ಗಮಕ ಕಲಾರತ್ನ ಜಯರಾಮರಾವ್ ಆತ್ಮಕಥನ ಲೋಕಾರ್ಪಣೆ
ಭೂಮಿಯಲ್ಲಿ ಅವತರಿಸುವ ಬದುಕು ಬಾಳುವೆಯ ಮಧ್ಯೆ ಹಾಸುಹೊಕ್ಕಾಗುವ ಅಂಶಗಳು, ಸಮತೂಕದ ಚಿಂತನ-ಮಂಥನದ ಮೂಲಕ ತನ್ನದೇ ಛಾಪನ್ನು ಜಗತ್ತಿನ ಅಸ್ತಿತ್ವದಲ್ಲಿ ಮೂಡಿಸುತ್ತಾ... ಕಥೆಯಾಗಬಹುದು-ಕಾವ್ಯವಾಗಬಹುದು! ಭೂತವು ವರ್ತಮಾನದ ಬದುಕಿನ ಪುಟಗಳಲ್ಲಿ ಇಣುಕಿ ನೋಡುವಾಗ...ಭವಿಷ್ಯತ್ತಿಗೊಂದು ಆತ್ಮಕಥನವಾಗಿ ಮರುಹುಟ್ಟು ಪಡೆದುಕೊಳ್ಳಬಹುದು!
ಹಿರಿಯರ ಅನುಭವಗಳು ಕಿರಿಯರ ಬಾಳಿನ ಪಥಕ್ಕೊಂದು ಆಶಾಕಿರಣವಾಗಬಹುದು. ಆಗಲೇ ಬದುಕಿಗೂ ಒಂದು 'ಸಾರ್ಥ-ಕತೆ' ಮಡಿಕೇರಿಯಲ್ಲಿನ ಬಾಲ್ಯ, ಕನ್ನಡದ ಅತಿರಥ ಮಹಾರಥ ಸಾಹಿತ್ಯ ದಿಗ್ಗಜರೊಡನೆ ಒಡನಾಟ, ಸಂಗೀತ ವಿದ್ವಾಂಸರಲ್ಲಿ ಪಾಠ, ಗಮಕಕಲೆಯಲ್ಲಿ ಆಸಕ್ತಿ, ತಂದೆ ಗಮಕವಿದ್ವಾನ್ ಶ್ರೀಯುತ ಅನಂತಪದ್ಮನಾಭರಾಯರಲ್ಲಿ ಗಮಕ ಕಲಿಕೆ, ಮಡಿಕೇರಿಯಿಂದ ಮುಂಬಯಿಗೆ ಪಯಣ, ಅಲ್ಲಿ ಶುರುವಾದ ನಾಟಕದ ಗೀಳು, ಮುಂಬೈನಲ್ಲಿ ಭೇಟಿಯಾದ ಹಲವಾರು ಖ್ಯಾತನಾಮರು, ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯಲ್ಲಿನ ಅನುಭವ, ಮದುವೆ, ಬೆಂಗಳೂರಿಗೆ ಹಿಂತಿರುಗಿ ಬಂದದ್ದು, ಕನ್ನಡಪ್ರಭದಲ್ಲಿನ ಕೆಲಸ, ಮಕ್ಕಳು, ಸಂ ಸಾರ ತಾಪತ್ರಯ, ಕಷ್ಟದ-ಸುಖದ ಅನುಭವಗಳು, ಗಮಕಕಲೆ ತಂದುಕೊಟ್ಟ ಹೆಸರು-ಪ್ರಶಸ್ತಿಗಳು....ಹೀಗೆ ತಮ್ಮ ಜೀವನಗಾಥೆಯನ್ನು ಅನಾವರಣಗೊಳಿಸುವ 'ಸಾರ್ಥ-ಕತೆ'ಯನ್ನು ಪುಸ್ತಕರೂಪದಲ್ಲಿ ಬಿಡುಗಡೆಗೊಳಿಸಲಿದ್ದಾರೆ,
81 ರ ಹರೆಯದ ನವಯುವಕ ಗಮಕವಿದ್ವಾನ್, ಕರ್ನಾಟಕ ಕಲಾಶ್ರೀ ಶ್ರೀಯುತ ಎಂ.ಎ. ಜಯರಾಮ್ ರಾವ್! ವೃತ್ತಿಯಲ್ಲಿ ಪತ್ರಕರ್ತರಾಗಿ 35 ವರ್ಷಗಳ ಕಾಲ ನಿರಂತರ ಸೇವೆ ಸಲ್ಲಿಸಿ, ಪ್ರವೃತ್ತಿಯಲ್ಲಿ ಗಮಕ, ನಾಟಕ, ಸಂಗೀತ, ಈಜು, ಕ್ರಿಕೆಟ್ ನಲ್ಲೂ ಸಾಧನೆಗೈದವರು ಜಯರಾಮರಾಯರು. ಸಾವಿರಾರು ವಿಮರ್ಶೆಗಳು, ನೂರಾರು ಸಂದರ್ಶನಗಳು, ಸುದೀರ್ಘ ಲೇಖನಗಳು, ಗ್ರಂಥ ಪ್ರಬಂಧಗಳು, ವ್ಯಕ್ತಿ ಪರಿಚಯಗಳು ಅನೇಕ ನಿಯತಕಾಲಿಕೆಗಳಲ್ಲಿ, ಪತ್ರಿಕೆಗಳಲ್ಲಿ, ಪುಸ್ತಕಗಳಾಗಿಯೂ ಪ್ರಕಟಗೊಂಡಿವೆ.
