Breaking; ಮಹದೇವಪುರದಲ್ಲಿ ಮುಂದುವರೆದ ಜೆಸಿಬಿಗಳ ಘರ್ಜನೆ
ಬೆಂಗಳೂರು, ಸೆಪ್ಟೆಂಬರ್ 12: ಬೆಂಗಳೂರು ನಗರದಲ್ಲಿ ಸುರಿದ ಮಳೆ ಅವಾಂತರ ಸೃಷ್ಟಿಸಿದೆ. ಮಳೆ ನೀರು ಹರಿದು ಹೋಗದೆ ಬಡಾವಣೆಗಳಿಗೆ ನೀರು ನುಗ್ಗಲು ರಾಜಕಾಲುವೆ ಒತ್ತುವರಿಯೇ ಮುಖ್ಯ ಕಾರಣ ಎಂಬುದು ಸದ್ಯದ ಚರ್ಚೆ.
ನಗರದಲ್ಲಿ ಮಳೆ ಸುರಿದು ಹೆಚ್ಚು ಅವಾಂತರ ಸೃಷ್ಟಿಯಾಗಿದ್ದು ಮಹದೇವಪುರ ವಲಯದಲ್ಲಿ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಒತ್ತುವರಿಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ಆರಂಭಿಸಿದೆ.
ಸೋಮವಾರದಿಂದಲೇ ರಾಜಕಾಲುವೆ ಒತ್ತುವರಿ ತೆರವು ಮಾಡಲು ಜೆಸಿಬಿಗಳು ಘರ್ಜನೆ ನಡೆಸುತ್ತಿವೆ. ಜನರು ರಾಜಕಾಲುವೆ ಒತ್ತುವರಿ ಮಾಡಿದ್ದಲ್ಲಿ, ಕೂಡಲೇ ತೆರವು ಮಾಡಬೇಕೆಂದು ಮಹದೇವಪುರ ಶಾಸಕ ಅರವಿಂದ ಲಿಂಬಾವಳಿ ಮನವಿ ಮಾಡಿದ್ದಾರೆ.

ಮಂಗಳವಾರವೂ ಬಿಬಿಎಂಪಿಯ ಕಾರ್ಯಾಚರಣೆ ಮುಂದುವರೆದಿದೆ. ಚಲ್ಲಘಟ್ಟದಲ್ಲಿರುವ ಸರ್ವೇ ನಂ. 70ರಲ್ಲಿ ನಲಪಾಡ್ ಅಕಾಡೆಮಿಯಿಂದ ಒತ್ತುವರಿ ಮಾಡಲಾಗಿದ್ದು, ಬಿಬಿಎಂಪಿ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ತೆರವು ಕಾರ್ಯಾಚರಣೆ ನಡೆಸಿರು.
ಬಸವಣ್ಣನಗರದ ಗೋಪಾಲನ್ ಶಾಲೆಯ ಆವರಣದಲ್ಲಿ ಅಕ್ರಮ ಒತ್ತುವರಿ ತೆರವು ಕಾರ್ಯಾಚರಣೆ ನಡೆಯಿತು. ಮುನ್ನೇಕೊಳಾಲದ ಶಾಂತಿನಿಕೇತನ್ ಬಡಾವಣೆಯಲ್ಲಿ ಜೆಸಿಬಿಗಳು ಅಕ್ರಮ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಿದವು.

