ಶಾಲಾ ಮಕ್ಕಳಿಗೆ ಜಂಕ್ ಫುಡ್ ಬೇಡ: ಶಿಕ್ಷಣ ತಜ್ಞರ ಸಲಹೆ
ಬೆಂಗಳೂರು ಜೂ. 27: "ಹೊರಗಿನ ಎಣ್ಣೆ ಪದಾರ್ಥಗಳು, ಜಂಕ್ ಫುಡ್ ತಿಂದು ಅನಾರೋಗ್ಯಕ್ಕೆ ತುತ್ತಾಗುತ್ತಿರುವ ಇಂದಿನ ಮಕ್ಕಳಿಗೆ ಗುಣಮಟ್ಟದ ಪೌಷ್ಠಿಕ ಆಹಾರ ಒದಗಿಸುವುದು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಪ್ರತಿ ಶಾಲೆಯಲ್ಲೂ ಹಿರಿಯ ಶಿಕ್ಷಕರನ್ನು ಒಳಗೊಂಡ ಶಾಲಾ ಆರೋಗ್ಯ ಮತ್ತು ಸೌಖ್ಯ ತಂಡ ರಚಿಸುವುದು ಸೂಕ್ತ" ಎಂದು ಶಿಕ್ಷಣ ತಜ್ಞ ಉದಯ ರತ್ನಕುಮಾರ್ ಅಭಿಪ್ರಾಯಪಟ್ಟರು.
ಬೆಂಗಳೂರಿನ ಹೆಸರಘಟ್ಟ ಮುಖ್ಯರಸ್ತೆಯಲ್ಲಿರುವ ಸಿಡೇದಹಳ್ಳಿಯ ನಿಸರ್ಗ ವಿದ್ಯಾನಿಕೇತನ ಶಾಲೆಯಲ್ಲಿ ಸೋಮವಾರ ಹಮ್ಮಿಕೊಳ್ಳಲಾಗಿದ್ದ 'ಪೌಷ್ಠಿಕ ಆಹಾರ ಸಪ್ತಾಹ' ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಶಿಕ್ಷಣ ಇಲಾಖೆಯಲ್ಲಿ ಹಳೇ ಬೇರು ಹೊಸ ಹೆಸ(ಚಿಗು)ರು..!
"ಶಾಲೆಗಳಲ್ಲಿ ಮಕ್ಕಳಿಗೆ ಸಹ ಪೌಷ್ಟಿಕವಲ್ಲದ ಆಹಾರ ಪದಾರ್ಥ ನೀಡುವುದನ್ನು ತಡೆಗಟ್ಟಬೇಕು. ಅದಕ್ಕೆ ಅಧಿಕಾರಿಗಳು ಕಡಿವಾಣ ಹಾಕಬೇಕು" ಎಂದು ಸಲಹೆ ನೀಡಿದರು.
ಪೌಷ್ಠಿಕ ಆಹಾರ ನೀಡಬೇಕು; "ಎಳೆಯ ವಯಸ್ಸಿನ ಮಕ್ಕಳು ಶಾಲಾ ಹಂತದಲ್ಲೇ ಆಟವಾಡಿ ಸದೃಢರಾಗಿರುತ್ತಾರೆ. ಸದಾ ಚಟುವಟಿಕೆಯಿಂದ ಇರುತ್ತಾರೆ. ಅಂತಹ ಮಕ್ಕಳಿಗೆ ಬೆಳೆಯುವ ಹಂತದಲ್ಲಿ ಉತ್ತಮ ಆಹಾರದ ಅವಶ್ಯಕತೆ ಇರುತ್ತದೆ. ಆದ್ದರಿಂದ ಶಾಲಾ ಮಕ್ಕಳ ದೈಹಿಕ ಬೆಳವಣಿಗೆಗೆ ಅನುಕೂಲವಾಗುವಂತೆ ಸಮತೋಲಿತ ಆಹಾರದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಿದೆ" ಎಂದರು.
"ಮಕ್ಕಳ ಆರೋಗ್ಯದ ಮೇಲೆ ಸಕಾರಾತ್ಮಕ ಪರಿಣಾಮ ಬೀರುವ ನಾರು ಮತ್ತು ರೋಗ ನಿರೋಧಕ ಶಕ್ತಿಯ ಅಂಶಗಳಿರುವ ಆಹಾರವನ್ನು ನೀಡಬೇಕು. ಮಕ್ಕಳಿಗೆ ಅಗತ್ಯವಿರುವ ಪೌಷ್ಠಿಕಯುಕ್ತ ಆಹಾರವನ್ನು ಸಮತೋಲಿತ ಪ್ರಮಾಣದಲ್ಲಿ ನೀಡಿದರೆ ರೋಗ ನಿರೋಧ ಶಕ್ತಿ ವೃದ್ಧಿಸಲಿದೆ. ಈ ಕೊರೋನಾದಂತ ಪಿಡುಗಿನ ಕಾಲದಲ್ಲೂ ಮಕ್ಕಳು ಹೆಚ್ಚು ಆರೋಗ್ಯವಂತಾಗಿರಲು ಸಹಕಾರಯಾಗುತ್ತದೆ" ಎಂದು ಹೇಳಿದರು.
ಪೋಷಕರ ಪಾತ್ರ ಮಹತ್ವದ್ದು; "ಮಕ್ಕಳಲ್ಲಿ ಜಂಕ್ ಪುಡ್ ಸೇವನೆಯನ್ನು ನಿಯಂತ್ರಣ ಮಾಡುವಲ್ಲಿ ಪೋಷಕರು ಪಾತ್ರವು ಹೆಚ್ಚಿರುತ್ತದೆ. ಇದು ಮಕ್ಕಳ ಆರೋಗ್ಯ ಸುಧಾರಿಸಲು ಪೂರಕವಾಗುತ್ತದೆ. ಕಾಲಕ್ಕೆ ಅನುಗುಣವಾಗಿ ಮಕ್ಕಳ ಬೆಳವಣಿಗೆಗೆ ಹಣ್ಣು, ತರಕಾರಿ, ಹಾಲು ಸೇರಿದಂತೆ ಪೌಷ್ಠಿಕಯುಕ್ತ ಆಹಾರ ನೀಡಬೇಕು. ಇದರಿಂದ ಅವರು ಉತ್ತಮ ರೀತಿಯಲ್ಲಿ ಬೆಳವಣಿಗೆ ಹೊಂದುತ್ತಾರೆ" ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಶಾಲಾ ಆಡಳಿತಾಧಿಕಾರಿ ಯು. ಧನುಷ್ ಕುಮಾರ್ ವೇದಪುರಿ, ಮುಖ್ಯ ಶಿಕ್ಷಕರಾದ ಬಿ. ಜಯಮಾಲಾ ಶೆಟ್ಟಿ ಮತ್ತು ಎಸ್.ಕೆ. ಛಾಯಾ, ಪತ್ರಕರ್ತ ಎನ್. ಜಿ. ರಮೇಶ್ ಮತ್ತಿತರರು ಪಾಲ್ಗೊಂಡಿದ್ದರು.