ಮಾ.21 ರಿಂದ ರೈತ-ಕಾರ್ಮಿಕ-ದಲಿತ-ಮಹಿಳೆಯರಿಂದ ಬೆಂಗಳೂರು ಚಲೋ
ಬೆಂಗಳೂರು, ಮಾರ್ಚ್ 17: ರೈತ ವಿರೋಧಿ ಕಾಯ್ದೆಗಳ ರದ್ದತಿ, ಕಾರ್ಮಿಕ ಕಾಯ್ದೆಗಳ ತಿದ್ದುಪಡಿ ವಿರೋಧಿಸಿ, ಉದ್ಯೋಗ ಭದ್ರತೆಗಾಗಿ, ಮಹಿಳೆಯರು-ದಲಿತರ ಮೇಲಿನ ದೌರ್ಜನ್ಯ, ಎನ್ಇಪಿ ಕಾಯ್ದೆ ಧಿಕ್ಕರಿಸಿ, ಶಿಕ್ಷಣ ಮತ್ತು ಆರೋಗ್ಯ ವ್ಯವಸ್ಥೆಯ ದುಬಾರೀಕರಣ ಖಂಡಿಸಿ, ಉದ್ಯೋಗ ಸೃಷ್ಟಿಯ ಸಮಗ್ರ ಯೋಜನೆಗಾಗಿ ಆಗ್ರಹಿಸಿ ಮಾರ್ಚ್ 21 ರಿಂದ 23ರವರೆಗೆ ಬೆಂಗಳೂರಿನಲ್ಲಿ ಜನ ಪರ್ಯಾಯ ಬಜೆಟ್ ಅಧಿವೇಶನ ನಡೆಯಲಿದೆ ಎಂದು ಸಂಯುಕ್ತ ಕರ್ನಾಟಕ - ಹೋರಾಟ ತಿಳಿಸಿದೆ.
ಮಾರ್ಚ್ 21 ರಂದು ಸಾವಿರ ಸಾವಿರ ಸಂಖ್ಯೆ ಬೆಂಗಳೂರಿನಲ್ಲಿ ಸೇರಲಿದ್ದಾರೆ. ಅಂದು ನಡೆಯಲ್ಲಿರುವ ಜನ ಪರ್ಯಾಯ ಬಜೆಟ್ ಅಧಿವೇಶನದ ಉದ್ಘಾಟನಾ ಸಮಾರಂಭದಲ್ಲಿ ದೆಹಲಿಯ ಚಾರಿತ್ರಿಕ ರೈತ ಹೋರಾಟದ ನಾಯಕರುಗಳಾದ ರಾಕೇಶ್ ಸಿಂಗ್ ಟಿಕಾಯತ್, ಡಾ|| ದರ್ಶನ್ ಪಾಲ್, ಶ್ರೀಮತಿ ಕವಿತಾ ಕುರಗಂಟಿ, ಮತ್ತಿತರು ಮಾತನಾಡಲಿದ್ದಾರೆ.
ಮಾರ್ಚ್ 22, 23, 2022ರಂದು ಜನಪರ್ಯಾಯ ಬಜೆಟ್ ಅಧಿವೇಶನ ಮತ್ತು ಸಮಾರೋಪ ಸಮಾರಂಭ ನಡೆಯಲಿದೆ. ಈ ಜನ ಪರ್ಯಾಯ ಬಜೆಟ್ ಅಧಿವೇಶನದ ಉದ್ಘಾಟನೆ ಮತ್ತು ಜನ ಪರ್ಯಾಯ ಬಜೆಟ್ ಅಧಿವೇಶನಗಳಲ್ಲಿ ರಾಜ್ಯದ ರೈತರು, ದಲಿತರು, ಕಾರ್ಮಿಕರು, ವಿದ್ಯಾರ್ಥಿ, ಯುವಜನರು, ಮಹಿಳೆಯರು ಎಲ್ಲಾ ಜನವಿಭಾಗದವರು ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಕರೆ ನೀಡಿದ್ದಾರೆ.

