ಬಿಡಿಎ ಕಚೇರಿ ಮೇಲೆ ಎಸಿಬಿ ದಾಳಿ, ಕಾರಿನಲ್ಲಿ ಸಿಕ್ತು ದಾಖಲೆಗಳು!
ಬೆಂಗಳೂರು, ನವೆಂಬರ್ 19; ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳ ತಂಡ ಬೆಂಗಳೂರಿನ ಬಿಡಿಎ ಕೇಂದ್ರ ಕಚೇರಿ ಮೇಲೆ ದಾಳಿ ಮಾಡಿದೆ. ಸುಮಾರು 60 ಅಧಿಕಾರಿಗಳ ತಂಡ ದಾಳಿ ಮಾಡಿದ್ದು, ದಾಖಲೆಗಳ ಪರಿಶೀಲನೆ ನಡೆಯುತ್ತಿದೆ.
ಶುಕ್ರವಾರ ಸಂಜೆ 4 ಗಂಟೆ ಸುಮಾರಿಗೆ 3 ಎಸ್ಪಿ, 5 ಡಿವೈಎಸ್ಪಿ, 12 ಇನ್ಸ್ಪೆಕ್ಟರ್ಗಳನ್ನು ಒಳಗೊಂಡ 60ಕ್ಕೂ ಹೆಚ್ಚು ಅಧಿಕಾರಿಗಳು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಕೇಂದ್ರ ಕಚೇರಿ ಮೇಲೆ ದಾಳಿ ನಡೆಸಿದರು. ಸತತ 5 ಗಂಟೆಯಿಂದ ಅಧಿಕಾರಿಗಳ ತಂಡ ದಾಖಲೆಗಳ ಪರಿಶೀಲನೆ ಮಾಡುತ್ತಿದೆ.
ಸರ್ವೆ ಮಾಡಲು 70 ಲಕ್ಷ ರೂ.ಲಂಚ ಸ್ವೀಕಾರ : ಎಡಿಎಲ್ ಅರ್ ಸೇರಿ ನಾಲ್ವರು ಅಧಿಕಾರಿಗಳ ಮೇಲೆ ಎಸಿಬಿ ದಾಳಿ
ಎಸಿಬಿ ಅಧಿಕಾರಿಗಳು ದಾಳಿ ನಡೆಸುತ್ತಿದ್ದಂತೆ ಬಿಡಿಎ ಸಿಬ್ಬಂದಿಗಳು ಗಲಿಬಿಲಿಗೊಂಡರು. ಕಚೇರಿಯಲ್ಲಿರುವ ಕಡತ, ಕಂಪ್ಯೂಟರ್ನಲ್ಲಿರೋ ದಾಖಲೆಗಳ ಪರಿಶೀಲನೆ ನಡೆಯುತ್ತಿದೆ. ಕಚೇರಿ ಕಛೇರಿ ಹೊರ ಭಾಗದಲ್ಲಿ ಬ್ಯಾರಿಕೇಡ್ ಹಾಕಿ ಯಾರು ಒಳಬಾರದಂತೆ ಬಂದ್ ಮಾಡಲಾಗಿದೆ.
ಮನೆ ಕಟ್ಟಲು ಎರಡು ಲಕ್ಷ ರೂ. ಲಂಚ ಪಡೆದು ಜೈಲಿಗೆ ಹೋದ ಬಿಡಿಎ ಇಂಜಿನಿಯರ್!
ಜಮೀನು ಮಂಜೂರು ಅಕ್ರಮ, ಅಧಿಕಾರಿಗಳಿಂದ ಲಂಚಕ್ಕಾಗಿ ಬೇಡಿಕೆ ಸೇರಿದಂತೆ ವಿವಿಧ ದೂರುಗಳ ಹಿನ್ನಲೆಯಲ್ಲಿ ದಾಳಿ ನಡೆಸಲಾಗಿದೆ. ಸಂಘವೊಂದಕ್ಕೆ 34 ಸೈಟ್ ಮಂಜೂರು ಮಾಡಿರುರುವುದು ಬೆಳಕಿಗೆ ಬಂದಿದೆ.
ಬಿಡಿಎ ಭೂ ಒತ್ತುವರಿ ತೆರವು: 60 ಕೋಟಿ ರೂ.ಮೌಲ್ಯದ ಆಸ್ತಿ ವಶ
ನಗರದ ಪೂರ್ವ ತಾಲ್ಲೂಕಿನ ನಾರಾಯಣಪುರ ಗ್ರಾಮದಲ್ಲಿ ಇರುವ ಅಸೊಶಿಯೇಷನ್ಗೆ ಅರ್ಹತೆ ಇಲ್ಲದಿದ್ದರೂ 34 ನಿವೇಶನಗಳ ಹಂಚಿಕೆ ಮಾಡಲಾಗಿದೆ. ಇದರಿಂದ ಬಿಡಿಎಗೆ ಕೋಟ್ಯಾಂತರ ರೂಪಾಯಿ ನಷ್ಟ ಉಂಟಾಗಿದೆ. ಒಂದೇ ನಿವೇಶನವನ್ನು ಇಬ್ಬರಿಗೆ ಮಂಜೂರು ಮಾಡಿರುವ ಅಕ್ರಮ ಸಹ ಪತ್ತೆಯಾಗಿದೆ.
ಎಫ್ಡಿಎ ಮತ್ತು ಎಸ್ಡಿಎ ಹಾಗೂ ಇತರ ಅಧಿಕಾರಿಗಳ ಮೊಬೈಲ್ ಮತ್ತು ಪರ್ಸ್ಗಳನ್ನು ವಶಪಡಿಸಿಕೊಂಡ ಎಸಿಬಿ ಅಧಿಕಾರಿಗಳು ಅಧಿಕಾರಿಗಳ ಬ್ಯಾಗ್ ಸಹ ಪರಿಶೀಲಿಸಿದೆ. ಮೊಬೈಲ್ ಸ್ವಿಚ್ ಆಫ್ ಮಾಡಿಸಿ ಕಚೇರಿಯ ಒಳಗಿದ್ದ ಎಲ್ಲಾ ಕಡತಗಳನ್ನು ಒಂದು ಕಡೆ ಇಟ್ಟು ಪರಿಶೀಲನೆ ಆರಂಭಿಸಿದರು.
ಎಸಿಬಿಗೆ ಸೈಟ್ ವಿಚಾರದ ಕುರಿತು ದೂರುಗಳು ಬಂದಿದ್ದವು. ಸೈಟ್ ಹಂಚಿಕೆಯಲ್ಲಿ ಅಕ್ರಮ, ಕ್ರಯ ಪತ್ರ ನೀಡಲು ಲಂಚ, ನಾಲ್ಕು ವರ್ಷಗಳಿಂದ ಅಲೆದಾಡಿದರೂ ದಾಖಲೆ ನೀಡದೆ ಕಿರಿಕಿರಿ, ಕಾರ್ನರ್ ಸೈಟ್ ವಿಚಾರವಾಗಿ ಹಲವು ತಕರಾರು ಸೇರಿದಂತೆ ವಿವಿಧ ದೂರಗಳ ಹಿನ್ನಲೆ ದಾಳಿ ಮಾಡಲಾಗಿದೆ.
ದಾಳಿಯ ವೇಳೆ ಎಸಿಬಿ ಅಧಿಕಾರಿಗಳು ಟೊಯೋಟಾ ಫಾರ್ಚೂನರ್ ಕಾರಿನಲ್ಲಿ ಬ್ಯಾಗ್ ಗಟ್ಟಲೇ ದಾಖಲೆಗಳನ್ನು ಪತ್ತೆ ಹಚ್ಚಿದ್ದಾರೆ. ಕಾರು ಮತ್ತು ಡ್ರೈವರ್ ವಶಕ್ಕೆ ಪಡೆಯಲಾಗಿದ್ದು, ಕಾರು ಮುರುಳೀಧರ್ ಎಂಬುವರ ಹೆಸರಲ್ಲಿದೆ. ಕಾರು ಚಾಲಕನಿಗೆ ಸ್ಥಳಕ್ಕೆ ಮಾಲೀಕರನ್ನು ಕರೆಸುವಂತೆ ಅಧಿಕಾರಿಗಳು ಸೂಚನೆ ನೀಡಿದರು.
