ಬೆಂಗಳೂರು ಪೊಲೀಸರ ಬಲೆಗೆ ಅಂತಾರಾಜ್ಯ ಡಾಕು ಗ್ಯಾಂಗ್
ಬೆಂಗಳೂರು, ಫೆ. 14: ಕೋಟಿ ಕೋಟಿ ಲೋನ್ ಕೊಡಿಸುವುದಾಗಿ ಉದ್ಯಮಿಗಳನ್ನು ನಂಬಿಸಿ ಮುಂಗಡ ಬಡ್ಡಿ ರೂಪದಲ್ಲಿ ಕೋಟಿ ಕೋಟಿ ಪಡೆದು ವಂಚಿಸುತ್ತಿದ್ದ ಅಂತಾರಾಜ್ಯ ಡಾಕು ಗ್ಯಾಂಗ್ ಅನ್ನು ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಬಂಧಿಸಿದ್ದಾರೆ.
ಮುಂಬಯಿ ಮೂಲದ ಸಂತೋಷ್, ಸಂದೇಶ್ ಸೇರಿದಂತೆ ಐವರು ಆರೋಪಿಗಳನ್ನು ಬಂಧಿಸಿದ್ದು, ಆರೋಪಿಗಳಿಂದ 87 ಲಕ್ಷ ರೂ. ಹಣವನ್ನು ವಶಪಡಿಸಿಕೊಳ್ಳಲಾಗಿದೆ.
ಮೈಸೂರು ಮೂಲದ ಗಾರ್ಮೆಂಟ್ ಫ್ಯಾಕ್ಟರಿ ಉದ್ಯಮಿ ವಿನ್ಸೆಂಟ್ ಎಂಬುವರು ಬಿಸಿನೆಸ್ ಸಾಲಕ್ಕಾಗಿ ಪರದಾಡುತ್ತಿದ್ದರು. ಈ ವೇಳೆ ಲೋನ್ ಕೊಡಿಸುವುದಾಗಿ ಪರಿಚಯಿಸಿಕೊಂಡಿದ್ದ ಸಂತೋಷ್ ಶುಕ್ಲಾ ಮತ್ತು ಸಂದೇಶ್ ತಿವಾರಿ, ಬ್ಯುಜಿನೆಸ್ ಲೋನ್ ಕಡಿಮೆ ಬಡ್ಡಿಗೆ ಕೊಡಿಸುವುದಾಗಿ ನಂಬಿಸಿದ್ದರು. ಐಷಾರಾಮಿ ಹೋಟೆಲ್ಗಳಿಗೆ ಕರೆದುಕೊಂಡು ಹೋಗಿ ಸೂಟ್ ಕೇಸ್ನಲ್ಲಿ ಹಣ ತೋರಿಸುತ್ತಿದ್ದರು. ಇದನ್ನು ನಂಬಿದ್ದ ವಿನ್ಸೆಂಟ್ ತನಗೆ ನೂರು ಕೋಟಿ ಲೋನ್ ಕೊಡಿಸಿ ಎಂದು ಕೇಳಿದ್ದರು.
ಲೋನ್ ಕೊಡಿಸಲು ಮುಂಗಡವಾಗಿ ಒಂದು ಕೋಟಿ ರೂ. ಹಣ ಕೊಡುವಂತೆ ಹೇಳಿದ್ದಾರೆ. ಇವರ ಮಾತು ನಂಬಿ ವಿನ್ಸೆಂಟ್ 23 ಲಕ್ಷ ರೂ. ನಗದು ಹಣ ನೀಡಿದ್ದರು. ಆ ಬಳಿಕ ಬ್ಯಾಂಕ್ ಮೂಲಕ 64 ಲಕ್ಷ ರೂ. ಸೇರಿದಂತೆ ಒಟ್ಟು ಒಂದು ಕೋಟಿ ರೂ. ನೀಡಿದ್ದರು. ಹಣ ಪಡೆದಿದ್ದ ಆರೋಪಿಗಳು ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದರು.
ಮೋಸ ಹೋಗಿರುವ ಸಂಗತಿ ತಿಳಿದ ವಿನ್ಸೆಂಟ್ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಸಂಬಂಧ ತನಿಖೆ ನಡೆಸಿದ ಪೊಲೀಸರು ಐವರು ಅಂತಾರಾಜ್ಯ ಡಾಕು ಗ್ಯಾಂಗ್ ಅನ್ನು ಬಂಧಿಸಿದ್ದಾರೆ. ಬಂಧಿತರು ಅನೇಕ ಉದ್ಯಮಿಗಳಿಗೆ ಲಂಚ ಕೊಡಿಸುವುದಾಗಿ ನಂಬಿಸಿ ಮುಂಗಡ ಹಣ ಪಡೆದು ಮೋಸ ಮಾಡಿರುವುದು ಬೆಳಕಿಗೆ ಬಂದಿದೆ.
ಆರೋಪಿಗಳು, ಆಂಧ್ರ, ಮಹಾರಾಷ್ಟ್ರ ಹಾಗೂ ಕರ್ನಾಟಕದ ಸಣ್ಣ ಉದ್ಯಮಿಗಳನ್ನು ಟಾರ್ಗೆಟ್ ಮಾಡಿ ಹಣ ಪಡೆದು ನಾಮ ಹಾಕುತ್ತಿದ್ದರು. ಇವರ ಬ್ಯಾಂಕ್ ಖಾತೆಗಳಲ್ಲಿ ಕೋಟ್ಯಂತರ ರೂ. ವಹಿವಾಟು ನಡೆದಿದ್ದು, ಸದ್ಯ 84 ಲಕ್ಷ ರೂ. ಹಣವನ್ನು ಜಪ್ತಿ ಮಾಡಿದ್ದಾರೆ. ಆರೋಪಿಗಳು ವಂಚನೆ ಮಾಡಿರುವ ಸಂಬಂಧ ಇತರರು ದೂರು ನೀಡುತ್ತಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.