ಶೂನ್ಯ ಬಂಡವಾಳದಲ್ಲಿ ಕಾವ್ಯ ಕೃಷಿ ಅಪ್ಲಿಕೇಷನ್
ಬೆಂಗಳೂರು, ಅ.16: ಕವಿತೆ ಯಾರ್ ಕೊಳ್ತಾರೆ? ಯಾರು ಕೇಳ್ತಾರೆ ಎಂಬ ಕಾಲದಲ್ಲಿ ಬ್ಲಾಗ್, ಫೇಸ್ಬುಕ್ ನಲ್ಲಿ ಕವಿತೆಗಳನ್ನು ಪ್ರಕಟಿಸಿ ಹೊಸ ಕ್ರಾಂತಿ ಮಾಡಿದ ಉತ್ಸಾಹಿಗಳ ಗುಂಪೊಂದು ಈಗ ಮತ್ತೊಂದು ಹೆಜ್ಜೆ ಮುಂದಿಟ್ಟಿದೆ. ಕನ್ನಡ ಕವಿತೆಗಳಿಗಾಗಿ ಪ್ರತ್ಯೇಕ ಆಂಡ್ರಾಯ್ಡ್ ಅಪ್ಲಿಕೇಷನ್ ರಚಿಸಲಾಗಿದ್ದು, ಶೂನ್ಯ ಬಂಡವಾಳ ಹಾಕಿ ತಂತ್ರಜ್ಞಾನ ಬಳಕೆ ಮಾಡಿ ಕಾವ್ಯ ಕೃಷಿ ಮಾಡುವ ಹುಮ್ಮಸ್ಸಿನಲ್ಲಿ ವಿದ್ಯಾಶಂಕರ್ ಹರಪನಹಳ್ಳಿ ಹಾಗೂ ತಂಡವಿದೆ. ತಮ್ಮ ಈ ಯೋಜನೆಯ ಆಶಯವನ್ನು ಹೀಗೆ ಬರೆದುಕೊಂಡಿದ್ದಾರೆ.
ಕನ್ನಡ ಕಾವ್ಯ ಭವ್ಯ ಪರಂಪರೆಯ ಬಗ್ಗೆ ಹೇಳುವುದೇ ಬೇಡ, ಅಷ್ಟು ವಿಶಾಲ ಮತ್ತು ಸಮೃದ್ಧವಾಗಿದೆ. ಹಳೆಗನ್ನಡ, ನಡುಗನ್ನಡ ಮತ್ತು ಹೊಸ ಕನ್ನಡದಲ್ಲಿ ಕಾವ್ಯ ತನ್ನ ನಿರಂತರತೆಯನ್ನು ಕಾಯ್ದು ಕೊಂಡಿದೆ. ಪಂಪ, ರನ್ನ, ಜನ್ನ ಹರಿಹರ, ರಾಘವಾಂಕ, ಕುಮಾರವ್ಯಾಸ, ವಚನಕಾರರು, ಪುರಂದರ-ಕನಕ ದಾಸರ ಭಕ್ತಿ ಸಾಹಿತ್ಯ, ಕುವೆಂಪು, ಬೇಂದ್ರೆ, ಪುತಿನ, ಅಡಿಗರು, ಕೆಎಸ್ ನ, ಹೆಚೆಸ್ವಿ, ಜಿಎಸ್ ಶಿವರುದ್ರಪ್ಪ, ಕಂಬಾರರು, ಸಿದ್ದಲಿಂಗಯ್ಯ ಮುಂತಾದವರಿಂದ ಕನ್ನಡ ಕಾವ್ಯ ಸಮೃದ್ಧವಾಗಿದೆ.[ಸಂಪೂರ್ಣ ಕನ್ನಡ ಬ್ರೌಸರ್ ಬೇಕೆ?]
ಯಾವುದೇ ಸಾಹಿತ್ಯ ಆಸಕ್ತರು ತಮ್ಮ ಮೊದಲ ಬರವಣಿಗೆ ಶುರು ಮಾಡುವುದು ಕವಿತೆಯಿಂದಲೇ. ಹದಿಹರೆಯದ ವಯಸ್ಸಿನಲ್ಲಿ ಕವಿತೆಯನ್ನು ಬರೆಯದ ಸಾಹಿತ್ಯಾಸಕ್ತರೆ ಇಲ್ಲವೆನ್ನಬೇಕು. ಉತ್ತಮ ಕವಿತೆಗಳ ಗುಚ್ಛವನ್ನು ಹಿಡಿದು ಪುಸ್ತಕ ಪ್ರಕಾಶಕರ ಮುಂದೆ ನಿಲ್ಲುವ ಕವಿಗೆ ಸಾಮಾನ್ಯವಾಗಿ ಕಿವಿಗೆ ಬೀಳುವ ನಿರುತ್ಸಾಹದ ಮಾತು 'ಕವಿತೆಗಳ ಪುಸ್ತಕಕ್ಕೆ ಮಾರುಕಟ್ಟೆ ಇಲ್ಲಾರೀ... ಕವಿತೆ ಯಾರ್ ಕೊಳ್ತಾರೆ ಸ್ವಾಮಿ?'. ಕವಿತೆ ಆಂಡ್ರಾಯ್ಡ್ ಅಪ್ಲಿಕೇಷನ್ ಬಗ್ಗೆ ಇನ್ನಷ್ಟು ಮಾಹಿತಿ ಮುಂದಿದೆ ಓದಿ...

ಮುದ್ರಣ ಮಾಧ್ಯಮವನ್ನು ಮೀರಿ ನಿಲ್ಲುವ ಪ್ರಯತ್ನ
ಈ ಪ್ರಯೋಗಕ್ಕೆ, ಈ ಅಂಡ್ರಾಯಿಡ್ ಆ್ಯಪ್ ಸೃಷ್ಟಿಗೆ 'ಕವಿತೆ ಯಾರ್ ಕೊಳ್ತಾರೆ ಸ್ವಾಮಿ?' 'ಅಯ್ಯೋ ಫೇಸ್ಬುಕ್ ಕವಿಗಳು' ಎಂಬ ನಿರುತ್ಸಾಹದ ಮಾತುಗಳೇ ಸ್ಫೂರ್ತಿ. ಇದು ನಿಂತ ನೀರಾಗುತ್ತಿರುವ ಮುದ್ರಣ ಮಾಧ್ಯಮವನ್ನು ಮೀರಿ ನಿಲ್ಲುವ ಪ್ರಯತ್ನವೂ ಹೌದು. ಅದರ ವಿರುದ್ಧವಲ್ಲವಾದರೂ, ಮುದ್ರಣ ಮಾಧ್ಯಮದ ಜೊತೆ ಜೊತೆಗೆ ಓದಿನ, ಪ್ರಕಟಣೆಯ, ಓದುಗರ ತಲುಪುವ, ಕನ್ನಡ ಕಾವ್ಯದ ಕಂಪನ್ನು ವಿಶ್ವದೆಲ್ಲೆಡೆ ಪಸರಿಸುವ ಆಶಯ ನಮ್ಮ ತಂಡಕ್ಕಿದೆ.

ಕನ್ನಡದ ಮಟ್ಟಿಗೆ ಇದು ಪುಟ್ಟ ಹೆಜ್ಜೆಯಾದರೂ
ಈ ಪ್ರಯೋಗಕ್ಕೆ ಕನ್ನಡದ ಪ್ರಮುಖ ಯುವ ಕವಿಗಳು, ಕವಯತ್ರಿಯರು, ಕನ್ನಡ ನಾಡಿನ ಯುವ ಸಾಫ್ಟ್ವೇರ್ ತಂತ್ರಜ್ಞರು ಜೊತೆಯಾಗಿದ್ದು ನನ್ನ ಸೌಭಾಗ್ಯ (ಅವರ ವಿವರಗಳು ನಮ್ಮ ತಂಡದ ಪುಟದಲ್ಲಿದೆ). ಈ ಪ್ರಯತ್ನಕ್ಕೆ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಸಹಕಾರ ನೀಡಿದ ಎಲ್ಲರಿಗೂ ಹೃತ್ಪೂರ್ವಕ ವಂದನೆಗಳು. ಕನ್ನಡದ ಮಟ್ಟಿಗೆ ಇದು ಪುಟ್ಟ ಹೆಜ್ಜೆಯಾದರೂ, ಇನ್ನಷ್ಟು ಮತ್ತಷ್ಟು ಪ್ರಯತ್ನಗಳು ಈ ದಿಕ್ಕಿನಲ್ಲಿ ನಡೆದರೆ ಅಲ್ಲಿಗೆ ನಮ್ಮ ಶ್ರಮ ಸಾರ್ಥಕ.