ವಾಚನ-ವ್ಯಾಖ್ಯಾನವನ್ನು ಏಕವ್ಯಕ್ತಿಯಾಗಿ ನಿಭಾಯುಸಬಲ್ಲ ಕೆಲವೇ ಗಮಕಗಳಲ್ಲಿ ಜಯರಾಮರಾಯರು ಅಗ್ರಗ್ರಗಣ್ಯರು. ಆಕಾಶವಾಣಿ, ದೂರದರ್ಶನದಲ್ಲಿ ಬಹಳಷ್ಟು ಕಾರ್ಯಕ್ರಮಗಳು ಪ್ರಸಾರಗೊಂಡಿವೆ. ಮುಂಬೈನಲ್ಲಿ ನಡೆದ ಪ್ರಪ್ರಥಮ ಅಖಿಲ ಭಾರತ ಗಮಕಸಮ್ಮೇಳದ ಅಧ್ಯಕ್ಷರಾದ ಹೆಗ್ಗಳಿಕೆ! ಕರ್ನಾಟಕ ಸಂಗೀತ ನೃತ್ಯ ಅಕಾಡಮಿಯ 'ಕರ್ನಾಟಕ ಕಲಾಶ್ರೀ' ಪ್ರಶಸ್ತಿ ಪುರಸ್ಖೃತರು. ಗಮಕಕಲಾ ಪ್ರವೀಣ, ಗಮಕ ಕಲಾರತ್ನ, ಗಮಕ ಕಲಾವತಂಸ, ನಾದ ಚಿಂತಾಮಣಿ, ಕಾವ್ಯವಾಚನ ಪ್ರವೀಣ, ಸ್ವರಕಲಾವಿದ...ಮುಂತಾದ ಸನ್ಮಾನ, ಗೌರವ, ಬಿರುದಾಂಕಿತರು. ಅನೇಕ ಕಾರ್ಯಕಾರೀ ಸಮಿತಿಗಳ, ಪರಿಷತ್ತುಗಳ, ಮಂಡಲಿಗಳ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ತಮ್ಮೆಲ್ಲಾ ಅನುಭವಗಳ ಅನುಭಾವವದ ಯಶೋಗಾಥೆ 'ಸಾರ್ಥ-ಕತೆ'ಯನ್ನು ನಾಳೆ, ಅಂದರೆ ದಿನಾಂಕ 31 ಡಿಸೆಂಬರ್ 2015 ರಂದು,
ರಾಜಾಜಿನಗರದ ಬೆನಕ ಸಭಾಂಗಣದಲ್ಲಿ ಅನಾವರಣಗೊಳಿಸಲಿದ್ದಾರೆ. ನಾಳೆ(ಡಿಸೆಂಬರ್ 31) ಸಂಜೆ 6 ಗಂಟೆಗೆ ಪ್ರಾರಂಭವಾಗುವ ಈ ಸಮಾರಂಭಕ್ಕೆ ಶ್ರೀ ಶ್ರೀ ಯದುಗಿರಿ ಯತಿರಾಜ ಮಠದ ಶ್ರೀಗಳಾದ ಯತಿರಾಜ ರಾಮಾನುಜ ನಾರಾಯಣ ಜೀಯರ್ ಆಗಮಿಸಲಿದ್ದು, ಗ್ರಂಥವನ್ನು ಲೋಕಾರ್ಪಣೆ ಮಾಡುವರು. ಜ್ಞಾನದೀಪಿಕ ಎಜ್ಯುಕೇಶನ್ ಸಂಸ್ಥೆಯ ಈ ಗ್ರಂಥ ಪ್ರಕಾಶನದ ಜವಾಬ್ದಾರಿಯನ್ನು ಹೊತ್ತಿದ್ದು, ತನ್ನದೇ ಸಂಸ್ಥೆಯ ಅಧ್ಯಕ್ಷರಾದ ರಾಷ್ಟ್ರಪ್ರಶಸ್ತಿ ಪುರಸ್ಕೃತರಾದ ಸನ್ಮಾನ್ಯ ಎಸ್. ಸತ್ಯಪ್ರಕಾಶ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಗ್ರಂಥದ ಕುರಿತಾಗಿ ಪ್ರಸಿದ್ಧ ವ್ಯಾಖ್ಯಾನಕಾರರಾದ ಕರ್ನಾಟಕ ಕಲಾಶ್ರೀ ಡಾ|| ಎ.ವಿ.ಪ್ರಸನ್ನರವರು ಮಾತನಾಡಲಿದ್ದಾರೆ. ಇದೇ ಸಂದರ್ಭದಲ್ಲಿ 'ಸ್ವರಸಂಗಮ' ತಂಡದವರಿಂದ ಗೀತಗುಚ್ಛ ಸಂಗೀತ ಕಾರ್ಯಕ್ರಮವೂ ನಡೆಯಲಿದೆ.