5 ಕಿಲೋ ಮೀಟರ್ ಕ್ರಮಿಸಲು ಒಂದು ಗಂಟೆ ಪ್ರಯಾಣ: ಇದು ಬೆಂಗಳೂರು ನಿವಾಸಿಗಳ ಸ್ಥಿತಿ
ಬೆಂಗಳೂರು, ಆಗಸ್ಟ್ 31: ಭಾರಿ ಮಳೆಯಿಂದಾಗಿ ಬೆಂಗಳೂರು ನಗರ ನಿವಾಸಿಗಳ ಪಾಡು ಹೇಳತೀರದಾಗಿದೆ. ಪ್ರತಿ ಬಾರಿ ಮಳೆ ಬಂದಾಗಲೂ ನಗರದಲ್ಲಿ ಪ್ರವಾಹದ ಸ್ಥಿತಿ ನಿರ್ಮಾಣವಾಗುತ್ತದೆ. ರಸ್ತೆಗಳು ಜಲಾವೃತವಾಗುವುದು ಸಾಮಾನ್ಯವಾಗಿದೆ.
ಮಳೆ ನೀರು ಕೊಯ್ಲು ವಿಧಾನಗಳ ಮೂಲಕ ಉಳಿಸಿದ ನೀರನ್ನು ಒಳಚರಂಡಿ ಜಾಲಕ್ಕೆ ಬಿಡುವುದನ್ನು ನಿಲ್ಲಿಸುವಂತೆ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಜನರಿಗೆ ಮನವಿ ಮಾಡಿದೆ. ಇದರಿಂದಾಗಿ ಚರಂಡಿಗಳು ತುಂಬಿ ಮ್ಯಾನ್ಹೋಲ್ಗಳು ತುಂಬಿ ರಸ್ತೆಗಳು ಜಲಾವೃತವಾಗಿವೆ ಎಂದು ಬಿಬಿಎಂಪಿ ಹೇಳಿದೆ.
ಬೆಂಗಳೂರಿಗರನ್ನು ಬೆಚ್ಚಿ ಬೀಳಿಸುತ್ತಿರುವ ಔಟರ್ ರಿಂಗ್ ರೋಡ್
ಮಂಗಳವಾರ ಬೆಳಗ್ಗೆ ನೀರು ನಿಂತಿದ್ದರಿಂದ ವೈಟ್ಫೀಲ್ಡ್ ಮತ್ತು ಸುತ್ತಮುತ್ತಲಿನ ಪ್ರಮುಖ ರಸ್ತೆಗಳು, ವಿಶೇಷವಾಗಿ ಇಕೋ ಸ್ಪೇಸ್ ಸುತ್ತಮುತ್ತಲಿನ ಪ್ರಮುಖ ರಸ್ತೆಗಳು ಜಲಾವೃತಗೊಂಡಿದ್ದು ಪ್ರಯಾಣಿಕರಿಗೆ ದುಃಸ್ವಪ್ನವಾಗಿತ್ತು. ಹೊರವರ್ತುಲ ರಸ್ತೆಯಲ್ಲಿ ನಾಲ್ಕು ಗಂಟೆಗೂ ಹೆಚ್ಚು ಕಾಲ ವಾಹನಗಳು ಟ್ರಾಫಿಕ್ನಲ್ಲಿ ಸಿಲುಕಿಕೊಂಡವು.
ಮಾರತ್ತಹಳ್ಳಿ ರಸ್ತೆ, ಬೆಳ್ಳಂದೂರು, ವರ್ತೂರು ಮುಖ್ಯರಸ್ತೆ, ಎಚ್ಎಸ್ಆರ್ ಲೇಔಟ್ ಸೇರಿದಂತೆ ಹಲವೆಡೆ ನೀರು ನಿಂತಿದೆ. ಪರಿಸ್ಥಿತಿ ಎಷ್ಟು ಹದಗೆಟ್ಟಿತ್ತು ಎಂದರೆ, ಕೆಲವೆಡೆ ಟ್ರಾಫಿಕ್ ಪೊಲೀಸ್ ಅಧಿಕಾರಿಗಳು ಸಹ ಮಳೆ ನೀರನ್ನು ತೆರವುಗೊಳಿಸಿ ಸಂಚಾರ ಸುಗಮವಾಗಿ ಸಾಗುವಂತೆ ನೋಡಿಕೊಂಡರು.
ಬಿಬಿಎಂಪಿ ವಿರುದ್ಧ ಜನರ ಆಕ್ರೋಶ
ಟ್ರಾಫಿಕ್ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡ ಸಾರ್ವಜನಿಕರು, ಅವ್ಯವಸ್ಥೆ ಬಗ್ಗೆ ಆಕ್ರೋಶ ಹೊರಹಾಕಿದರು. ಮಾರತ್ತಹಳ್ಳಿಯ ನಿವಾಸಿ ಲೋಕೇಶ್ ಬಿ.ಎಂ ಮಾತನಾಡಿ, ಮಾನ್ಯತಾ ಟೆಕ್ಪಾರ್ಕ್ಗೆ ಕೆಲಸಕ್ಕೆ ತೆರಳುತ್ತೇನೆ. ಕೇವಲ 5 ಕಿಲೋ ಮೀಟರ್ ದೂರವನ್ನು ಕಾರಿನಲ್ಲಿ ಪ್ರಯಾಣಿಸಲು ನನಗೆ ಒಂದು ಗಂಟೆ ಸಮಯ ಬೇಕಾಯಿತು. 8 ಗಂಟೆಗೆ ಮನೆಯಿಂದ ಹೊರಟ ನಾನು 11 ಗಂಟೆಗೆ ಕಚೇರಿ ತಲುಪಿದೆ ಎಂದು ಹೇಳಿದ್ದಾರೆ.
ರಸ್ತೆಗಳಲ್ಲಿ ಭಾರಿ ನೀರು ನಿಂತ ಪರಿಣಾಮ ಟ್ರಾಫಿಕ್ ಸಮಸ್ಯೆ ನಗರದಲ್ಲಿ ಹೆಚ್ಚಾಗಿತ್ತು. ಪೊಲೀಸರು ಕೂಡ ಏನೂ ಮಾಡದಂತಹ ಅಸಹಾಯಕ ಪರಿಸ್ಥಿತಿಯಲ್ಲಿದ್ದರು.
ರೇನ್ಬೋ ಡ್ರೈವ್ ಲೇಔಟ್ನಿಂದ ಅತಿಕ್ರಮಣ
ಬೆಂಗಳೂರು ಪೂರ್ವ ತಹಶೀಲ್ದಾರ್ ಅಜಿತ್ ಕುಮಾರ್ ಮಾತನಾಡಿ, ರೇನ್ಬೋ ಡ್ರೈವ್ ಲೇಔಟ್ನಿಂದ ಅತಿಕ್ರಮಣ ಮಾಡಿರುವುದು ಮೇಲ್ನೋಟಕ್ಕೆ ತಿಳಿದುಬಂದಿದೆ. ಅವರಿಗೆ ನೋಟಿಸ್ ಕಳುಹಿಸಲಾಗಿದೆ ಮತ್ತು ಮೋರಿಯ ಪ್ರಮುಖ ಪ್ರದೇಶಗಳಲ್ಲಿ ಆಸ್ತಿಯನ್ನು ಹೊಂದಿರುವ 13 ಮಾಲೀಕರು ವಿಚಾರಣೆಗೆ ಹಾಜರಾಗಿದ್ದಾರೆ ಎಂದು ಹೇಳಿದರು.
ಭಾರಿ ಮಳೆಯಿಂದಾಗಿ ದೊಡ್ಡನೆಕುಂದಿ, ಮುನ್ನೇಕೊಳಲು ಪೌರಕಾರ್ಮಿಕರ ಶೆಡ್ಗಳಿಗೂ ನೀರು ನುಗ್ಗಿದೆ. "ದೊಡ್ಡನೆಕುಂದಿ ಪ್ರದೇಶದಲ್ಲಿ ಸುಮಾರು 100 ಶೆಡ್ಗಳು ಜಲಾವೃತವಾಗಿವೆ. ಕಳೆದ ಬಾರಿಯೂ ಇದೇ ರೀತಿ ನಡೆದಿದ್ದು, ಅಧಿಕಾರಿಗಳು ಬಿಬಿಎಂಪಿ ಪೌರಕಾರ್ಮಿಕರಿಗೆ ಸೂಕ್ತ ಮನೆಗಳ ಭರವಸೆ ನೀಡಿದ್ದರು, ಆದರೆ ಯಾವುದೇ ಪ್ರಗತಿಯಾಗಿಲ್ಲ" ಎಂದು ಪೌರಕಾರ್ಮಿಕರ ಮುಖಂಡ ಷಣ್ಮುಗಂ ಹೇಳಿದರು.
ಚರಂಡಿಗಳ ಒತ್ತುವರಿಯಿಂದ ಜಲಾವೃತ
ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಮಾತನಾಡಿ, ನಗರ ಮುನ್ಸಿಪಲ್ ಕಾರ್ಪೊರೇಷನ್ (ಸಿಎಂಸಿ) ಕಾಲದಿಂದಲೂ ಈ ಸಮಸ್ಯೆ ಮುಂದುವರೆದುಕೊಂಡು ಬಂದಿದ್ದು, ಇಲ್ಲಿನ ಹಲವು ಪ್ರದೇಶಗಳಲ್ಲಿ ಮಳೆನೀರು ಚರಂಡಿಗಳನ್ನು ಒತ್ತುವರಿ ಮಾಡಲಾಗಿದೆ ಎಂದು ಹೇಳಿದರು.
"ಮಳೆನೀರು ಹರಿಯುವ ಪ್ರಮುಖ ಚರಂಡಿಯನ್ನು ಒತ್ತುವರಿ ಮಾಡಿಕೊಂಡ ಪರಿಣಾಮವಾಗಿ, ಬೆಳ್ಳಂದೂರಿನ ಇಕೋಸ್ಪೇಸ್ ಬಳಿ ಮಾರತ್ತಹಳ್ಳಿ ಹೊರ ವರ್ತುಲ ರಸ್ತೆಯ ಪ್ರವಾಹ ಉಂಟಾಗಿದೆ. ಸ್ಥಳೀಯರು ಈಗ ಸಮಸ್ಯೆಯನ್ನು ಅರಿತು ಸ್ವಲ್ಪ ಭೂಮಿಯನ್ನು ಬಿಟ್ಟುಕೊಡಲು ಒಪ್ಪಿದ್ದಾರೆ, ನೀರಿನ ತಿರುವು ಕಾಲುವೆ ನಿರ್ಮಿಸುವಂತೆ ಸ್ಥಳೀಯರು ಪಾಲಿಕೆಗೆ ಮನವಿ ಮಾಡಿದ್ದಾರೆ. ಬಾಕ್ಸ್ಗಳನ್ನು ಹಾಕಿ ದೊಡ್ಡ ಕಾಲುವೆಗೆ ಸಂಪರ್ಕ ಕಲ್ಪಿಸಬೇಕು" ಎಂದು ಹೇಳಿದರು.
ರಸ್ತೆಗಳಲ್ಲಿದ್ದ ನೀರು ತೆರವು ಮಾಡದ ಬಿಬಿಎಂಪಿ
ರಸ್ತೆಗಳಲ್ಲಿ ನಿಂತ ನೀರನ್ನು ತೆರವುಗೊಳಿಸಲು ಮಹಾನಗರ ಪಾಲಿಕೆ ಯಾವುದೇ ಪಂಪ್ಗಳನ್ನು ನಿಯೋಜಿಸದ ಕಾರಣ ಅನೇಕ ತಗ್ಗು ಪ್ರದೇಶಗಳಲ್ಲಿ ವಾಹನಗಳ ಸಂಚಾರ ಸ್ಥಗಿತಗೊಂಡಿದೆ ಎಂದು ನಿವಾಸಿಗಳು ದೂರಿದರು. ವಿಪರ್ಯಾಸವೆಂದರೆ, ಪ್ರವಾಹ ಸಂಭವಿಸಿದ ಪ್ರದೇಶಗಳಲ್ಲಿ ಚರಂಡಿಗಳನ್ನು ಸ್ವಚ್ಛಗೊಳಿಸಲಾಗಿದೆ ಎಂದು ಬಿಬಿಎಂಪಿ ಹೇಳಿಕೊಂಡಿದೆ.
ನಿಧಾನಗತಿಯಲ್ಲಿ ಸಾಗುತ್ತಿದ್ದ ಟ್ರಾಫಿಕ್ನಲ್ಲಿ ಕಾರು ಮತ್ತು ಬಸ್ಗಳ ನಡುವೆ ಬೈಕ್ ಸವಾರ ಗಿರಿರಾಜ್ ಎಂ.ಕೆ. ಸಿಲುಕಿಕೊಂಡಿದ್ದರು. "ಪ್ರವಾಹದ ರಸ್ತೆಗಳಿಂದ ತಪ್ಪಿಸಿಕೊಳ್ಳಲು ನನಗೆ ಯಾವುದೇ ಆಯ್ಕೆ ಇರಲಿಲ್ಲ. ಫುಟ್ಪಾತ್ನಲ್ಲಿ ಸವಾರಿ ಮಾಡಲು ಯತ್ನಿಸಿದ ಒಂದೆರಡು ಬೈಕ್ ಸವಾರರು ಬಿದ್ದಿರುವುದನ್ನು ಗಮನಿಸಿದ್ದೇನೆ,'' ಎಂದು ತಮ್ಮ ಸಂಕಷ್ಟ ಹೇಳಿಕೊಂಡಿದ್ದಾರೆ.