ವಿಧಾನಸೌಧ ಬಳಿ ಗಾಂಧಿ ಪ್ರತಿಮೆ ಗುರುವಾರ ಲೋಕಾರ್ಪಣೆ
ಬೆಂಗಳೂರು, ಅ.1 : ವಿಧಾನಸೌಧ ಮತ್ತು ವಿಕಾಸಸೌಧದ ನಡುವೆ ನಿರ್ಮಿಸಿರುವ ಧ್ಯಾನಾಸಕ್ತ ಮಹಾತ್ಮ ಗಾಂಧಿ ಪ್ರತಿಮೆಯ ಲೋಕಾರ್ಪಣೆ ಗುರುವಾರ ನಡೆಯಲಿದೆ. 11 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಗಾಂಧಿ ಪ್ರತಿಮೆಯ ಉದ್ಘಾಟನಾ ಸಮಾರಂಭ ನೋಡಲು ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿದೆ.
ಅ.2ರ ಗುರುವಾರ ಗಾಂಧಿ ಪ್ರತಿಮೆ ಬಳಿ ನಡೆಯುವ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತಿಮೆಯನ್ನು ಲೋಕಾರ್ಪಣೆ ಮಾಡಲಿದ್ದಾರೆ. ವಿಧಾನಪರಿಷತ್ ಸಭಾಪತಿ ಡಿ.ಎಚ್.ಶಂಕರಮೂರ್ತಿ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಲಿದ್ದು, ಸ್ಪೀಕರ್ ಕಾಗೋಡು ತಿಮ್ಮಪ್ಪ, ಕಾನೂನು ಸಚಿವ ಟಿ.ಬಿ.ಜಯಚಂದ್ರ, ಲೋಕೋಪಯೋಗಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ವಿಧಾನ ಪರಿಷತ್ತಿನ ಉಪ ಸಭಾಪತಿ ಪುಟ್ಟಣ್ಣ ಮುಂತಾದವರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

13 ಅಡಿ ಎತ್ತರದ ಪೀಠದ ಮೇಲೆ 27 ಅಡಿ ಎತ್ತರದ ಗಾಂಧೀಜಿಯವರ ಕಂಚಿನ ಪ್ರತಿಮೆಯನ್ನು ನಿರ್ಮಾಣ ಮಾಡಲಾಗಿದ್ದು, ದೆಹಲಿಯ ಸಂಸತ್ ಭವನದಲ್ಲಿರುವ ಗಾಂಧಿ ಪ್ರತಿಮೆಯ ಪ್ರತಿಕೃತಿ ಇದಾಗಿದೆ. ಸಂಸತ್ ಭವನದಲ್ಲಿ ಪ್ರತಿಮೆ ನಿರ್ಮಿಸಿದ ದೆಹಲಿ ಮೂಲದ ಸುತಾರ್ ಆರ್ಟ್ಸ್ ಕಂಪನಿ ಇಲ್ಲಿಯೂ ಪ್ರತಿಮೆ ನಿರ್ಮಾಣ ಮಾಡಿದೆ. [ವಿಧಾನಸೌಧ ಬಳಿ ಗಾಂಧಿ ಪ್ರತಿಮೆ ನಿರ್ಮಾಣ]
ಈಗಾಗಲೇ ಆಂಧ್ರಪ್ರದೇಶ, ಗುಜರಾತ್ ರಾಜ್ಯಗಳ ವಿಧಾನಮಂಡಲ ಆವರಣದಲ್ಲಿ ಧ್ಯಾನಾಸಕ್ತ ಗಾಂಧಿ ಪ್ರತಿಮೆ ಅನಾವರಣಗೊಳಿಸಲಾಗಿದೆ. ಅದೇ ರೀತಿಯ ಪ್ರತಿಮೆಯನ್ನು ವಿಧಾನಸೌಧ-ವಿಕಾಸಸೌಧ ನಡುವೆ ಸ್ಥಾಪಿಸಬೇಕು ಎಂದು 2011 ರಲ್ಲಿ ಪ್ರಸ್ತಾಪಿಸಲಾಗಿತ್ತು. ಸದ್ಯ ಪ್ರತಿಮೆ ನಿರ್ಮಾಣವಾಗಿದ್ದು, ಉದ್ಘಾಟನೆಗೆ ಸಜ್ಜಾಗಿದೆ.












Click it and Unblock the Notifications