Ganesh Chaturthi 2023: ಗಣೇಶ ಚತುರ್ಥಿಯಂದು ಬೆಂಗಳೂರಲ್ಲಿ ಮಾಂಸ ಮಾರಾಟ ನಿಷೇಧ- ಮಾಹಿತಿ, ವಿವರ
ಬೆಂಗಳೂರು, ಸೆಪ್ಟೆಂಬರ್ 18: ಇಂದು ನಗರದಾದ್ಯಂತ ಗಣೇಶ ಚತುರ್ಥಿಯನ್ನು ಆಚರಿಸುತ್ತಿರುವ ಹಿನ್ನೆಲೆಯಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮಾಂಸ ಮಾರಾಟ ಮತ್ತು ಪ್ರಾಣಿ ಹತ್ಯೆಯನ್ನು ನಿಷೇಧಿಸಿದೆ. ಬಿಬಿಎಂಪಿಯ ಪ್ರಾಣಿ ಸಲಹಾ ಮಂಡಳಿಯು ಎಲ್ಲಾ ಮಾಂಸದ ಅಂಗಡಿ ಮಾಲೀಕರಿಗೆ ಮಾರ್ಗಸೂಚಿಗಳನ್ನು ನೀಡಿದೆ.
ನಗರದಾದ್ಯಂತ ಗಣೇಶ ಉತ್ಸವವನ್ನು ಆಯೋಜಿಸುವವರಿಗೆ ನಿಯಮಗಳ ಪಟ್ಟಿಯನ್ನು ಬಿಬಿಎಂಪಿ ನೀಡಿದೆ. ಗಣೇಶ ಉತ್ಸವಗಳನ್ನು ನಡೆಸಲು ಬಯಸುವ ಸಂಘಟಕರು ಈ ನಿಯಮಗಳನ್ನು ಪಾಲಿಸಲೇಬೇಕೆಂದು ಬಿಬಿಎಂಪಿ ತಿಳಿಸಿದೆ. ಬೆಂಗಳೂರಿನಲ್ಲಿ 60 ಕ್ಕೂ ಹೆಚ್ಚು ವಿಂಡೋ ಕ್ಲಿಯರೆನ್ಸ್ ಕೇಂದ್ರಗಳಿಗೆ ಪರವಾನಗಿಗಳನ್ನು ನೀಡಲಾಗಿದೆ.

ಪ್ಲಾಸ್ಟರ್ ಆಫ್ ಪ್ಯಾರಿಸ್ನಿಂದ (ಪಿಒಪಿ) ತಯಾರಿಸಿದ ಗಣೇಶ ಮೂರ್ತಿಗಳ ಮಾರಾಟ ಮತ್ತು ತಯಾರಿಕೆಗೆ ಬಿಬಿಎಂಪಿ ಈಗಾಗಲೇ ಕಟ್ಟುನಿಟ್ಟಿನ ನಿಷೇಧ ಹೇರಿದೆ. ನಿಯಮಗಳನ್ನು ಉಲ್ಲಂಘಿಸಿದರೆ ತಯಾರಕರಿಗೆ ಭಾರಿ ದಂಡವನ್ನು ವಿಧಿಸಲಾಗುತ್ತದೆ ಎಂದು ಅದು ಹೇಳಿದೆ.
ನಗರದ ವಿವಿಧೆಡೆ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗುತ್ತಿದ್ದು, ರಸ್ತೆಗಳಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳಲು ಬಿಬಿಎಂಪಿ ನಿರ್ದೇಶನ ನೀಡಿದೆ.
ಪರಿಸರ ಸ್ನೇಹಿಯಾಗಿ ಉತ್ಸವ ನಡೆಯುವಂತೆ ನೋಡಿಕೊಳ್ಳಲಾಗುವುದು. ಆಚರಣೆಗಳ ಮಾರ್ಗಸೂಚಿಗಳನ್ನು ಉಲ್ಲಂಘಿಸಿದರೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಬಿಬಿಎಂಪಿ ತಿಳಿಸಿದೆ. ದೇಣಿಗೆ ಹೆಸರಿನಲ್ಲಿ ಜನರಿಂದ ಬಲವಂತವಾಗಿ ಹಣ ವಸೂಲಿ ಮಾಡದಂತೆ ಸಂಘಟಕರಿಗೆ ಆದೇಶ ನೀಡಲಾಗಿದೆ.
ಹಬ್ಬದ ಸಂದರ್ಭದಲ್ಲಿ ನಗರದಾದ್ಯಂತ ಬ್ಯಾನರ್ ಮತ್ತು ಫ್ಲೆಕ್ಸ್ಗಳಿಗೆ ಕಟ್ಟುನಿಟ್ಟಾದ ನಿಷೇಧವನ್ನು ವಿಧಿಸಿದೆ. ಬೆಂಗಳೂರಿನಲ್ಲಿ ಈಗಾಗಲೇ ಅನಧಿಕೃತ ಫ್ಲೆಕ್ಸ್ಗಳು, ಬ್ಯಾನರ್ಗಳು ಮತ್ತು ಹೋರ್ಡಿಂಗ್ಗಳನ್ನು ನಿಷೇಧಿಸಲಾಗಿದೆ.
ಸ್ಯಾಂಕಿ ಕೆರೆ, ಹಲಸೂರು ಕೆರೆ, ಯಡಿಯೂರು ಕೆರೆ, ಅಗರ ಕೆರೆ, ಹೆಬ್ಬಾಳ ಕೆರೆಗಳಲ್ಲಿ ವಿಗ್ರಹಗಳ ವಿಸರ್ಜನೆಗೆ ವಿಶೇಷ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ಹಂಚಿಕೊಂಡಿದ್ದಾರೆ.












Click it and Unblock the Notifications