ಪುನೀತ್ ರಾಜ್ ಕುಮಾರ್ ಸಾವಿನ ಬಗ್ಗೆ ತನಿಖೆ ಕೋರಿ ಪೊಲೀಸರಿಗೆ ದೂರು
ಬೆಂಗಳೂರು, ನ. 04: ನಟ ಪುನೀತ್ ರಾಜ್ಕುಮಾರ್ ಅವರ ಸಾವಿಗೆ ಅವರ ಕುಟುಂಬ ವೈದ್ಯರ ನಿರ್ಲಕ್ಷ್ಯವೇ ಕಾರಣ ಆರೋಪಿಸಿ, ಈ ಸಂಬಂಧ ಬಗ್ಗೆ ತನಿಖೆ ನಡೆಸುವಂತೆ ಕೋರಿ ಪುನೀತ್ ಅಭಿಮಾನಿಯೊಬ್ಬರು ಸದಾಶಿವನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಅರುಣ್ ಪರಮೇಶ್ವರ್ ದೂರು ನೀಡಿದ್ದು, ಪುನೀತ್ ರಾಜ್ಕುಮಾರ್ಗೆ ಎದೆನೋವು ಕಾಣಿಸಿಕೊಂಡ ಕೂಡಲೇ ಅವರು ರಮಣಶ್ರೀ ಆಸ್ಪತ್ರೆಗೆ ಹೋಗಿದ್ದಾರೆ. ಪುನೀತ್ ರಾಜ್ಕುಮಾರ್ಗೆ ಅಲ್ಲಿ ಸೂಕ್ತ ಚಿಕಿತ್ಸೆಯೂ ಸಿಕ್ಕಿದಂತೆ ಕಾಣುತ್ತಿಲ್ಲ. ಅವರನ್ನು ತಡವಾಗಿ ವಿಕ್ರಮ್ ಆಸ್ಪತ್ರೆಗೆ ಸೇರಿಸಲಾಗಿದೆ. ವಿಕ್ರಮ್ ಆಸ್ಪತ್ರೆಗೆ ಸಾಗಿಸಲು ರಮಣಶ್ರೀ ಆಸ್ಪತ್ರೆ ಕಡೆಯಿಂದ ಆಂಬ್ಯೂಲೆನ್ಸ್ ಕೂಡ ಮಾಡಿಲ್ಲ ಎಂಬ ಮಾತು ಕೇಳಿ ಬರುತ್ತಿದೆ. ಈ ಕುರಿತು ಸತ್ಯಾಸತ್ಯತೆ ಬಹಿರಂಗವಾಗಬೇಕು.
ಪುನೀತ್ ರಾಜ್ಕುಮಾರ್ ಎಷ್ಟು ಸಮಯಕ್ಕೆ ರಮಣಶ್ರೀ ಆಸ್ಪತ್ರೆಗೆ ದಾಖಲಾದರು. ಎದೆನೋವಿನ ಬಗ್ಗೆ ಹೇಳಿದಾಗ ಎಷ್ಟು ನಿಮಿಷಗಳ ಕಾಲ ರಮಣಶ್ರೀ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತು. ಯಾವ್ಯಾವ ಮಾತ್ರೆಗಳನ್ನು ಅಲ್ಲಿ ನೀಡಲಾಗಿತ್ತು. ಆ ಬಳಿಕ ಅವರು ಆಸ್ಪತ್ರೆಯಿಂದ ಎಷ್ಟು ಸಮಯಕ್ಕೆ ವಿಕ್ರಮ್ ಆಸ್ಪತ್ರೆಗೆ ತೆರಳಿದರು. ಆಸ್ಪತ್ರೆಗೆ ಹೋಗಲು ರಮಣಶ್ರೀ ಆಸ್ಪತ್ರೆಯಿಂದ ಏನು ವ್ಯವಸ್ಥೆ ಮಾಡಲಾಗಿತ್ತು? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಬೇಕಿದೆ. ಈ ಕುರಿತು ಪೊಲೀಸರು ತನಿಖೆ ನಡೆಸಿ ಕ್ರಮ ಜರುಗಿಸಬೇಕು ಎಂದು ಅರುಣ್ ಪರಮೇಶ್ವರ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಪುನೀತ್ಗೆ ಎದೆನೋವು ಕಾಣಿಸಿಕೊಂಡ ಕೂಡಲೇ ಕುಟುಂಬ ವೈದ್ಯರು ಎಂದು ಭಾವಿಸಿದ್ದ ಡಾ. ರಮಣರಾವ್ ಬಳಿ ತೆರಳಿದ್ದರು. ಹೃದಯಾಘಾತಕ್ಕೆ ಸಂಬಂಧಿಸಿದಂತೆ ಚಿಕಿತ್ಸೆ ನೀಡಿಲ್ಲ. ವಿಕ್ರಮ್ ಆಸ್ಪತ್ರೆಗೆ ರವಾನಿಸುವಲ್ಲಿ ತಡವಾಗಿದೆ ಎಂಬ ಮಾತುಗಳು ಕೇಳಿ ಬಂದಿದ್ದವು. ಇದೀಗ ದೂರು ದಾಖಲಾಗಿದೆ.
ಬಾರ್ ಲೈಸನ್ಸ್ ಕೊಡಿಸುವ ಆಸೆ ತೋರಿಸಿ ಹನಿಟ್ರ್ಯಾಪ್ :
ಬಾರ್ ಲೈಸನ್ಸ್ ಕೊಡಿಸುವುದಾಗಿ ಪರಿಚಯ ಮಾಡಿಕೊಂಡು ನಿವೃತ್ತ ಪ್ರಾಂಶುಪಾಲರಿಗೆ ಹನಿಟ್ರ್ಯಾಪ್ ಮಾಡಿದ್ದ ಮಹಿಳೆ ಸೇರಿ ಮೂವರು ಕಿರಾತಕರನ್ನು ನಂದಿನಿ ಬಡಾವಣೆ ಪೊಲೀಸರು ಬಂಧಿಸಿದ್ದಾರೆ.
