ಈ ಮರ ಕಡಿಯುವುದೋ? ಬಿಡುವುದೋ? ನೀವೇ ಹೇಳಿ..
ಬೆಂಗಳೂರು, ಮೇ. 11: ಮರಗಳನ್ನು ಉಳಿಸುವುದು ಪ್ರತಿಯೊಬ್ಬರ ಕರ್ತವ್ಯ. ಅದೇ ಮರ ಮನೆಯ ಮೇಲೆ ವಾಲಿದ್ದರೆ ಅಥವಾ ಆಸ್ತಿಗೆ ಹಾನಿ ಮಾಡುತ್ತಿದ್ದರೆ ಏನು ಮಾಡಬೇಕು?
ಹೌದು ಇಂಥದ್ದೊಂದು ಸಂದಿಗ್ಧ ಸ್ಥಿತಿ ಬೆಂಗಳೂರಿನ ಅರಕೆರೆ ಮೈಕೋ ಲೇಔಟ್ 2 ನೇ ಹಂತದ ಬಸ್ ನಿಲ್ದಾಣದ ಸಮೀಪದ ಎದುರಾಗಿದೆ. ಅಕ್ಕ ಪಕ್ಕದವರ ನಡುವಿನ ಮನಸ್ತಾಪಕ್ಕೂ ಕಾರಣವಾಗಿದೆ.[ಮರ ಕಡೀತಿದ್ದಾರೆ, ಯಾರಿಗೆ ದೂರು ನೀಡಲಿ?]
ಸುಮಾರು 40 ವರ್ಷ ಹಳೆಯದಾದ ಮರ ಬಾನೆತ್ತರಕ್ಕೆ ಬೆಳೆದು ನಿಂತಿದೆ. ಮರ ರಸ್ತೆ ಪಕ್ಕದಲ್ಲಿ ಇದ್ದು ಇದರ ಕೆಲ ಬೇರುಗಳು ಪಕ್ಕದ ಮನೆಯ ಕಾಂಪೌಂಡ್ ನುಗ್ಗಲು ಯತ್ನಿಸಿತ್ತಿರುವುದು ಸತ್ಯ. ಮನೆಗೆ ಹಾನಿ ಮಾಡಬಹುದು ಎಂಬ ಕಾರಣಕ್ಕೆ ಮಾಲೀಕ ಆನಂದ್ ಮರ ಕಡಿಯಬೇಕು ಎಂಬ ವಾದ ಇಟ್ಟುಕೊಂಡು ಅರಣ್ಯ ಇಲಾಖೆ ಬಾಗಿಲು ತಟ್ಟಿದ್ದಾರೆ.
ಆದರೆ ಪರಿಸರ ಹಾಳಾಗುತ್ತಿದೆ, ಅರಣ್ಯ ಸಂರಕ್ಷಣೆ ಮಾಡಬೇಕು ಎಂದು ಮರದ ಎದುರಿಗಿನ ಮನೆಯಲ್ಲಿ ವಾಸ ಮಾಡುತ್ತಿರುವ ವಿಕ್ರಾಂತ್ ಗೋಸ್ವಾಮಿ ಮತ್ತು ವಿಶಾಲ್ ಮರ ಕಡಿಯುವುದು ಸಲ್ಲ ಎಂಬ ವಾದ ಮುಂದಿಟ್ಟಿದ್ದಾರೆ.
ಪರಿಸರ ಪ್ರೇಮ ಒಂದೆಡೆ, ವಾಸದ ಹಕ್ಕು ಇನ್ನೊಂದೆಡೆ ಯಾವುದಕ್ಕೆ ಪ್ರಾಮುಖ್ಯ ನೀಡಬೇಕು ಎಂಬ ಆಯ್ಕೆಯಲ್ಲಿನ ಗೊಂದಲ ಎದುರಾಗಿದೆ. ಇದಕ್ಕೆ ಶೀಘ್ರವಾಗಿ ಸೂಕ್ತ ಪರಿಹಾರ ಕಲ್ಪಿಸಿಕೊಡುವ ಜವಾಬ್ದಾರಿ ಅರಣ್ಯ ಇಲಾಖೆ ಮತ್ತು ಬಿಬಿಎಂಪಿಗೆ ಸೇರಿದೆ.[ಬೆಂಗಳೂರು ಆಗಲಿದೆ ಬೆಂಗಾಡು]
ವಿಕ್ರಾಂತ್ ಮತ್ತು ವಿಶಾಲ್ ಈ ಬಗ್ಗೆ ಜಯನಗರ ಎರಡನೇ ಹಂತದಲ್ಲಿರುವ ಅರಣ್ಯಾಧಿಕಾರಿಗಳ ಕಚೇರಿಗೆ ದೂರೊಂದನ್ನು ದಾಖಲಿಸಿದ್ದಾರೆ. ಅಲ್ಲದೇ ಯಾವ ಕಾರಣಕ್ಕೂ ಮರ ಕಡಿಯಲು ಬಿಡುವುದಿಲ್ಲ ಎಂಬುದು ಅವರ ಸ್ಪಷ್ಟ ತೀರ್ಮಾನ. ಒನ್ಇಂಡಿಯಾ ಇಬ್ಬರ ವಾದವನ್ನು ಮತ್ತು ಅರಣ್ಯಾಧಿಕಾರಿಗಳ ಹೇಳಿಕೆಯನ್ನು ದಾಖಲಿಸಿ ನಿಮ್ಮ ಮುಂದೆ ಇಡುತ್ತಿದೆ. ಪರಿಹಾರ ಮಾರ್ಗ ಹೇಳಲು ಬಯಸುವುರಾದರೆ ಧಾರಾಳವಾಗಿ ಕಮೆಂಟ್ ಮಾಡಬಹುದು.

ಯಾವ ಕಾರಣಕ್ಕೂ ಕಡಿತ ಬೇಡ
ಮನೆಯ ಆವರಣಕ್ಕೆ ಬೇರು ನುಗ್ಗುತ್ತದೆ, ಎಲೆಗಳು ಬೀಳುತ್ತವೆ ಎಂಬ ಮಾತ್ರಕ್ಕೆ ಮರವನ್ನೇ ಕಡಿಯಬೇಕೆ? ಮಳೆ ಬಂದಾಗ ಕೆಲ ಮರದ ರೆಂಭೆಗಳು ಮುರಿದುಕೊಂಡು ಬಿದ್ದಿದ್ದವು. ಆ ವೇಳೆ ತೆರವಿಗೆಂದು ಆಗಮಿಸಿದವರ ಬಳಿ ಒತ್ತಾಯ ಪೂರ್ವಕವಾಗಿ ಮತ್ತಷ್ಟು ರೆಂಬೆ ಕಡಿಸಲಾಗಿದೆ. ಮರ ಉಳಿಸುವ ಕಾರ್ಯಕ್ಕೆ ಎಲ್ಲರೂ ಕೈಜೋಡಿಸಬೇಕು ಎಂಬ ಮನವಿಯುತ ಆಗ್ರಹ ವಿಕ್ರಾಂತ್ ಅವರದ್ದು.

ನಿಮ್ಮ ಮನೆಗೆ ಹೀಗೆ ಆಗಿದ್ರೆ ಏನ್ ಮಾಡ್ತಿದ್ರಿ?
ನಿಮ್ಮ ಮನೆಯ ಪಕ್ಕದಲ್ಲೇ ಈ ಬಗೆಯ ಬೃಹತ್ ಮರವಿದ್ದು ಅದರ ಬೇರುಗಳು ಒಳಕ್ಕೆ ನುಸುಳಲು ಆರಂಭ ಮಾಡಿದ್ದರೇ ಏನು ಮಾಡುತ್ತೀರಾ? ಮರ ಕಡಿಯಬೇಕು ಎಂದು ಅನಿಸುತ್ತದೆ ತಾನೆ. ಹಾಗೆ ನಾನು ಮರ ಕಡಿಸಲು ಮುಂದಾಗಿದ್ದೇನೆ ಎಂಬುದು ಆನಂದ್ ಅವರ ವಾದ .

ಸಮತೋಲನ ವಿರಲಿ
ಮರಗಳು ತೊಂದರೆ ನೀಡುತ್ತವೆ ಎಂದು ಕಡಿದು ಹಾಕುವುದು ಎಷ್ಟು ಸರಿ? ಒಂದು ರಸ್ತೆಯ ಇಕ್ಕೆಲಗಳಲ್ಲಿ ಮರಳಿದ್ದರೆ ತೀವ್ರ ಅನಾಕೂಲವಾದರೆ ಮಾತ್ರ ಕಡಿಯುವುದು ಉತ್ತಮ. ಇಲ್ಲಿ ಸಮತೋಲನೆ ಕಾಯ್ದುಕೊಳ್ಳಬೇಕು ಎಂದು ಪರಿಸರ ಪ್ರೇಮಿ ವಿಶಾಲ್ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ

ಸ್ಥಳ ಪರಿಶೀಲನೆ ಮಾಡಬೇಕು
ವಿಷಯ ನಮ್ಮ ಗಮನಕ್ಕೆ ಬಂದಿದೆ. ನಾವಿನ್ನು ಸ್ಥಳ ಪರಿಶೀಲನೆ ಮಾಡಿಲ್ಲ. ಸ್ಥಳ ಪರಿಶಿಲನೆ ನಂತರ ಮರ ಕಡಿಯಬೇಕೋ? ಬೇಡವೋ? ಎಂಬ ತೀರ್ಮಾನಕ್ಕೆ ಬರಬಹುದು. ಆದರೆ ಇದಕ್ಕೆ ಕೆಲ ಕಾನೂನು ನಿಯಮಗಳಿವೆ ಎಂದು ಅರಣ್ಯ ಅಧಿಕಾರಿ ರಂಗನಾಥ ಸ್ವಾಮಿ ತಿಳಿಸುತ್ತಾರೆ.

ಶೇಷಾದ್ರಿ ಬೇರು ಚಿತ್ರದ ಕತೆಯೇ
ಹೌದು ಪಿ ಶೇಷಾದ್ರಿ ಅವರ ಬೇರು ಚಿತ್ರದಂತೆಯೇ ಈ ಮರದ ಕಥಾಹಂದರವೂ ಸಾಗುತ್ತಿದೆ. ಒಣಗಿದ ಮರಗಳು ಒಂದೆಡೆಯಾದರೆ ಆಸ್ತಿಗೆ ಹಾನಿ ಮಾಡುವ ಮರಗಳು ಇನ್ನೊಂದೆಡೆ. ಮರ ಕಡಿದರೆ ಅರಣ್ಯ ಇಲಾಖೆ ಸಿಟ್ಟಿಗೆ ತುತ್ತಾಗಬೇಕು. ಕಡಿಯದಿದ್ದರೆ ಆಸ್ತಿ ಹಾನಿಯಾಗುತ್ತದೆ. ಇದೇ ಕತೆಯನ್ನು ಇಟ್ಟುಕೊಂಡು ಸಿನಿಮಾ ಮಾಡಿದ್ದ ಶೇಷಾದ್ರಿ ಪ್ರಶಸ್ತಿಗೂ ಭಾಜನರಾಗಿದ್ದರು.

ಗೊಂದಲದ ಹೇಳಿಕೆ
ಒಮ್ಮೆ ಮರ ಕಡಿಯಲು ಅನುಮತಿ ಪಡೆದುಕೊಂಡಿದ್ದೇನೆ ಎಂಬ ಆನಂದ್ ಬಳಿ ಅನುಮತಿ ಪತ್ರ ಕೇಳಿದರೆ ಹಾರಿಕೆ ಉತ್ತರ ನೀಡುತ್ತಾರೆ. ಇನ್ನು ಕಿರಿಯ ಅರಣ್ಯ ಅಧಿಕಾರಿ ಮಂಜುನಾಥ್ ಮೇಲಧಿಕಾರಿಗಳ ಕಡೆಗೆ ಬೆಟ್ಟು ತೋರಿಸುತ್ತಾರೆ. ರಂಗನಾಥ ಸ್ವಾಮಿ ಅವರ ಬಳಿ ಅನುಮತಿ ನೀಡಿದ್ದೀರಾ ? ಇಲ್ಲವಾ? ಎಂದು ಮೊದಲಿಗೆ ಕೇಳಿದಾಗ ಉತ್ತರಿಸಲು ಹಿಂಜರೆದಿದ್ದರು.

ಇದೊಂದೇ ಮರ ಅಲ್ಲ
ಮೈಕೋ ಲೇಔಟ್ ನಲ್ಲಿ ಇದೊಂದೆ ಮರ ಕಡಿತದ ಚರ್ಚೆಯಾಗುತ್ತಿಲ್ಲ.. ಸಮೀಪದ ಬಸ್ ನಿಲ್ದಾಣ, ಕಾಂಪ್ಲೆಕ್ಸ್, ಹೊಟೆಲ್ ಬಳಿಯ ಮರಗಳು ವಿನಾಕಾರಣ ಒಣಗುತ್ತಿರುವುದು ಕಣ್ಣಿಗೆ ಬಿತ್ತು. ವಿಶಾಲ್ ಹೇಳುವಂತೆ ಜನರು ಉದ್ದೇಶಪೂರ್ವಕವಾಗಿ ಮರವನ್ನು ಸಾಯಿಸುತ್ತಿದ್ದಾರೆ. ಪೌಷ್ಟಿಕಾಂಶ ನೀಡದಿರಿವುದು, ಮರದ ಬುಡಕ್ಕೆ ಸಿಮೆಂಟ್ ಹಾಕುವುದು, ಇಲ್ಲವೇ ತ್ಯಾಜ್ಯಗಳನ್ನು ಎಸೆಯುವುದು, ವಾಣಿಜ್ಯ ಕಟ್ಟಡ ನಿರ್ಮಿಸಿ ಹಾನಿಯಾಗುತ್ತಿದೆ ಎಂದು ದೂರುವುದು ಈ ರೀತಿಯ ನೂರಾರು ತಂತ್ರಗಳ ಮೂಲಕ ಪರಿಸರಕ್ಕೆ ಧಕ್ಕೆ ಮಾಡುತ್ತಿದ್ದಾರೆ ಎಂದು ಆರೋಪಿಸುತ್ತಾರೆ

ಪರಿಹಾರ ಏನು?
ಮರವೂ ಉಳಿಯಬೇಕು, ಮನೆಗೂ ಹಾನಿಯಾಗಬಾರದು ಎಂಬ ರೀತಿಯ ಪರಿಹಾರ ಸುಲಭ ಸಾಧ್ಯವಿಲ್ಲ. ಒಂದು ಮಾಡಿದರೆ ಇನ್ನೊಂದಕ್ಕೆ ತೊಂದರೆ. ಬೇರುಗಳನ್ನು ಕತ್ತರಿಸಿದರೆ ಮರ ಸಾಯುತ್ತದೆ. ಕತ್ತರಿಸದಿದ್ದರೆ ಮನೆ ಒಳಗೆ ನುಗ್ಗುತ್ತದೆ. ರೆಂಬೆಗಳಾಗಿದ್ದರೆ ಅರ್ಧ ಕಡಿದು, ಇನ್ನರ್ಧ ಬಿಡಬಹುದಿತ್ತು. ಆದರೆ ಇಲ್ಲಿ ತೊಂದರೆ ನೀಡುತ್ತಿರುವುದು ಬೇರು. ಇದಕ್ಕೆ ಪರಿಹಾರ ಕಂಡುಕೊಳ್ಳುವುದು ಕಷ್ಟವೇ. ನಿಮಗೆ ಏನಾದರೂ ಪರಿಹಾರ ಸೂಚನೆ ಕೊಡಬಹುದು ಎಂದಾದರೆ ಕಮೆಂಟ್ ಮಾಡಲು ಮರೆಯಬೇಡಿ.












Click it and Unblock the Notifications