ಗಾಂಧಿ ಹತ್ಯೆ : ರಾಹುಲ್ ವಿರುದ್ಧ ಆರೆಸ್ಸೆಸ್ ದೂರು
ಬೆಂಗಳೂರು, ಮಾ. 8 : ಮಹಾತ್ಮಾ ಗಾಂಧಿಯನ್ನು ಹತ್ಯೆ ಮಾಡಿದ್ದು ರಾಷ್ಟ್ರೀಯ ಸ್ವಯಂ ಸೇವಕರು ಎಂದು ಹೇಳಿ ವಿವಾದದ ಗೂಡಿಗೆ ಕಲ್ಲೆಸೆದಿದ್ದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಆರೆಸ್ಸೆಸ್ ಧುರೀಣ ರಾಮ್ ಮಾಧವ್ ಅವರು ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ.
ಬೆಂಗಳೂರಿನ ಕೆಆರ್ ವೃತ್ತದಲ್ಲಿರುವ ಕರ್ನಾಟಕ ಚುನಾವಣಾ ಆಯೋಗದ ಕಚೇರಿಗೆ, ಮತ್ತಿಬ್ಬರು ಹಿರಿಯ ನಾಯಕರೊಡನೆ ಶುಕ್ರವಾರ ಭೇಟಿ ನೀಡಿದ ಆರೆಸ್ಸೆಸ್ ಅಖಿಲ ಭಾರತೀಯ ಷಾ ಸಂಪರ್ಕ ಪ್ರಮುಖ ರಾಮ್ ಮಾಧವ್ ಅವರು, ಚುನಾವಣಾಯುಕ್ತ ಅನಿಲ್ ಕುಮಾರ್ ಝಾ ಅವರಿಗೆ ದೂರಿನ ಪತ್ರವನ್ನು ನೀಡಿದರು.
ಮಹಾರಾಷ್ಟ್ರದ ಠಾಣೆ ಜಿಲ್ಲೆಯ ಭಿವಂಡಿ ಬಳಿಯ ಸೋನಾಲೆ ಗ್ರಾಮದಲ್ಲಿ ಮಾ.6ರಂದು ನಡೆಸಿದ ಬಹಿರಂಗ ಸಭೆಯಲ್ಲಿ ರಾಹುಲ್ ಗಾಂಧಿ ಅವರು, "ಆರೆಸ್ಸೆಸ್ ಜನರು ಮಹಾತ್ಮಾ ಗಾಂಧಿಯನ್ನು ಗುಂಡಿಕ್ಕಿ ಕೊಂಡಿದ್ದರು. ಈಗ ಅವರ ಜನರೇ ಆಗಿರುವ ಬಿಜೆಪಿಯವರು ಗಾಂಧಿ ಬಗ್ಗೆ ಮಾತನಾಡುತ್ತಿದ್ದಾರೆ. ಕಾಂಗ್ರೆಸ್ ನಾಯಕರಾಗಿದ್ದ ಸರ್ದಾರ್ ವಲ್ಲಭ್ ಭಾಯಿ ಪಟೇಲ್ ನಮ್ಮ ನಾಯಕರೆಂದು ಹೇಳಿಕೊಳ್ಳುತ್ತಿದ್ದಾರೆ" ಎಂದು ಮಾತಿನ ಗುಂಡು ಸಿಡಿಸಿದ್ದರು.
ಪತ್ರದ ಮುಖ್ಯಾಂಶಗಳು ಕೆಳಗಿನಂತಿವೆ.
* ರಾಹುಲ್ ಗಾಂಧಿ ಅವರು ಆರೆಸ್ಸೆಸ್ ವಿರುದ್ಧ ಇನ್ನೂ ಅನೇಕ ಅನವಶ್ಯಕ ಸುಳ್ಳು ಮತ್ತು ಪರಿಶೀಲನೆ ಮಾಡದ ಆರೋಪಗಳನ್ನು ಮಾಡಿದೆ.
* ರಾಹುಲ್ ಭಾಷಣದ ವಿಡಿಯೋ ಕ್ಲಿಪ್ಪಿಂಗ್ ಗಳನ್ನು ಮತ್ತು ಹಲವಾರು ಪತ್ರಿಕೆಗಳಲ್ಲಿ ಪ್ರಕಟವಾದ ಅವರ ಭಾಷಣದ ಪ್ರತಿಗಳನ್ನು ಪತ್ರದೊಡನೆ ಲಗತ್ತಿಸಲಾಗಿದೆ.
* ಮುಸ್ಲಿಂರೇ ಬಹುಸಂಖ್ಯಾತರಾಗಿರುವ ಭಿವಂಡಿಯಲ್ಲಿ ಆರೆಸ್ಸೆಸ್ ಗಾಂಧೀಜಿಯನ್ನು ಕೊಂದಿದ್ದಾರೆಂದು ಹೇಳಿ, ಹಿಂದೂ ಮತ್ತು ಮುಸ್ಲಿಂ ನಡುವೆ ದ್ವೇಷ ಬಿತ್ತುವಂತೆ ಮಾಡಿದ್ದಾರೆ.
* ಮಾತ್ಸರ್ಯದ ಮತ್ತು ರಾಜಕೀಯ ಪ್ರೇರಿತ ಸುಳ್ಳು ಮಾತುಗಳನ್ನಾಡಿ ರಾಹುಲ್ ಗಾಂಧಿ ಅವರು ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಾರೆ.
* ರಾಹುಲ್ ಗಾಂಧಿ ವಿರುದ್ಧ ಕಾನೂನು ರೀತಿಯಲ್ಲಿ ಕ್ರಮ ತೆಗೆದುಕೊಳ್ಳಬೇಕು ಮತ್ತು ಮುಂದೆ ಈ ರೀತಿಯಾಗದಂತೆ ಎಚ್ಚರಿಕೆ ನೀಡಬೇಕೆಂದು ವಿನಂತಿ.