ರೆಡ್ಡಿ ಅರೆಸ್ಟ್, ಸಿದ್ದು ಸರ್ಕಾರ ವಿರುದ್ಧ ಸೋಮಶೇಖರ್ ಗರಂ
ಬೆಂಗಳೂರು, ನ.20: ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಬಂದಿದ್ದ ನನ್ನ ಸೋದರ ಗಾಲಿ ಜನಾರ್ದನ ರೆಡ್ಡಿ ಅವರನ್ನು ಎಸ್ ಐಟಿ ಅವರು ಅನ್ಯಾಯವಾಗಿ ಬಂಧಿಸಿದ್ದಾರೆ. ಇದೆಲ್ಲವೂ ಸಿದ್ದರಾಮಯ್ಯ ಸರ್ಕಾರದ ಮಸಲತ್ತು ಎಂದು ಕೆಎಂಎಫ್ ಮಾಜಿ ಅಧ್ಯಕ್ಷ, ಮಾಜಿ ಶಾಸಕ ಸೋಮಶೇಖರ ರೆಡ್ಡಿ ಪ್ರತಿಕ್ರಿಯಿಸಿದ್ದಾರೆ.
ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗಿದ್ದ ಮಾಜಿ ಪ್ರವಾಸೋದ್ಯಮ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರನ್ನು ಬಂಧಿಸಿ ಕೋರ್ಟಿಗೆ ಹಾಜರುಪಡಿಸಲಾಗಿದೆ. ನ.23 ರ ತನಕ ಎಸ್ ಐಟಿ ವಶಕ್ಕೆ ಲೋಕಾಯುಕ್ತ ವಿಶೇಷ ಕೋರ್ಟ್ ನೀಡಿದೆ.
ಜನಾರ್ದನ ರೆಡ್ಡಿ ಅವರ ವಿರುದ್ಧ ಹೊಸದಾಗಿ ಕೇಸ್ ದಾಖಲಿಸಿಕೊಂಡು ಲೋಕಾಯುಕ್ತ ವಿಶೇಷ ತನಿಖಾ ತಂಡ (ಎಸ್ ಐಟಿ) ಬಂಧನ ಮಾಡಿದೆ.ಈಗಾಗಲೇ 13 ಪ್ರಕರಣಗಳಲ್ಲಿ ಜಾಮೀನು ಪಡೆದುಕೊಂಡಿದ್ದಾರೆ. ಅದರೆ, 13/1 ಎಂದು ಹೊಸ ಕೇಸ್ ದಾಖಲಿಸಿಕೊಂಡು ಬಂಧಿಸಿರುವುದು ಸರಿಯಲ್ಲ. [ಅಕ್ರಮ ಗಣಿಗಾರಿಕೆ : ಗಾಲಿ ಜನಾರ್ದನ ರೆಡ್ಡಿ ಮತ್ತೆ ಅರೆಸ್ಟ್]
ಅಕ್ರಮ ಗಣಿಗಾರಿಕೆ ಹಾಗೂ ಅದಿರು ಅಕ್ರಮ ಸಾಗಾಣೆ ಬಗ್ಗೆ ವಿಚಾರಣೆಗೆ ಹಾಜರಾಗುವಂತೆ ರೆಡ್ಡಿ ಅವರಿಗೆ ಎಸ್ ಐಟಿ ನೋಟಿಸ್ ನೀಡಿತ್ತು. ಎಸ್ ಐಟಿ ನೋಟಿಸ್ ಗೆ ಬೆಲೆ ಕೊಟ್ಟು ವಿಚಾರಣೆ ಬಂದವರನ್ನು ಕಾರಣವಿಲ್ಲದೆ ಬಂಧನ ಮಾಡಲಾಗಿದೆ. ಸಿದ್ದರಾಮಯ್ಯ ಸರ್ಕಾರ ನಮ್ಮ ಕುಟುಂಬದ ಮೇಲೆ ದ್ವೇಷದ ರಾಜಕೀಯ ಮಾಡುತ್ತಿದೆ. ನಮ್ಮ ಸೋದರ ಪ್ರಶಾಂತ ಜೀವನ ನಡೆಸಲು ಬಿಡುತ್ತಿಲ್ಲ. ಅನಗತ್ಯವಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ಸೋಮಶೇಖರ್ ರೆಡ್ಡಿ ಕಿಡಿಕಾರಿದ್ದಾರೆ.

ಸುಮಾರು ಎರಡು ವರ್ಷಕ್ಕೂ ಅಧಿಕ ಕಾಲ ಜೈಲಿನಲ್ಲೇ ಕಾಲದೂಡಿದ್ದ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರು ಕಪ್ಪು ಪಟ್ಟಿಗೆ ಸೇರಿರುವ ಕಂಪನಿಯ ಮೂಲಕ ಅಕ್ರಮ ಗಣಿಗಾರಿಕೆ, ಅದಿರು ರಫ್ತು ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಎಸ್ ಐಟಿ ತಂಡ ಐಪಿಸಿ ಸೆಕ್ಷನ್ 407, 420 ಸೇರಿದಂತೆ ವಿವಿಧ ಸೆಕ್ಷನ್ ಗಳಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದೆ. ಎಫ್ ಐಆರ್ ಹಾಕಿರುವ ಬಗ್ಗೆ ಇನ್ನೂ ಮಾಹಿತಿ ಬಂದಿಲ್ಲ, ಸದ್ಯಕ್ಕೆ ವಿಚಾರಣೆ ನಡೆಯುತ್ತಿದೆ.
ಅಕ್ರಮ ಗಣಿಗಾರಿಕೆ ಹಾಗೂ ಅದಿರು ಅಕ್ರಮ ಸಾಗಾಣೆ ಬಗ್ಗೆ ವಿಚಾರಣೆಗೆ ಹಾಜರಾಗುವಂತೆ ರೆಡ್ಡಿ ಅವರಿಗೆ ಎಸ್ ಐಟಿ ನೋಟಿಸ್ ನೀಡಿತ್ತು. ಗಾಲಿ ರೆಡ್ಡಿ ಅವರು ಶುಕ್ರವಾರ ಬೆಳಗ್ಗೆ ಬೆಂಗಳೂರಿನ ಎಸ್ಐಟಿ ಕಚೇರಿಗೆ ಆಗಮಿಸಿ ವಿಚಾರಣೆಗೆ ಹಾಜರಾಗಿದ್ದರು. ಇತ್ತೀಚೆಗೆ ಗಾಲಿ ರೆಡ್ಡಿ ಅವರ ಆಪ್ತ ಮಧು ಕುಮಾರ್ ವರ್ಮ ಅವರನ್ನು ಬಂಧಿಸಿದ್ದ ಎಸ್ ಐಟಿ ಗುರುವಾರ ಕೋರ್ಟಿಗೆ ಹಾಜರುಪಡಿಸಿತ್ತು.
ಗಾಲಿ ರೆಡ್ಡಿ ಅವರ ವಿಚಾರಣೆ ನಡೆಸುವುದಕ್ಕೂ ಮುನ್ನ ಬಳ್ಳಾರಿ, ಬೆಂಗಳೂರಿನ 14 ಕಡೆಗಳಲ್ಲಿ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಹಲವಾರು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದರು.












Click it and Unblock the Notifications