ಅನ್ನ, ನೀರು ಸಿಗದೆ ಬೆಂಗಳೂರಲ್ಲಿ ವೃದ್ಧ ದಂಪತಿ ಸಾವು!
ಬೆಂಗಳೂರು, ಮೇ 25 : ಬೆಂಗಳೂರನ್ನು ನಿವೃತ್ತರ ಸ್ವರ್ಗ ಎಂದು ಹೇಳುವುದುಂಟು. ಆದರೆ, ಅನ್ನ, ನೀರು ಸಿಗದೆ ವೃದ್ಧ ದಂಪತಿಗಳು ಸಾವನ್ನಪ್ಪಿರುವ ಘಟನೆ ನಗರದ ಹೃದಯಭಾಗದಲ್ಲಿ ನಡೆದಿದೆ. ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೃತಪಟ್ಟವರನ್ನು ವೆಂಕೋಬರಾವ್ (80) ಮತ್ತು ಕಲಾವತಿರಾವ್ ಎಂದು ಗುರುತಿಸಲಾಗಿದೆ. ಮನೋರಾಯನಪಾಳ್ಯದಲ್ಲಿನ ಸ್ವಂತ ಮನೆಯಲ್ಲಿ ದಂಪತಿಗಳು ಸುಮಾರು 20 ವರ್ಷಗಳಿಂದ ವಾಸವಾಗಿದ್ದರು. ದಂಪತಿಗೆ ಮಕ್ಕಳಿರಲಿಲ್ಲ.[ಅಂತ್ಯಸಂಸ್ಕಾರದ ವೇಳೆ ಕಣ್ಣು ಬಿಟ್ಟಿದ್ದ ಮೈಸೂರಿನ ಮಹಿಳೆ ಸಾವು]

ಮಂಗಳವಾರ ಸಂಜೆ ಮನೆಯಿಂದ ಕೆಟ್ಟ ವಾಸನೆ ಬರುತ್ತಿತ್ತು. ಇದರಿಂದ ಅನುಮಾನಗೊಂಡ ಸ್ಥಳೀಯರು ಹೆಬ್ಬಾಳ ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಬಂದು ಮನೆಯ ಬೀಗ ಒಡೆದು ನೋಡಿದಾಗ ದಂಪತಿಗಳ ಶವ ಪತ್ತೆಯಾಗಿದೆ. [ಹಿರಿಯ ನಾಗರಿಕರ ಸಾಮಾಜಿಕ ಕೆಲಸಕ್ಕೊಂದು ಸಲಾಂ]
ಕಲಾವತಿರಾವ್ ಅವರು ಮೂರು ದಿನಗಳ ಹಿಂದೆ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದ್ದು, ಕೊಳೆತ ಸ್ಥಿತಿಯಲ್ಲಿ ಅವರ ಮೃತದೇಹ ಪತ್ತೆಯಾಗಿದೆ. ಮನೆಯ ಡ್ರಾಯಿಂಗ್ ರೂಂನಲ್ಲಿ ವೆಂಕೋಬರಾವ್ ಅವರ ಶವ ಪತ್ತೆಯಾಗಿದೆ. [ಹಿರಿಯ ನಾಗರಿಕರಿಗೆ ದೊರೆಯುವ ಸೌಲಭ್ಯಗಳಾವವು?]
ನಿವೃತ್ತ ಪೊಲೀಸ್ ಪೇದೆ : ವೆಂಕೋಬರಾವ್ ಅವರು ಮುಖ್ಯಪೇದೆಯಾಗಿ ಕಾರ್ಯನಿರ್ವಹಿಸುತ್ತಿದ್ದರು. ನಿವೃತ್ತಿ ಬಳಿಕ ಪತ್ನಿ ಜೊತೆ ಮನೋರಾಯನಪಾಳ್ಯದಲ್ಲಿ ವಾಸವಾಗಿದ್ದರು. ಸ್ಥಳೀಯರ ಜೊತೆ ದಂಪತಿಗಳು ಹೆಚ್ಚು ಮಾತನಾಡುತ್ತಿರಲಿಲ್ಲ. ಆದ್ದರಿಂದ, ಇವರ ಬಗ್ಗೆ ಅಕ್ಕಪಕ್ಕದವರಿಗೂ ಹೆಚ್ಚಿನ ಮಾಹಿತಿ ತಿಳಿದಿಲ್ಲ. [ಬೆಂಗಳೂರು ಪಿಂಚಣಿದಾರರ ಸ್ವರ್ಗ ಅಲ್ಲ, ನರಕ!]
ದಂಪತಿಗಳು ಮನೆಯಲ್ಲಿಯೇ ಕಸವನ್ನು ರಾಶಿ ಹಾಕಿದ್ದರು. ಹೆಚ್ಚಾಗಿ ಹೊರಗೆ ಕಾಣಿಸಿಕೊಳ್ಳುತ್ತಿರಲಿಲ್ಲ. ಅನ್ನ, ನೀರು ಸಿಗದೆ ದಂಪತಿಗಳು ಮೃತಪಟ್ಟಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಹೆಬ್ಬಾಳ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.












Click it and Unblock the Notifications