ತೀರ್ಥ ಕುಡಿಸಿ ಚಿನ್ನ ದೋಚಿದ ಕಳ್ಳಸ್ವಾಮಿ
ಬೆಂಗಳೂರು, ನವೆಂಬರ್ 06 ; ಪಾರ್ಶ್ವವಾಯು ರೋಗ ಗುಣಪಡಿಸುತ್ತೇನೆಂದು ನಂಬಿಸಿ ಅಮಲು ಪದಾರ್ಥ ಬೆರೆಸಿದ ತೀರ್ಥ ಕುಡಿಸಿ ಕಳ್ಳ ಸ್ವಾಮಿಯೊಬ್ಬ ಚಿನ್ನ ದೋಚಿ ಪರಾರಿಯಾಗಿರುವ ಘಟನೆ ನಗರದ ಬಿ.ಟಿ.ಎಂ ಬಡಾವಣೆಯ 1 ನೇ ಹಂತದಲ್ಲಿ ನವೆಂಬರ್ 6 ಸೋಮವಾರ ನಡೆದಿದೆ.
ಬಿ.ಟಿ.ಎಂ ಬಡಾವಣೆಯ ಅಶ್ವಥ್ ರೆಡ್ಡಿ ಎಂಬುವರ ಮನೆಯಲ್ಲಿ ಕಳ್ಳಸ್ವಾಮಿ ತನ್ನ ಕೈಚಳಕ ತೋರಿಸಿದ್ದಾನೆ. ಅಶ್ವಥ್ ರೆಡ್ಡಿ ಅವರ ತಾಯಿ ಪಾರ್ಶ್ವವಾಯು ಸಮಸ್ಯೆಯಿಂದ ಬಲಳುತ್ತಿದ್ದರು. ಇದನ್ನೇ ಬಂಡವಾಳ ಮಾಡಿಕೊಂಡ ಕಳ್ಳ ಸ್ವಾಮಿ ಪೂಜೆ ಮಾಡಿ ಖಾಯಿಲೆ ವಾಸಿಮಾಡಿಸುವುದಾಗಿ ನಂಬಿಸಿದ್ದಾನೆ.

ಮಗನಿಗೆ ವಿಷಯ ತಿಳಿದರೆ ಬಯ್ಯುತ್ತಾನೆಂದು ಹೆದರಿ ಮಗನಿಲ್ಲದ ಸಮಯದಲ್ಲಿ ಕಳ್ಳಸ್ವಾಮಿಯನ್ನು ಅಶ್ವಥ್ ರೆಡ್ಡಿ ತಾಯಿ ಮನೆಗೆ ಕರೆದು ಪೂಜೆ ಮಾಡುವಂತೆ ಹೇಳಿ ತಾನು ಮತ್ತು ತನ್ನ ಜೊತೆಗೆ ಮಗಳನ್ನೂ ಪೂಜೆಗೆ ಕೂರಿಸಿಕೊಂಡಿದ್ದಾರೆ. ಪೂಜೆ ವೇಳೆಯಲ್ಲಿ ಚಿನ್ನಾಭರಣ ಧರಿಸುವಂತೆ ಹೇಳಿದ ಕಳ್ಳಸ್ವಾಮಿ ಕಪಟ ಪೂಜೆ ಆರಂಭ ಮಾಡಿ ಅಮಲಿನ ಪದಾರ್ಥ ಬೆರೆಸಿದ್ದ ತೀರ್ಥ ಕುಡಿಯಲು ನೀಡಿದ್ದಾನೆ.
ತೀರ್ಥ ಕುಡಿದು ತಾಯಿ ಮಗಳಿಬ್ಬರು ಪ್ರಜ್ಞಾಹೀನರಾಗಿ ಬಿದ್ದ ಕೂಡಲೆ ಅವರ ಮೈಮೇಲಿದ್ದ 160 ಗ್ರಾಂ ಚಿನ್ನ ದೋಚಿ ಕಳ್ಳ ಸ್ವಾಮಿ ಪೇರಿ ಕಿತ್ತಿದ್ದಾನೆ. ಇದೀಗ ಮಡಿವಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಳ್ಳಸ್ವಾಮಿಗಾಗಿ ಪೊಲೀಸರು ಹುಡುಕಾಟ ಪ್ರಾರಂಭಿಸಿದ್ದಾರೆ.












Click it and Unblock the Notifications