ಲೋಕಸಭೆ ಚುನಾವಣೆಗೆ ಸ್ಪರ್ಧೆ: ಮಧು ಬಂಗಾರಪ್ಪ ಹೇಳಿದ್ದೇನು?
ಬೆಂಗಳೂರು, ಜನವರಿ 12: ಶಿವಮೊಗ್ಗದಲ್ಲಿ ನಾನು ಸೋತಿದ್ದರೂ ಫೈಟ್ ಕೊಟ್ಟಿದ್ದೆ, ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ವಿಚಾರವಾಗಿ ದೇವೇಗೌಡರ ತೀರ್ಮಾನವೇ ಅಂತಿಮ ಎಂದು ಮಾಜಿ ಶಾಸಕ ಮಧು ಬಂಗಾರಪ್ಪ ಹೇಳಿದ್ದಾರೆ.
ಪಕ್ಷದಲ್ಲಿ ಯಾವುದೇ ಜವಾಬ್ದಾರಿ ನೀಡಿದರೂ ಅದನ್ನು ನಿಭಾಯಿಸಲು ಸಿದ್ಧನಿದ್ದೇನೆ, ಪಕ್ಷಕ್ಕೆ ಯಾವುದೇ ತ್ಯಾಗ ಮಾಡಲು ನಾವು ಸಿದ್ಧನಿದ್ದೇನೆ. ಸಂಸದೀಯ ಕಾರ್ಯದರ್ಶಿ ಅಥವಾ ರಾಜಕೀಯ ಕಾರ್ಯದರ್ಶಿ ಸೇರಿ ಯಾವ ಹುದ್ದೆಯ ಆಕಾಂಕ್ಷವೂ ಅಲ್ಲ, ಪಕ್ಷದ ವರಿಷ್ಠ ದೇವೇಗೌಡರನ್ನು ಶೀಘ್ರ ಭೇಟಿ ಮಾಡುತ್ತೇನೆ ಎಂದು ತಿಳಿಸಿದರು.
ಉತ್ತರ ಪ್ರದೇಶದಲ್ಲಿ ಎಸ್.ಪಿ., ಬಿ.ಎಸ್.ಪಿ. ಹೊಂದಾಣಿಕೆಯಾಗುವಾಗ ಕಾಂಗ್ರೆಸ್ ಅನ್ನು ಹೊರಗಿಡಬಾರದಿತ್ತು. ಈ ಬಗ್ಗೆ ದೇವೇಗೌಡರು ಖಂಡಿತ ಮಾತನಾಡುತ್ತಾರೆ. ಪಕ್ಷದಲ್ಲಿ ಕೆಲವು ಸಣ್ಣಪುಟ್ಟ ಸಮಸ್ಯೆಗಳು ಇರಬಹುದು. ಅದೆಲ್ಲ ಪಕ್ಷದ ಒಳಗೆ ಬಗೆಹರಿಸಿಕೊಳ್ಳುತ್ತಾರೆ ಎಂದರು.

ಪಕ್ಷದ ಸಂಘಟನೆ ಹಿನ್ನೆಲೆಯಲ್ಲಿ ದೇವೇಗೌಡರು ಸಾಕಷ್ಟು ಸಲಹೆ ನೀಡಿದ್ದಾರೆ. ಲೋಕಸಭೆ ಉಪ ಚುನಾವಣೆಯಲ್ಲಿ ವರಿಷ್ಠರ ತೀರ್ಮಾನದಿಂದ ಸ್ಪರ್ಧೆ ಮಾಡಿದ್ದೆ. ಆದರೆ, ಚುನಾವಣೆ ಬಳಿಕ ಪಕ್ಷದ ಚಟುವಟಿಕೆಯಿಂದ ಸ್ವಲ್ಪ ದೂರ ಇದ್ದೆ. ನನಗೆ ಯಾವುದೇ ಅಸಮಾಧಾನವಿಲ್ಲ. ನನಗೆ ಯಾವುದೇ ಸಿಟ್ಟಿಲ್ಲ. ವಿಶ್ವನಾಥ್ ಅವರು ನನ್ನ ಜತೆ ಮಾತನಾಡಿದ್ದಾರೆ ಎಂದು ತಿಳಿಸಿದರು.
ಎಚ್.ಡಿ.ಕುಮಾರಸ್ವಾಮಿ ಅವರು ಎರಡು ದೊಡ್ಡ ಸಂಸಾರ ನಡೆಸುತ್ತಿದ್ದಾರೆ. ಸರ್ಕಾರ ಹಾಗೂ ಪಕ್ಷವನ್ನೂ ನಡೆಸಿಕೊಂಡು ಹೋಗುತ್ತಿದ್ದಾರೆ. ಅವರಿಗೆ ಹೆಚ್ಚಿನ ಜವಾಬ್ದಾರಿ ಇದೆ. ಅವರಿಗೆ ನಾವು ತೊಂದರೆ ಕೊಡುವುದಿಲ್ಲ ಎಂದರು.












Click it and Unblock the Notifications