ಕೆಪಿಸಿಸಿ ಅಧ್ಯಕ್ಷರ ತಮ್ಮನಿಗೆ ಅಂದು ಜ್ಞಾನ ಇರಲಿಲ್ಲವೇ? ಕುಮಾರಸ್ವಾಮಿ ಪ್ರಶ್ನೆ
ಬೆಂಗಳೂರು, ಅ 16: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ನಂತರ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ವಿರುದ್ದ ಹರಿಹಾಯುತ್ತಿರುವ ಎಚ್.ಡಿ.ಕುಮಾರಸ್ವಾಮಿ, ಬೆಂಗಳೂರು ಗ್ರಾಮಾಂತರ ಲೋಕಸಭಾ ಸಂಸದ ಡಿ.ಕೆ.ಸುರೇಶ್ ಅವರನ್ನೂ ತರಾಟೆಗೆ ತೆಗೆದುಕೊಂಡಿದ್ದಾರೆ.
"ಈ ಭಾಗದ ಸಂಸದರು ಆಗಿರುವ ಅಧ್ಯಕ್ಷರ ತಮ್ಮ, ಬಿಜೆಪಿ ಅಭ್ಯರ್ಥಿ ಮುನಿರತ್ನ ಬಗ್ಗೆ ಹೇಳಿಕೆಯನ್ನು ನೀಡಿದ್ದಾರೆ. 250 ಕೋಟಿ ರೂಪಾಯಿಯ ಮೊತ್ತದ ಕಾಮಗಾರಿಯನ್ನು, ನಡೆಸದೆಯೇ ಬಿಲ್ ನೀಡಿ, ಹಣ ಹೊಡೆದಿದ್ದಾರೆ ಎಂದು".
"ಆಗ ಮುನಿರತ್ನ ಅವರು ಕಾಂಗ್ರೆಸ್ ಪಕ್ಷದಲ್ಲಿದ್ದರು. ಆಗ ಈ ಬಗ್ಗೆ ಚಕಾರವೆತ್ತದ ಸಂಸದರು, ಈಗ ಅಪವಾದ ಹೊರಿಸುತ್ತಿರುವುದು ಏಕೆ. ಅಂದು ಅವರಿಗೆ ಬುದ್ದಿ ಇರಲಿಲ್ಲವೇ"ಎಂದು, ಕುಮಾರಸ್ವಾಮಿ, ಸಂಸದ ಡಿ.ಕೆ.ಸುರೇಶ್ ಅವರನ್ನು ಪ್ರಶ್ನಿಸಿದ್ದಾರೆ.

"ಕೆಪಿಸಿಸಿ ಅಧ್ಯಕ್ಷರು ಮುನಿರತ್ನ ಅವ್ಯವಹಾರದ ಬಗ್ಗೆ ತನಿಖೆ ನಡೆಸಿ ಎಂದು ಈಗ ಆಗ್ರಹಿಸಿದ್ದಾರೆ. ಆಗ ಅವರ ಜೊತೆಗೇ ಕೂತಿತ್ತಾಗ, ಜ್ಞಾನ ಇರಲಿಲ್ಲವೇ"ಎಂದು ಕುಮಾರಸ್ವಾಮಿ, ಡಿಕೆಶಿ ಸಹೋದರರ ಮೇಲೆ ಕಿಡಿಕಾರಿದ್ದಾರೆ.
ಜೆಡಿಎಸ್ಸಿನ ಯಾವ ನಾಯಕರೂ ನಾಮಪತ್ರ ಸಲ್ಲಿಸುವ ವೇಳೆ ನೂರು ಮೀಟರ್ ಒಳಗೆ ಬರಲಿಲ್ಲ. ನಾನು, ನಗರ ಘಟಕದ ಅಧ್ಯಕ್ಷ ಪ್ರಕಾಶ್ ಮತ್ತು ಅಭ್ಯರ್ಥಿ ಮಾತ್ರ ನಾಮಪತ್ರ ಸಲ್ಲಿಸಲು ಹೋಗಿದ್ದೆವು. ಶರವಣ, ಅಪ್ಪಾಜಿ ಗೌಡ್ರು ಬಂದಿದ್ದರೂ, ಅವರನ್ನು ನಾಮಪತ್ರ ಸಲ್ಲಿಸುವ ಜಾಗಕ್ಕೆ ಬರುವುದು ಬೇಡ ಎಂದು ನಾನೇ ಹೇಳಿದ್ದು. ಅವರೆಲ್ಲಾ ಬ್ಯಾರಿಕೇಡ್ ನಿಂದ ಹೊರಗಿದ್ದರು"ಎಂದು ಕುಮಾರಸ್ವಾಮಿ ಹೇಳಿದರು.
"ನಾವು ನಾಮಪತ್ರ ಸಲ್ಲಿಸಲು ಹೋದಾಗ, ಬಿಜೆಪಿಯವರು ಹೊರಗೆ ಬರುತ್ತಿದ್ದರು. ಅವರು ಕೂಡಾ ಇದ್ದಿದ್ದು ಮೂರೇ ಜನ. ಅದರಲ್ಲಿ ಕಾಂಗ್ರೆಸ್ಸಿನವರು ಜಾತ್ರೆ ಮಾಡಿಕೊಂಡು ಇದ್ದವರು. ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿ, ಅದಕ್ಕೆ ಕ್ರಮ ತೆಗೆದುಕೊಂಡರೆ, ಅದನ್ನೂ ರಾಜಕೀಯವಾಗಿ ಬಳಸಿಕೊಳ್ಳಲು ಕಾಂಗ್ರೆಸ್ ಮುಂದಾಗುತ್ತಿದೆ"ಎಂದು ಎಚ್.ಡಿ.ಕುಮಾರಸ್ವಾಮಿ, ಕಾಂಗ್ರೆಸ್ ವಿರುದ್ದ ಕಿಡಿಕಾರಿದ್ದಾರೆ.












Click it and Unblock the Notifications