ಕಾವೇರಿ ಡ್ಯಾಂ ಯೋಜನೆಗೆ ಅರಣ್ಯ ಇಲಾಖೆ ವಿರೋಧ
ಬೆಂಗಳೂರು, ನ. 20: ಕರ್ನಾಟಕ ಸರ್ಕಾರದ ಉದ್ದೇಶಿತ ಕಾವೇರಿ ಡ್ಯಾಂ ನಿರ್ಮಾಣ ಯೋಜನೆಗೆ ಅರಣ್ಯ ಇಲಾಖೆಯಿಂದಲೇ ವಿರೋಧ ವ್ಯಕ್ತವಾಗಿದೆ.
ಈ ಕುರಿತು ಪತ್ರಕರ್ತರೊಂದಿಗೆ ಮಾತನಾಡಿದ ಇಲಾಖೆಯ ವನ್ಯಜೀವಿ ವಿಭಾಗದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ವಿನಯ ಲೂತ್ರ, ಮೇಕೆದಾಟು ಪ್ರದೇಶದಲ್ಲಿ ಡ್ಯಾಂ ನಿರ್ಮಿಸುವುದರಿಂದ ನೂರಾರು ಎಕರೆ ಅರಣ್ಯ ನಾಶವಾಗಲಿದೆ. ಪರಿಸರಕ್ಕೆ ಧಕ್ಕೆಯಾಗಲಿದೆ. ಆದ್ದರಿಂದ ಅರಣ್ಯ ಇಲಾಖೆ ಈ ಯೋಜನೆಯನ್ನು ವಿರೋಧಿಸುತ್ತದೆ ಎಂದು ತಿಳಿಸಿದ್ದಾರೆ. [ಮತ್ತೆ ಕಾವೇರಿ ಕ್ಯಾತೆ ತೆಗೆದ ಜಯಲಲಿತಾ]
ಈ ಹಿನ್ನೆಲೆಯಲ್ಲಿ ಯೋಜನೆ ರೂಪಿಸುವ ಮೊದಲು ಸರ್ಕಾರ ಅರಣ್ಯ ಇಲಾಖೆ ಜತೆ ಚರ್ಚಿಸಿರಲಿಲ್ಲವೇ ಎಂಬ ಪ್ರಶ್ನೆ ಉದ್ಭವಿಸಿದೆ. ಕರ್ನಾಟಕ ಸರ್ಕಾರದ ಯೋಜನೆ ವಿರೋಧಿಸಿ ತಮಿಳುನಾಡು ಸುಪ್ರೀಂ ಕೋರ್ಟ್ ಮೊರೆ ಹೋಗಿದೆ. ಈಗ ರಾಜ್ಯದ ಇಲಾಖೆಯಿಂದಲೇ ವಿರೋಧ ವ್ಯಕ್ತವಾಗಿರುವುದರಿಂದ ಸರ್ಕಾರಕ್ಕೆ ಮುಜುಗರದ ಸನ್ನಿವೇಶ ನಿರ್ಮಾಣವಾಗಿದೆ. [ಯೋಜನೆಗೆ ತಮಿಳುನಾಡು ಅಡ್ಡಗಾಲು]
ಕಾವೇರಿ ವನ್ಯಜೀವಿ ವಿಭಾಗವು ಹುಲಿ ಹಾಗೂ ಆನೆಗಳ ಆವಾಸ ಸ್ಥಾನವಾಗಿದ್ದು, ಅಪರೂಪದ ಜೀವಿಗಳು ಪತ್ತೆಯಾಗಿವೆ. ಆದ್ದರಿಂದ ಸರ್ಕಾರ ವನ್ಯಜೀವಿ ಧಾಮವನ್ನೂ ನಿರ್ಮಿಸಿದೆ. ಈಗ ಡ್ಯಾಂ ನಿರ್ಮಾಣದಿಂದ ಇವೆಲ್ಲವೂ ನಾಶವಾಗಲಿದೆ ಎಂದು ತಿಳಿಸಿದ್ದಾರೆ. [ಮೇಕೆದಾಟುವಿನಲ್ಲಿ ಕುಡಿಯುವ ನೀರಿಗಾಗಿ ಡ್ಯಾಂ]
ರಾಜ್ಯ ಸರ್ಕಾರದ ಯೋಜನೆಗೆ ವಿರೋಧ ವ್ಯಕ್ತಪಡಿಸಿರುವ ಪರಿಸರವಾದಿ ಡಾ. ಯಲ್ಲಪ್ಪ ರೆಡ್ಡಿ, ಇಲ್ಲಿ ಡ್ಯಾಂ ನಿರ್ಮಿಸಿದರೆ ಕಾಡು ಹಾಗೂ ಹಲವು ಗ್ರಾಮಗಳು ಮುಳುಗಡೆಯಾಗುತ್ತವೆ. ಡ್ಯಾಂ ನಿರ್ಮಾಣದಿಂದ ಉಂಟಾಗುವ ಅನಾಹುತಗಳ ಕಾರಣದಿಂದ ಎಲ್ಲೆಡೆ ವಿರೋಧ ಕೇಳಿಬರುತ್ತಿದೆ. ಆದ್ದರಿಂದ ಸರ್ಕಾರ ಈ ಉದ್ದೇಶಿತ ಯೋಜನೆ ಕೈಬಿಡಬೇಕೆಂದು ಆಗ್ರಹಿಸಿದ್ದಾರೆ.
ಕೇಂದ್ರ ಸರ್ಕಾರ ಒಪ್ಪಿಗೆ ನೀಡಿಲ್ಲ: ಯೋಜನೆ ಕುರಿತು ಪ್ರತಿಕ್ರಿಯೆ ನೀಡಿರುವ ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ, ಕೇಂದ್ರ ಸರ್ಕಾರ ಇದುವರೆಗೂ ಯೋಜನೆಗೆ ಒಪ್ಪಿಗೆ ನೀಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. [ಮೇಕೆದಾಟು ಯೋಜನೆ ಸ್ಥಗಿತವಿಲ್ಲ]
ರಾಜ್ಯ ಸರ್ಕಾರ ಇನ್ನೂ ಮೇಕೆದಾಟು ಯೋಜನೆಯ ವಿಸ್ತ್ರತ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಲು ಜಾಗತಿಕ ಆಸಕ್ತ ಕಂಪನಿಗಳನ್ನು ಆಹ್ವಾನಿಸಿದೆ. ಡಿಪಿಆರ್ ತಯಾರಿಸಿದ ನಂತರವೇ ಯೋಜನೆ ಕುರಿತು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಎಂ.ಬಿ. ಪಾಟೀಲ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ.