ವಕೀಲರ ಸೋಗಿನಲ್ಲಿ ಕೋರ್ಟ್ಗೆ ಶರಣಾಗಿದ್ದ ಕೊಲೆ ಆರೋಪಿಗಳ ಕಾಲಿಗೆ ಗುಂಡು!
ಬೆಂಗಳೂರು ಜು. 06: ಹಣಕಾಸು ಲೇವಾದೇವಿ ಮಾಡುತ್ತಿದ್ದ ಮದನ್ ಎಂಬಾತನನ್ನು ಮಾರಕಾಸ್ತ್ರಗಳಿಂದ ಕೊಲೆ ಮಾಡಿದ್ದ ಇಬ್ಬರು ಆರೋಪಿಗಳ ಕಾಲಿಗೆ ಜಯನಗರ ಪೊಲೀಸರು ಗುಂಡು ಇಳಿಸಿದ್ದಾರೆ. ಜಯನಗರ ಪೊಲೀಸ್ ಇನ್ಸ್ಪೆಕ್ಟರ್ ಸುದರ್ಶನ್ ಮತ್ತು ತಂಡ ಮಹಜರು ನಡೆಸುವಾಗ ಪೊಲೀಸರ ಮೇಲೆ ದಾಳಿಗೆ ಯತ್ನಿಸಿದ್ದಾರೆ. ಈ ವೇಳೆ ಆತ್ಮ ರಕ್ಷಣೆಗಾಗಿ ಗುಂಡುಹಾರಿ ಇಬ್ಬರು ಕೊಲೆ ಆರೋಪಿಗಳನ್ನು ತಮ್ಮ ವಶಕ್ಕೆ ಪಡೆಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಮಹೇಶ್ ಹಾಗೂ ನವೀನ್ ಎಂಬ ಇಬ್ಬರು ಅರೋಪಿಗಳ ಕಾಲಿಗೆ ಪೆಟ್ಟಾಗಿದ್ದು, ಇಬ್ಬರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಘಟನೆಯಲ್ಲಿ ಜಯನಗರ ಪೊಲೀಸ್ ಠಾಣೆಯ ಪಿಎಸ್ಐ ಚಂದನ್ ಕಾಳೆ ಮತ್ತು ಎಎಸ್ಐ ಲಕ್ಷ್ಮಣಾಚಾರಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಜು. 04 ರಂದು ಬನಶಂಕರಿ ಮೆಟ್ರೋ ಸ್ಟೆಷನ್ ಬಳಿ ಮದನ್ ಎಂಬ ಹಣಕಾಸು ಲೇವಾದೇವಿಗಾರನನ್ನು ಹಾಡಹಗಲೇ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದರು. ಈ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿತ್ತು.
ರೌಡಿಗಳಿಗೆ ಫಂಡಿಂಗ್ ಮಾಡುತ್ತಿದ್ದ ಎಂಬ ಆರೋಪ ಮದನ್ ಮೇಲಿತ್ತು. ದೊಡ್ಡಬಳ್ಳಾಪುರ ಮೂಲದ ಮದನ್ ಕೆಲವು ರೌಡಿಗಳಿಗೆ ಫಂಡಿಂಗ್ ಮಾಡಿದ್ದ ಆರೋಪ ಕೇಳಿ ಬಂದಿತ್ತು. ಹಳೇ ದ್ವೇಷದ ಹಿನ್ನೆಲೆಯಲ್ಲಿ ಮದನ್ ಮೇಲೆ ದಾಳಿ ಮಾಡಿದ್ದ ಏಳು ಮಂದಿ ಆರೋಪಿಗಳು ಮೆಟ್ರೋ ಸ್ಟೇಷನ್ ಬಳಿ ಕೊಚ್ಚಿ ಕೊಲೆ ಮಾಡಿದ್ದರು. ಸೋಮವಾರ ಬೆಳಗ್ಗೆ ವಕೀಲರ ಸೋಗಿನಲ್ಲಿ ಏಳು ಅರೋಪಿಗಳು ನ್ಯಾಯಾಧೀಶರ ಮುಂದೆ ಶರಣಾಗಿದ್ದರು. ಆರೋಪಿಗಳ ಶರಣಾಗತಿಯನ್ನು ಪರಿಗಣಿಸದ ನ್ಯಾಯಾಧೀಶರು ಆರೋಪಿಗಳನ್ನು ಬಂಧಿಸುವಂತೆ ಸೂಚಿಸಿದ್ದರು. ಏಳು ಆರೋಪಿಗಳನ್ನು ಜಯನಗರ ಪೊಲೀಸರು ಬಂಧಿಸಿದ್ದರು.

Recommended Video
ಪ್ರಮುಖ ಆರೋಪಿಗಳಾದ ನವೀನ್ ಮತ್ತು ಮಹೇಶ್ ಎಂಬುವರನ್ನು ಮಹಜರು ನಡೆಸಲು ಪೊಲೀಸರು ಉತ್ತರಹಳ್ಳಿಯ ನಾಗೇಗೌಡನಪಾಳ್ಯಕ್ಕೆ ಕರೆದೊಯ್ದಿದ್ದರು. ಪೊಲೀಸರಿಂದ ತಪ್ಪಿಸಿಕೊಳ್ಳಲು ನವೀನ್ ಹಾಗೂ ಮಹೇಶ್ ಯತ್ನಿಸಿದ್ದು, ಪೊಲೀಸರ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ಪಿಎಸ್ಐ ಚಂದನ್ ಹಾಗು ಲಕ್ಷ್ಮಣಾಚಾರ್ ಗಾಯಗೊಂಡಿದ್ದು, ಜಯನಗರ ಠಾಣೆ ಪೊಲೀಸ್ ಇನ್ಸ್ಪೆಕ್ಟರ್ ಸುದರ್ಶನ್ ಸರ್ವೀಸ್ ಪಿಸ್ತೂಲಿನಿಂದ ಗುಂಡು ಹಾರಿಸಿದ್ದಾರೆ. ಈ ವೇಳೆ ಅರೋಪಿ ನವೀನ್ ಎಡ ಕಾಲಿಗೆ ಹಾಗೂ ಮಹೇಶ್ ಬಲ ಕಾಲಿಗೆ ಗುಂಡು ತಗುಲಿದ್ದು, ಇಬ್ಬರನ್ನು ಜಯನಗರ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ನೀಡಲಾಗಿದೆ ಎಂದು ದಕ್ಷಿಣ ವಿಭಾಗದ ಡಿಸಿಪಿ ತಿಳಿಸಿದ್ದಾರೆ. ಗಾಯಗೊಂಡಿರುವ ಪೊಲೀಸರು ಸಹ ಆಸ್ಪತ್ರೆಗೆ ದಾಖಲಾತಿ ಚಿಕಿತ್ಸೆ ಪಡೆಯುತ್ತಿದ್ದಾರೆ.












Click it and Unblock the Notifications