರು ಶೂಟರ್ಗಳಿಗೆ ಹವಾಲಾ ಜಾಲದ ಮೂಲಕ ಗಿಫ್ಟ್ ಪ್ಯಾಕೆಟ್ನೊಳಗೆ 0.9 ಎಂಎಂ ಪಿಸ್ತೂಲು ಮತ್ತು 0.38 ರಿವಾಲ್ವರ್ ಹಾಗು ಗುಂಡುಗಳನ್ನು ರವಿ ಪೂಜಾರಿ ಪೂರೈಸಿದ್ದ ಎಂದು ಆರೋಪಿಸಲಾಗಿತ್ತು.
ಬೆಂಗಳೂರಿನಲ್ಲಿ ಹೃದಯ ವಿದ್ರಾವಕ ಘಟನೆ- ಕ್ಯಾನ್ಸರ್ಗೆ ಹೆದರಿ ಕುಟುಂಬವೇ ಆತ್ಮಹತ್ಯೆ!
ಈ ಹಿಂದೆ ನಡೆದ ವಿಚಾರಣೆ ವೇಳೆ ಮುತ್ತಪ್ಪ ರೈ ಹಾಗೂ ಇತರ ನಾಲ್ವರನ್ನು ಸಾಕ್ಷ್ಯಾಧಾರ ಕೊರತೆಯಿಂದ ಕೋರ್ಟ್ ಖುಲಾಸೆಗೊಳಿಸಿತ್ತು. ಈ ಪ್ರಕರಣದಲ್ಲಿ ಶೂಟರ್ ಯೂಸುಫ್ ಬಚಕಾನಗೆ ಮಾತ್ರ ಶಿಕ್ಷೆಯಾಗಿದ್ದು, ಆತನಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.
ತಪ್ಪೊಪ್ಪಿಗೆ
ಸಾಕಾಗುವುದಿಲ್ಲ:
ಸುಬ್ಬರಾಜು
ಹತ್ಯೆ
ಪ್ರಕರಣದಲ್ಲಿ
ಕ್ರಿಮಿನಲ್
ಸಂಚು,
ಕೊಲೆ
ಸಂಚು,
ಕೊಲೆಯತ್ನ
ಮತ್ತು
ಶಸ್ತ್ರಾಸ್ತ್ರ
ಕಾಯ್ದೆ
ಅಡಿ
ರವಿ
ಪೂಜಾರಿ
ಮೇಲೆ
ಆರೋಪ
ದಾಖಲಾಗಿದ್ದವು.
ಕೋರ್ಟ್
ಮುಂದೆ
ಪೊಲೀಸರು
14
ಸಾಕ್ಷಿಗಳನ್ನು
ಮತ್ತು
78
ದಾಖಲೆಗಳನ್ನು
ಒದಗಿಸಿದ್ದರು.
2020 ಮಾರ್ಚ್ 10ರಂದು ವೈಯಾಲಿಕಾವಲ್ ಪೊಲೀಸ್ ಇನ್ಸ್ಪೆಕ್ಟರ್ ಯೋಗೇಂದ್ರ ಕುಮಾರ್ ಅವರು ರವಿ ಪೂಜಾರಿ ಪೊಲೀಸ್ ಕಸ್ಟಡಿಯಲ್ಲಿದ್ದಾಗ ನೀಡಿದ್ದ ತಪ್ಪೊಪ್ಪಿಗೆ ಹೇಳಿಕೆಯನ್ನು ದಾಖಲಿಸಿದ್ದರು. ಅದನ್ನು ಸಾಕ್ಷಿಯಾಗಿ ಕೋರ್ಟ್ಗೆ ನೀಡಲಾಗಿತ್ತು. ಆದರೆ, ಪೊಲೀಸರಿಗೆ ನೀಡಿದ್ದ ತಪ್ಪೊಪ್ಪಿಗೆಯು ಕೋರ್ಟ್ನಲ್ಲಿ ಸಾಕ್ಷಿ ಎಂದು ಪರಿಗಣಿಸಬಾರದು ಎಂದು ಪೂಜಾರಿ ಪರ ವಕೀಲರು ವಾದಿಸಿದ್ದರು.
ಭಾರತದಲ್ಲಿ ವಿವಿಧ ಪ್ರಕರಣಗಳಲ್ಲಿ ಬೇಕಾಗಿರುವ ರವಿ ಪೂಜಾರಿ ಅವರನ್ನು 2020ರಲ್ಲಿ ಸೆನೆಗಲ್ ದೇಶದಿಂದ ಭಾರತಕ್ಕೆ ಕರೆತರಲಾಗಿದೆ.
(ಒನ್ಇಂಡಿಯಾ ಸುದ್ದಿ)
Recommended Video