ಕಾರಿನಲ್ಲಿರುವ ದಾಖಲೆಗಳ ಪರಿಶೀಲನೆ ಪೂರ್ಣಗೊಂಡ ಬಳಿಕ ಕಾರನ್ನು ತೆಗೆದುಕೊಂಡು ಹೋಗಲು ಅಧಿಕಾರಿಗಳು ಸೂಚನೆ ಕೊಟ್ಟರು. ಕಚೇರಿ ಆವರಣದಲ್ಲಿಯೇ ಕಾರು ನಿಲ್ಲಿಸಿಕೊಂಡು ದಾಖಲೆಗಳ ಪರಿಶೀಲನೆ ನಡೆಸಿದರು. ಕಾರು ವಕೀಲರಿಗೆ ಸೇರಿದ್ದಾಗಿದ್ದು, ದಾಖಲೆಗಳಲ್ಲಿ ಯಾವುದೇ ಲೋಪ, ಅಕ್ರಮ ಕಂಡುಬಾರದ ಹಿನ್ನಲೆಯಲ್ಲಿ ಕಾರು ಮತ್ತು ಚಾಲಕನನ್ನು ಬಿಡುಗಡೆಗೊಳಿಸಲಾಯಿತು.
ದಾಳಿಯ ವೇಳೆ ಬಿಡಿಎ ಅಧಿಕಾರಿಗಳನ್ನು ಡಿವೈಎಸ್ಪಿ ರವಿಶಂಕರ್ ತರಾಟೆಗೆ ತೆಗೆದುಕೊಂಡರು. ಸಮರ್ಪಕವಾದ ದಾಖಲೆಗಳು ನೀಡಲು ಸಿಬ್ಬಂದಿ ಪರದಾಡಿದರು. ದಾಖಲೆ ನೀಡದಿದ್ದಲ್ಲಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.
ದಾಳಿ ವೇಳೆಯಲ್ಲಿ ಯಾವೊಬ್ಬ ಅಧಿಕಾರಿಯ ಕಚೇರಿಯಿಂದ ಹೊರಹೋಗದಂತೆ ಗೇಟ್ ಬಳಿ ಸಹ ಎಸಿಬಿ ಪೊಲೀಸರು ನಿಯೋಜನೆಗೊಂಡಿದ್ದರು. ಅಧಿಕಾರಿಗಳ ಬ್ಯಾಗ್ ಪರಿಶೀಲನೆ ಮಾಡಿ ಹೊರಬಿಡಲಾಯಿತು.
Recommended Video
ಬಿಡಿಎ ಭೂ ಸ್ವಾಧೀನ ವಿಭಾಗದ ಡಿಎಸ್, ಎಸಿ ಕಚೇರಿ, ಡಿಎಸ್ 1, 2, 3, 4 ಕಚೇರಿಗಳ ಮೇಲೆ ದಾಳಿ ನಡೆಸಿ ಅಧಿಕಾರಿಗಳು ಶೋಧ ನಡೆಸಿದರು. ಕೆಲವು ದಾಖಲೆ ಪಡೆದು ಕಚೇರಿಗೆ ಎಸಿಬಿ ಅಧಿಕಾರಿಗಳು ಬೀಗ ಜಡಿದಿದ್ದಾರೆ. ಶನಿವಾರವೂ ಪರಿಶೀಲನೆ ಮುಂದುವರೆಯಲಿದೆ.