ಸೊನ್ನೆ ರೂಪಾಯಿ ಬಜೆಟ್ನಲ್ಲಿ ಹೊರಬಂದಿದೆ
ಅಂದ ಹಾಗೆ ಈ ಪ್ರಾಜೆಕ್ಟ್ ನಮ್ಮ ತಂಡದ ಶ್ರಮದಾನದಿಂದಾಗಿ ಸೊನ್ನೆ ರೂಪಾಯಿ ಬಜೆಟ್ನಲ್ಲಿ ಹೊರಬಂದಿದೆ. ಇದೂ ಸಾಧ್ಯವಾಗಿದ್ದು ನಮ್ಮ ತಂಡದ ಅದಮ್ಯ ಕನ್ನಡ ಮತ್ತು ಕನ್ನಡ ಕಾವ್ಯ ಪ್ರೀತಿಯಿಂದ. ಹಾಗಾಗಿ ನಾವು ಕನ್ನಡದ ಭವಿಷ್ಯದ ಬಗ್ಗೆ ಆಶಾಭಾವನೆ ಮತ್ತು ನಿರೀಕ್ಷೆಗಳನ್ನು ಇಟ್ಟುಕೊಳ್ಳಬಹುದು ಎಂಬ ಭರವಸೆ ಕೊಡಬಲ್ಲೆ.

ನಿಮ್ಮ ಬೆಂಬಲ, ಧನ ಸಹಾಯ ಇಲ್ಲಿ ನೀಡಿ
ಈ ಪ್ರಾಜೆಕ್ಟ್'ಗೆ ಯಾವುದೇ ಪ್ರತಿಫಲ ಅಭಿಲಾಷೆಯಿಲ್ಲದೆ ದುಡಿದ ಎಲ್ಲರನ್ನೂ, ಕವಿಗಳನ್ನು ಗೌರವಿಸುವ ಹಂಬಲವಿದೆ, ಆಸಕ್ತರು, ಕನ್ನಡ ಅಭಿಮಾನಿಗಳು, ಧನ ಸಹಾಯ ಮಾಡಲು ಇಚ್ಛಿಸುವರು, ಸಂಘ ಸಂಸ್ಥೆಗಳು ದಯವಿಟ್ಟು ಇಮೇಲ್ ([email protected]) ಮುಖಾಂತರ ಸಂಪರ್ಕಿಸಿ. ನಿಮ್ಮ ಪ್ರೋತ್ಸಾಹ, ಸಹಾಯ ನಮ್ಮ ಮುಂದಿನ ಪ್ರಾಜೆಕ್ಟ್' ಗೂ ಸಹಾಯಕ.

ಅಪ್ಲಿಕೇಷನ್ ಡೌನ್ ಲೋಡ್ ಮಾಡುವುದು ಹೇಗೆ?
ಗೂಗಲ್ ಆಂಡ್ರಾಯ್ಡ್ ಪ್ಲೇ ಸ್ಟೋರ್ ನಲ್ಲಿ ಕವಿತೆ ಅಪ್ಲಿಕೇಷನ್ ಲಭ್ಯವಿದೆ. ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್ ಆಧಾರಿತ ಎಲ್ಲಾ ಮೊಬೈಲ್ ಗಳಲ್ಲೂ ಈ ಅಪ್ಲಿಕೇಷನ್ ಇಳಿಸಿಕೊಳ್ಳಬಹುದಾಗಿದೆ.ಈ ಅಪ್ಲಿಕೇಷನ್ ಗೆ ಪುಸ್ತಕ ಡಿಜಿಟಲ್ ಮೀಡಿಯಾ ಪ್ರೈ ಲಿ. ಕ್ಯಾನರೀಸ್ ಆಟೋಮೇಷನ್ ಪ್ರೈ ಲಿ. ಬೆಂಬಲವಿದೆ.
ಡೌನ್ ಲೋಡ್ ಮಾಡಿಕೊಳ್ಳಲು : ಈ ಲಿಂಕ್ ಕ್ಲಿಕ್ ಮಾಡಿ
ಇಲ್ಲವೇ ಗೂಗಲ್ ಪ್ಲೇ ಲಿಂಕ್ ಗೆ ಹೋಗಿ ಸರ್ಚ್ ಬಾಕ್ಸ್ ನಲ್ಲಿ Kavithe application ಎಂದು ಕೀ ಮಾಡಿ ಹುಡುಕಿ..ಇಲ್ಲವೇ Books & Reference ವಿಭಾಗದಲಿ ಕಣ್ಣಾಡಿಸಿ ನಂತರ ನಿಮ್ಮ ಮೊಬೈಲಿನಲ್ಲಿ ಇಳಿಸಿಕೊಳ್ಳಿ.. ಓದಿ ಆನಂದಿಸಿ












Click it and Unblock the Notifications