ತ್ರಿಶಾ ಅಲಿಯಾಸ್ ಜಾನ್ಸಿ, ಪೆದ್ದರೆಡ್ಡಿ, ದಾಮೋದರ್ ಬಂಧಿತ ಆರೋಪಿಗಳು. ಶಿವರುದ್ರಯ್ಯ ಹಣ ಕಳೆದುಕೊಂಡ ವ್ಯಕ್ತಿ. ಬಾರ್ ಲೈಸನ್ಸ ಪಡೆಯಲು ಪ್ರಯತ್ನ ಮಾಡುತ್ತಿದ್ದ ನಿವೃತ್ತ ಪ್ರಾಂಶುಪಾಲ ಶಿವರುದ್ರಯ್ಯ ಬಗ್ಗೆ ಮಾಹಿತಿ ಪಡೆದಿದ್ದ ಗ್ಯಾಂಗ್ , ಯುವತಿಯೊಬ್ಬರ ಕಡೆಯಿಂದ ಕರೆ ಮಾಡಿಸಿದ್ದಾರೆ. ಪೋನ್ ಮೂಲಕವೇ ಬಾರ್ ಲೈಸನ್ಸ್ ಕೊಡಿಸುವುದಾಗಿ ನಂಬಿಸಿ ಯುವತಿ ಸಲುಗೆ ಬೆಳೆಸಿಕೊಂಡಿದ್ದರು. ಆ ಬಳಿ ಯುವತಿಯ ಮೂಲಕ ಕರೆ ಮಾಡಿಸಿ ನಿವೃತ್ತಿ ಪ್ರಾಂಶುಪಾಲರನ್ನು ಮನೆಗೆ ಕರೆಸಿಕೊಂಡಿದ್ದ ಗ್ಯಾಂಗ್ ಯವತಿ ಜತೆ ಏಕಾಂಗಿಯಾಗಿ ಇದ್ದ ವೇಳೆ ಮೀಡಿಯಾ ಹೆಸರಿನಲ್ಲಿ ಹನಿಟ್ರ್ಯಾಪ್ ಗ್ಯಾಂಗ್ ಎಂಟ್ರಿಕೊಟ್ಟಿದೆ.
ಯವತಿ ಜತೆ ಬೆತ್ತೆಲೆ ಆಗಿದ್ದೀಯ ಎಂದು ಹೆದರಿಸಿ ಐದು ಲಕ್ಷ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಅಂತಿಮವಾಗಿ ಮೂರು ಲಕ್ಷ ರೂ. ಪಡೆದು ಬಿಟ್ಟು ಕಳಿಸಿದ್ದಾರೆ. ಈ ಬಳಿಕ ನಿವೃತ್ತ ಪ್ರಾಂಶುಪಾಲರು ನೀಡಿದ ದೂರಿನ ಮೇರೆಗೆ ಜಾನ್ಸಿ ಪೆದ್ದರೆಡ್ಡಿ ದಾಮೋದರ್ ಎಂಬ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಇದೇ ರೀತಿ ಹಲವರಿಗೆ ವಂಚನೆ ಮಾಡಿರುವುದು ಬೆಳಕಿಗೆ ಬಂದದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ನೇಣು ಬಿಗಿದುಕೊಂಡು ಗೃಹಿಣಿ ಆತ್ಮಹತ್ಯೆ:
ವಿವಾಹಿತೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಬಿದರಕಲ್ಲು ಜಿಂದಾಲ್ ಬಳಿ ನಡೆದಿದೆ. ಮೈಸೂರು ಮೂಲದ ಶೃತಿ ಮೃತಪಟ್ಟ ದುರ್ದೈವಿ. ಎಂಎಸ್ ಸಿ ಪದವಿ ಪಡೆದಿದ್ದ ಶೃತಿ ಕನಕಪುರ ಚಿಕ್ಕಮುದ್ವಾಡಿ ಮೂಲದ ವಿನಯ್ ಆರಾಧ್ಯ ಎಂಬುವರನ್ನು ಮದುವೆಯಾಗಿದ್ದರು. 2018 ರಲ್ಲಿ ಮದುವೆಯಾಗಿದ್ದು, ಬಿಇ ಎಂಟೆಕ್ ಮಾಡಿರುವ ವಿನಯ್ ಜಿಂದಾಲ್ ನಲ್ಲಿ ಕೆಲಸ ಮಾಡುತ್ತಿದ್ದರು.
ವಿನಯ್ ಆರಾಧ್ಯ ಕುಟುಂಬದವರು ಕಿರುಕುಳ ನೀಡುತ್ತಿದ್ದರು ಎಂಬ ಆರೋಪ ಕೇಳಿ ಬಂದಿದೆ. ಮನೆಯಲ್ಲಿ ಗಂಡ ಇಲ್ಲದ ವೇಳೆ ಶೃತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಮೃತಳ ಪೋಷಕರು ಇದು ಕೊಲೆ ಎಂದು ಆರೋಪಿಸಿದ್ದಾರೆ. ಮಾದನಾಯಕನಹಳ್ಳಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ವಿನಯ್ ಮತ್ತು ಶೃತಿ ನಡುವೆ ಕ್ಷುಲ್ಲಕ ವಿಚಾರಕ್ಕೆ ಜಗಳ ನಡೆಯುತ್ತಿತ್ತು. ಈ ಹಿನ್ನೆಲೆಯಲ್ಲಿ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದು, ಮೃತಳ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು.