ಅಹಿಂದ ವಿದ್ಯಾರ್ಥಿಗಳಿಗೆ ಪ್ರವಾಸ, ಸಿದ್ದು ವಿವಾದ
ಬೆಂಗಳೂರು, ನ. 14 : ಸಿಎಂ ಸಿದ್ದರಾಮಯ್ಯ ಅಧಿಕಾರಕ್ಕೆ ಬಂದು ಆರು ತಿಂಗಳು ಕಳೆದ ಹಿನ್ನಲೆಯಲ್ಲಿ ಅಹಿಂದ (ಹಿಂದುಳಿದ, ದಲಿತ, ಅಲ್ಪಸಂಖ್ಯಾತ) ವರ್ಗದ ಮಕ್ಕಳಿಗೆ ಭರ್ಜರಿ ಕೊಡುಗೆ ನೀಡಲು ಮುಂದಾಗಿದ್ದಾರೆ. ಅಹಿಂದ ಮಕ್ಕಳಿಗೆ ಮಾತ್ರ ಶೈಕ್ಷಣಿಕ ಪ್ರವಾಸ ಏರ್ಪಡಿಸುವ ನಿರ್ಧಾರವನ್ನು ಅವರು ಕೈಗೊಂಡಿದ್ದಾರೆ. ಆದರೆ, ಇದು ವಿವಾದಕ್ಕೆ ಕಾರಣವಾಗಿದ್ದು ಮಕ್ಕಳಲ್ಲಿ ತಾರತಮ್ಯ ಬೆಳೆಸುತ್ತಿದ್ದಾರೆ ಎಂಬ ಕೂಗು ಕೇಳಿಬಂದಿದೆ.
ಅಹಿಂದ ವರ್ಗದ ಮಕ್ಕಳಿಗೆ ಮಾತ್ರ ಶಾಲೆಯಿಂದ ಶೈಕ್ಷಣಿಕ ಪ್ರವಾಸ ಜಾರಿಗೊಳಿಸಲು ರಾಜ್ಯ ಸರ್ಕಾರ ಪ್ರಸ್ತಾವನೆ ಸಿದ್ಧಪಡಿಸಿದೆ. ಈ ಕುರಿತ ಹೊಣೆಯನ್ನು ಪ್ರವಾಸೊದ್ಯಮ ಇಲಾಖೆಗೆ ವಹಿಸಲಾಗಿದೆ. ಪ್ರಸ್ತಾವನೆಯಂತೆ ಅಹಿಂದ ವರ್ಗದ ವಿದ್ಯಾರ್ಥಿಗಳಿಗೆ ಮಾತ್ರ ಪ್ರತ್ಯೇಕ ಶೈಕ್ಷಣಿಕ ಪ್ರವಾಸ ಏರ್ಪಡಿಸಲಾಗುತ್ತದೆ.

ಪ್ರತಿ ಶಾಲೆಯಿಂದ ಅಹಿಂದ ವರ್ಗಕ್ಕೆ ಸೇರಿದ ಕೇವಲ 6 ಮಕ್ಕಳಿಗೆ ಮಾತ್ರ ಸರ್ಕಾರದ ವತಿಯಿಂದ ಶೈಕ್ಷಣಿಕ ಪ್ರವಾಸ ಏರ್ಪಡಿಸುವ ಕುರಿತು ಪ್ರಸ್ತಾವನೆಯಲ್ಲಿ ಉಲ್ಲೇಖಿಸಲಾಗಿದೆ. ಇದರನ್ನು ಅನುಷ್ಠಾನ ಮಾಡುವ ಹೊಣೆ ಪ್ರವಾಸೋದ್ಯಮ ಇಲಾಖೆಯದ್ದಾಗಿದೆ. ಆದರೆ, ಇದು ಮಕ್ಕಳಲ್ಲಿ ತಾರತಮ್ಯ ಬೆಳೆಸುವ ನೀತಿ ಎಂಬ ಕೂಗು ಕೇಳಿಬರುತ್ತಿದೆ.
ಕೇವಲ ಅಹಿಂದ ವರ್ಗಕ್ಕೆ ಸೇರಿದ ವಿದ್ಯಾರ್ಥಿಗಳಿಗೆ ಮಾತ್ರ ಸರ್ಕಾರದಿಂದ ಶೈಕ್ಷಣಿಕ ಪ್ರವಾಸ ಏರ್ಪಡಿಸಿದರೆ, ಮಕ್ಕಳಲ್ಲಿ ಜಾತಿ-ಮತಗಳ ವಿಷಯ ತುಂಬಿದಂಗಾಗುತ್ತದೆ. ಆದ್ದರಿಂದ ಯೋಜನೆಯನ್ನು ಅಹಿಂದ ಮಕ್ಕಳಿಗೆ ಮಾತ್ರ ಮೀಸಲಾಗಿಡುವುದು ಉತ್ತಮವಲ್ಲ ಎಂಬ ಅಭಿಪ್ರಾಯಗಳು ಕೇಳಿ ಬರುತ್ತಿವೆ. ಆದರೆ, ಈ ಕುರಿತು ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. (ಮುಸಲ್ಮಾನರ ಮದುವೆಗೆ ಶಾದಿ ಭಾಗ್ಯ)
ಈಗಾಗಲೇ ಸಿದ್ದರಾಮಯ್ಯ ಜಾರಿಗೆ ತಂದಿರುವ ಶಾದಿಭಾಗ್ಯ ಯೋಜನೆ ಭಾರೀ ವಿವಾದ ಹುಟ್ಟು ಹಾಕಿದೆ. ಎಲ್ಲಾ ವರ್ಗಗಳಿಗೂ ಯೋಜನೆ ವಿಸ್ತರಿಸಬೇಕೆಂದು ಪ್ರತಿಪಕ್ಷಗಳು ಪ್ರತಿಭಟನೆ ಆರಂಭಿಸಿವೆ. ಇಂತಹ ಸಮಯದಲ್ಲೇ ಅಹಿಂದ ವರ್ಗಕ್ಕೆ ಬಂಪರ್ ಕೊಡುಗೆ ನೀಡಲು ಹೊರಟಿರುವ ಸಿಎಂ ಕ್ರಮ ಮತ್ತಷ್ಟು ವಿರೋಧ ಎದುರಿಸಬೇಕಾಗುತ್ತದೆ.











Click it and Unblock the Notifications