ಇಕೋ ಸ್ಪೇಸ್ ಒಳಗೆ ಒತ್ತುವರಿ ತೆರವು ಮತ್ತು ರಾಜಕಾಲುವೆ ಅಭಿವೃದ್ದಿ ಕಾರ್ಯಾಚರಣೆ ನಡೆಯಿತು. ಇಕೋ ಸ್ಪೇಸ್ ಆವರಣದ ಒಳಗೆ ರಾಜಕಾಲುವೆಯ ಮೇಲೆ ಕಟ್ಟಲಾಗಿದ್ದ ಕಾಂಕ್ರೀಟ್ ಸ್ಲ್ಯಾಬ್ ತೆರೆವುಗೊಳಿಸಿ ನೀರು ಸರಾಗವಾಗಿ ಹರಿಯಲು ಅನುಕೂಲ ಮಾಡಿಕೊಡಲಾಯಿತು.
ಇಕೋ ಸ್ಪೇಸ್ ಮುಂಭಾಗದಲ್ಲಿ ಬಿಬಿಎಂಪಿ ಮತ್ತು ಜಲಮಂಡಳಿ ವತಿಯಿಂದ ಸುಮಾರು 300 ಮೀಟರ್ ಉದ್ದದ 1.3 ಮೀಟರ್ ಸುತ್ತಳತೆಯ ಪೈಪ್ ಅಳವಡಿಸಲಾಗುತ್ತಿದೆ. ಇದು ಹೊರ ವರ್ತುಲ ರಸ್ತೆಯಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗುವ ಸಾಧ್ಯತೆಯನ್ನು ಕಡಿತಗೊಳಿಸಲಿದೆ.
ಪೊಲೀಸರ ಬಿಗಿ ಭದ್ರತೆಯಲ್ಲಿ ಶಾಂತಿನಿಕೇತನ ಲೇಔಟ್ನಲ್ಲಿ ಒತ್ತುವರಿಯನ್ನು ಜೆಸಿಬಿಗಳ ಮೂಲಕ ತೆರವು ಮಾಡಲಾಗುತ್ತಿದೆ. ಈ ಲೇಔಟ್ನಲ್ಲಿ ಬೆಳ್ಳಂದೂರು ಕೆರೆಯಿಂದ ವರ್ತೂರು ಕೆರೆಗೆ ಸಂಪರ್ಕ ಕಲ್ಪಿಸುವ ಕಾಲುವೆಯನ್ನು ಒತ್ತುವರಿ ಮಾಡಿ ಮನೆಗಳನ್ನು ನಿರ್ಮಾಣ ಮಾಡಲಾಗಿದೆ.
2000ನೇ ಇಸವಿಯಲ್ಲಿ ಈ ಲೇಔಟ್ ನಿರ್ಮಾಣ ಮಾಡಲಾಗಿದೆ. ಒಟ್ಟು 8 ಕಟ್ಟಡಗಳು 27 ಅಡಿಯ ರಾಜಕಾಲುವೆ ಒತ್ತುವರಿ ಮಾಡಿಕೊಂಡಿವೆ ಎಂಬ ಮಾಹಿತಿ ಇದೆ. ಈ ಪ್ರದೇಶದಲ್ಲಿ ಲೇಔಟ್ ನಿರ್ಮಾಣವಾಗುವ ಮೊದಲು 10 ಮೀಟರ್ ರಾಜಕಾಲುವೆ ಇತ್ತು, ಪ್ರಸ್ತುತ 8 ಮೀಟರ್ನಷ್ಟು ಒತ್ತುವರಿಯಾಗಿದೆ.
ಮುಖ್ಯಮಂತ್ರಿಗಳ ಸಭೆ; ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಅಧಿಕಾರಿಗಳ ಜೊತೆ ಸಭೆ ನಡೆಸಿದರು. ಒತ್ತುವರಿ ತೆರವು ಕಾರ್ಯಾಚರಣೆ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು, ಹಲವು ಸೂಚನೆಗಳನ್ನು ಸಹ ನೀಡಿದರು.
ಬೆಂಗಳೂರು ನಗರ ಜಿಲ್ಲಾಧಿಕಾರಿ, ಬಿಬಿಎಂಪಿ ಆಯುಕ್ತರು ಸಭೆಯಲ್ಲಿ ಪಾಲ್ಗೊಂಡಿದ್ದರು. ಅಕ್ರಮ ಕಟ್ಟಡಗಳಿಗೆ ಅಧಿಕಾರಿಗಳು ಮಾರ್ಕ್ ಮಾಡುತ್ತಿದ್ದಾರೆ. ಬಿಬಿಎಂಪಿ ಅಧಿಕಾರಿಗಳು ಮಾರ್ಕ್ಗಳ ಅನ್ವಯ ಒತ್ತುವರಿ ತೆರವು ಕಾರ್ಯಾಚರಣೆ ಕೈಗೊಂಡಿದ್ದಾರೆ.












Click it and Unblock the Notifications