ಶಶಿಕಲಾಗೆ ರಾಜಾತಿಥ್ಯ ನೀಡುವಲ್ಲಿ ಪರಮೇಶ್ವರ್ ಕೈವಾಡ?
ಬೆಂಗಳೂರು, ಜುಲೈ 19: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಶಶಿಕಲಾಗೆ ರಾಜಾತಿಥ್ಯ ನೀಡಲು ಕಾರಾಗೃಹ ಅಧಿಕಾರಿಗಳ ಜೊತೆ ಮಾಜಿ ಗೃಹ ಸಚಿವ, ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ಕೂಡಾ ಭಾಗಿಯಾಗಿದ್ದಾರೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.
ತಮಿಳುನಾಡಿನ ಎಐಎಡಿಎಂಕೆಯ ಒ. ಪನ್ನೀರ್ ಸೆಲ್ವಂ ಬಣದ ನಾಯಕರೇ ಈ ಆರೋಪ ಮಾಡಿದ್ದಾರೆ. ಈ ಕುರಿತು ಎಐಎಡಿಎಂಕೆಯ ಕರ್ನಾಟಕ ಯುವ ಕಾರ್ಯದರ್ಶಿ ಆರ್ ಅನ್ಬುವೆಲ್ ಕುಮಾರ್ ಹೇಳಿಕೆ ನೀಡಿದ್ದಾರೆ.

"ಶಶಿಕಲಾ ಆಪ್ತ ವಿ. ಪುಗವೆಂದಿ ಮಾಜಿ ಗೃಹ ಸಚಿವ ಪರಮೇಶ್ವರ್ ಜತೆ ಉತ್ತಮ ಸಂಪರ್ಕ ಇಟ್ಟುಕೊಂಡಿದ್ದಾರೆ. ಪುಗವೆಂದಿ ಪರಮೇಶ್ವರ್ ಅವರಿಗೂ ಆಪ್ತರಾಗಿದ್ದು ಯಾವತ್ತೂ ಪರಮೇಶ್ವರ್ ಮನೆಯಲ್ಲೇ ಇರುತ್ತಾರೆ. ಈ ವಿಚಾರದಲ್ಲಿ ಅವರು ಖಂಡಿತ ಸಹಾಯ ಮಾಡಿರುತ್ತಾರೆ." ಎಂದಿದ್ದಾರೆ.
ಅಷ್ಟೇ ಅಲ್ಲದೆ, "ಈ ಬಗ್ಗೆ ನಾವು ಕೇಂದ್ರ ಗೃಹ ಇಲಾಖೆಗೆ ಪತ್ರ ಬರೆದು ತನಿಖೆಗೆ ಆಗ್ರಹಿಸುತ್ತೇವೆ," ಎಂದು ಅನ್ಬುವೆಲ್ ಕುಮಾರ್ ಹೇಳಿದ್ದಾರೆ.
ಜೈಲಿನ ಸಮೀಪ ಮನ್ನಾರ್ ಗುಡಿ ಗ್ಯಾಂಗ್
"ಇನ್ನು ಶಶಿಕಲಾ ಜೈಲಿಗೆ ಬಂದ ನಂತರ ಅವರ ಮನ್ನಾರು ಗುಡಿ ಕುಟುಂಬ ಪರಪ್ಪನ ಆಗ್ರಹಾರದ ಬಳಿಯೇ ಫ್ಲ್ಯಾಟ್ ಖರೀದಿ ಮಾಡಿದ್ದಾರೆ. ಅಲ್ಲಿಯೇ ಶಿಫ್ಟ್ ಆಗಿದ್ದಾರೆ. ಶಶಿಕಲಾ ರಾತ್ರಿ ಅಲ್ಲಿಯೇ ಮಲಗೋದಕ್ಕೆ ತೆರಳುತ್ತಾರೆ ಅನ್ನುವ ಸುದ್ದಿಯೂ ಇದೆ," ಎಂದಿರುವ ಅನ್ಬುವೆಲ್ ಕುಮಾರ್ ಈ ಬಗ್ಗೆಯೂ ತನಿಖೆಗೆ ಪತ್ರ ಬರೆಯುತ್ತೇವೆ ಎಂದಿದ್ದಾರೆ.
ಆಧಾರ ರಹಿತ ಆರೋಪ - ಪರಮೇಶ್ವರ್
ಆದರೆ ಈ ಆರೋಪವನ್ನು ಪರಮೇಶ್ವರ್ ಸರಾಸಗಟಾಗಿ ತಳ್ಳಿ ಹಾಕಿದ್ದಾರೆ. "ಆರೋಪ ಆಧಾರ ರಹಿತ. ನಾನು ಗೃಹ ಮಂತ್ರಿಯಾಗಿದ್ದಾಗ ಜೈಲಿನ ಅಧಿಕಾರಿಗಳು ಜೈಲು ಕೈಪಿಡಿಯಂತೆಯೇ ಕೆಲಸ ಮಾಡಿದ್ದಾರೆ. ನಾನು ಅವರ ಕೆಲಸದಲ್ಲಿ ಮಧ್ಯಪ್ರವೇಶವೂ ಮಾಡಿಲ್ಲ, ಪ್ರಭಾವವೂ ಬೀರಿಲ್ಲ. ಹೀಗಿದ್ದೂ ವಿವರವಾದ ತನಿಖೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ. ಸತ್ಯ ಮತ್ತು ನ್ಯಾಯ ಹೊರಬರಲಿದೆ," ಎಂದು ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದಾರೆ.












Click it and Unblock the Notifications