ಅಧಿಕಾರದ ಚುಕ್ಕಾಣಿ ಹಿಡಿದಿರುವುದು 'ಸರ್ಕಾರ'ವೋ, 'ಸಾಹುಕಾರ'ವೋ ಎಂಬ ಪ್ರಶ್ನೆಯನ್ನು ಕೇಳಿಕೊಳ್ಳಲೇಬೇಕಾದ ಸ್ಥಿತಿಯಲ್ಲಿ ನಾವಿದ್ದೇವೆ. ಆಳುವವರ ನೀತಿಯಿಂದಾಗಿ, ಸಾಲು ಸಾಲು ಜನವಿರೋಧಿ ಕಾಯ್ದೆಗಳನ್ನು ಜಾರಿಗೊಳಿಸುತ್ತಿದೆ. ಇವುಗಳು ಜನರ ವಿರುದ್ಧ ಇರುವ ಕಾಯ್ದೆಗಳು ಎನ್ನುವುದಾದರೆ, ಇವುಗಳು ಸ್ಪಷ್ಟವಾಗಿ ಈ ದೇಶದ ದೊಡ್ಡ ದೊಡ್ಡ ಬಂಡವಾಳಶಾಹಿ ಕಾರ್ಪೋರೇಟ್ ಕಂಪನಿಗಳ ದುರಾಸೆಯನ್ನು ತೃಪ್ತಿಪಡಿಸಲು ಜಾರಿಗೆ ತರಲಾಗುತ್ತಿದೆ ಎಂದು ಸಂಯುಕ್ತ ಕರ್ನಾಟಕ - ಹೋರಾಟ ಜಂಟಿ ವೇದಿಕೆಯು ತಿಳಿಸಿದೆ.
ರೈತ ವಿರೋಧಿಯಾದ ಎಪಿಎಂಸಿ, ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಮತ್ತು ಗೋಹತ್ಯೆ ನಿಷೇಧ ತಿದ್ದುಪಡಿ ಕಾಯ್ದೆಗಳ ರದ್ದತಿಯಾಗಬೇಕು. ವಿದ್ಯುತ್ ಖಾಸಗೀಕರಣ ಮಸೂದೆಯ ವಾಪಸು ಪಡೆಯಬೇಕು. ಎಲ್ಲಾ ಅಗತ್ಯ ದವಸಧಾನ್ಯಗಳೂ ದೊರಕುವಂತೆ ಪಡಿತರ ವ್ಯವಸ್ಥೆಯ ವಿಸ್ತರಣೆ ಮತ್ತು ಕನಿಷ್ಠ ಬೆಂಬಲ ಬೆಲೆಯ ಕಾನೂನು ಜಾರಿಯಾಗಬೇಕೆಂದು, ಖಾಸಗೀ ಕೃಷಿ ಮಾರುಕಟ್ಟೆಗಳಿಗೆ ನೀಡಿರುವ ಪರವಾನಗಿಗಳ ರದ್ದತಿ ಆಗಬೇಕೆಂದು ಈ ಮೂಲಕ ಆಗ್ರಹಿಸಲಾಗುತ್ತಿದೆ.

ಕಾರ್ಮಿಕ ಕಾಯ್ದೆಗಳ ತಿದ್ದುಪಡಿ ಮತ್ತು ಸಾರ್ವಜನಿಕ ಉದ್ದಿಮೆಗಳ ಖಾಸಗೀಕರಣವನ್ನು ಖಂಡಿಸುವುದರೊಂದಿಗೆ, ಉದ್ಯೋಗ ಭದ್ರತೆ ಮತ್ತು ಕನಿಷ್ಟ 21,000 ವೇತನವನ್ನು ಸಾರ್ವತ್ರಿಕಗೊಳಿಸಲು ಒತ್ತಾಯಿಸಲಾಗುತ್ತಿದೆ. ಮಹಿಳೆಯರು ಮತ್ತು ದಲಿತರ ಮೇಲಿನ ಹಿಂಸೆಯನ್ನು ತಡೆಗಟ್ಟಲು, ಸರ್ಕಾರಿ, ಅರಣ್ಯ ಭೂಮಿಯಲ್ಲಿ ಉಳುಮೆ ಅಥವ ವಾಸವಿರುವ ಎಲ್ಲಾ ಬಡವರಿಗೆ ಕೂಡಲೇ ಭೂಮಿ - ವಸತಿ ಮಂಜೂರು ಮಾಡಲು ಮತ್ತು ಪರಿಶಿಷ್ಟ ಜಾತಿ(ಎಸ್.ಸಿ.) - ಪರಿಶಿಷ್ಟ ಪಂಗಡ (ಎಸ್.ಟಿ.) ಅಭಿವೃದ್ಧಿ ನಿಧಿಯ ದುರ್ಬಳಕೆ ತಡೆಯಬೇಕೆಂದು ಆಗ್ರಹಿಸಲಾಗುತ್ತಿದೆ.
ವಿದ್ಯಾರ್ಥಿ ವಿರೋಧಿ ರಾಷ್ಟ್ರೀಯ ಶಿಕ್ಷಣ ನೀತಿ-2020-ಎನ್ಇಪಿಯನ್ನು ಧಿಕ್ಕರಿಸಿ, ಶಿಕ್ಷಣ ಮತ್ತು ಆರೋಗ್ಯ ವ್ಯವಸ್ಥೆಯ ದುಬಾರೀಕರಣವನ್ನು ಖಂಡಿಸಿ, ಉದ್ಯೋಗ ಸೃಷ್ಟಿಯ ಸಮಗ್ರ ಯೋಜನೆಗಾಗಿ ಆಗ್ರಹಿಸಿ ಜನ ಪರ್ಯಾಯ ಬಜೆಟ್ ಅಧಿವೇಶನ ನಡೆಯಲಿದೆ.
ಸಂಯುಕ್ತ ಕರ್ನಾಟಕ - ಹೋರಾಟದ ಪರವಾಗಿ, ಕರ್ನಾಟಕ ಪ್ರಾಂತ ರೈತ ಸಂಘ(ಕೆಪಿಆರ್ಎಸ್) ರಾಜ್ಯ ಅಧ್ಯಕ್ಷ ಜಿ.ಸಿ. ಬಯ್ಯಾರೆಡ್ಡಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಯು. ಬಸವರಾಜ, ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್(ಸಿಐಟಿಯು) ರಾಜ್ಯ ಅಧ್ಯಕ್ಷೆ ಎಸ್. ವರಲಕ್ಷ್ಮಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸುಂದರಂ, ಅಖಿಲ ಭಾರತ ಕೃಷಿ ಕೂಲಿಕಾರರ ಯೂನಿಯನ್(ಎಐಎಡಬ್ಲ್ಯೂಯು) ರಾಜ್ಯ ಅಧ್ಯಕ್ಷ ನಿತ್ಯಾನಂದಸ್ವಾಮಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಚಂದ್ರಪ್ಪ ಹೋಸ್ಕೇರಾ, ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ(ಎಐಡಿಡಬ್ಲ್ಯೂಎ) ರಾಜ್ಯ ಅಧ್ಯಕ್ಷೆ ದೇವಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಗೌರಮ್ಮ, ಭಾರತ ವಿದ್ಯಾರ್ಥಿ ಫೆಡರೇಷನ್(ಎಸ್ಎಫ್ಐ), ರಾಜ್ಯ ಅಧ್ಯಕ್ಷ ಅಮರೇಶ್ ಕಡಗದ, ರಾಜ್ಯ ಪ್ರಧಾನ ಕಾರ್ಯದರ್ಶಿ ವಾಸುದೇವರೆಡ್ಡಿ, ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್(ಡಿವೈಎಫ್ಐ), ರಾಜ್ಯ ಅಧ್ಯಕ್ಷ ಮುನೀರ್ ಕಾಟಿಪಳ್ಳ, ಪ್ರಧಾನ ಕಾರ್ಯದರ್ಶಿ ಬಸವರಾಜ ಪೂಜಾರ, ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘದ ರಾಜ್ಯ ಅಧ್ಯಕ್ಷೆ ಟಿ.ವಿ. ರೇಣುಕಮ್ಮ, ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ. ಮಾಳಮ್ಮ, ದಲಿತ ಹಕ್ಕುಗಳ ಸಮಿತಿ-ಕರ್ನಾಟಕ ರಾಜ್ಯ ಸಂಚಾಲಕ ಗೋಪಾಲಕೃಷ್ಣ ಹರಳಹಳ್ಳಿ, ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ರಾಜ್ಯ ಸಂಚಾಲಕ ವೈ.ಕೆ. ಗಣೇಶ್ ಜಂಟಿ ಹೇಳಿಕೆಯನ್ನು ಬಿಡುಗಡೆ ಮಾಡಿದ್ದಾರೆ.












Click it and Unblock the Notifications