ವಿದ್ಯುತ್‍ಚಾಲಿತ ವಾಹನಗಳಿಗೆ ಸಿಎಂ, ಸಚಿವ ದೇಶಪಾಂಡೆ ಚಾಲನೆ

ಬೆಂಗಳೂರು, ಫೆ.17: ಸದಾ ರಾಜಕೀಯ ಆಸಕ್ತರಿಂದ ತುಂಬಿರುವ ವಿಧಾನಸೌಧದ ಮುಂಭಾಗದಲ್ಲಿ ಶನಿವಾರ ಬೇರೆಯದೇ ವಾತಾವರಣ! ಅಲ್ಲಿ ಸಾಲಾಗಿ ನಿಂತಿದ್ದ ನೀಲಿ ಬಣ್ಣದ ಕಾರುಗಳು, ದ್ವಿಚಕ್ರ ವಾಹನಗಳು ಮತ್ತು ಆಟೋರಿಕ್ಷಾಗಳ ಸುತ್ತ ಆಸಕ್ತರ ದಂಡು; ಈ ವಾಹನಗಳ ಬಿಡಿಭಾಗಗಳು, ಬ್ಯಾಟರಿ, ಅದರ ಚಾರ್ಜಿಂಗ್ ವಿಧಾನ, ಅದು ಕೊಡುವ ಮೈಲೇಜ್, ಅದರ ಬೆಲೆ.... ಇತ್ಯಾದಿಗಳ ಬಗ್ಗೆ ಇವರೆಲ್ಲರ ಪ್ರಶ್ನೆಗಳು; ಅದಕ್ಕೆಲ್ಲ ಉತ್ತರಿಸುತ್ತಿತ್ತು ಇನ್ನೊಂದು ದಂಡು....

ಇದನ್ನೆಲ್ಲ ಕೇಳಿ ಆಶ್ಚರ್ಯವೇ? ನಿಜ, ಬೆಂಗಳೂರಿನ ಮತ್ತು ರಾಜ್ಯದ ವಾಹನೋದ್ಯಮದಲ್ಲಿ ಶನಿವಾರ ಚಾರಿತ್ರಿಕ ದಿನ. ಏಕೆಂದರೆ, ಭವಿಷ್ಯದ ವಾಹನಗಳಾದ ವಿದ್ಯುತ್‍ ಚಾಲಿತ ವಾಹನಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಭಾರೀ ಮತ್ತು ಮಧ್ಯಮ ಕೈಗಾರಿಕೆ ಸಚಿವ ಆರ್.ವಿ.ದೇಶಪಾಂಡೆ ಮತ್ತು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಅಧಿಕೃತವಾಗಿ ಚಾಲನೆ ನೀಡಿದರು.

ಜತೆಗೆ, ಇದೇ ಸಂದರ್ಭದಲ್ಲಿ ಇ-ವೆಹಿಕಲ್ಸ್ ಗೆ ಸಂಬಂಧಪಟ್ಟ ಹೊಸ ಲಾಂಛನವನ್ನೂ ಬಿಡುಗಡೆ ಮಾಡಲಾಯಿತು.

ವಿಧಾನಸೌಧಕ್ಕೆ ಸುತ್ತ ಹಾಕಿದ ವಾಹನಗಳು

ವಿಧಾನಸೌಧಕ್ಕೆ ಸುತ್ತ ಹಾಕಿದ ವಾಹನಗಳು

ಈ ಗಣ್ಯರಿಂದ ಹಸಿರು ನಿಶಾನೆ ಪಡೆದ ವಿದ್ಯುತ್‍ ಚಾಲಿತ ಸ್ಕೂಟರುಗಳು, ಆಟೋ ರಿಕ್ಷಾಗಳು ಮತ್ತು ಕಾರುಗಳು ಗಾಂಭೀರ್ಯದಿಂದ ವಿಧಾನಸೌಧದ ಆವರಣದಲ್ಲಿ ಒಂದೆರಡು ಸುತ್ತು ಹಾಕಿದವು. ಬಳಿಕ, ನೆರೆದಿದ್ದ ಕುತೂಹಲಿಗಳೂ ಅವುಗಳನ್ನು ಚಲಾಯಿಸಿ ಒಂದು ವಿಶಿಷ್ಟ ಅನುಭವವನ್ನು ಪಡೆದುಕೊಂಡರು.

ಚಾರಿತ್ರಿಕ ದಿನ

ಚಾರಿತ್ರಿಕ ದಿನ

ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಆರ್.ವಿ.ದೇಶಪಾಂಡೆ, ಇದು ಕರ್ನಾಟಕ ಮತ್ತು ಬೆಂಗಳೂರಿನ ಪಾಲಿಗೆ ಚಾರಿತ್ರಿಕ ದಿನ. ಮಿತಿ ಮೀರಿದ ವಾಹನಗಳಿಂದಾಗಿ ವಾಯು ಮಾಲಿನ್ಯ ಮತ್ತು ಶಬ್ದ ಮಾಲಿನ್ಯದಿಂದ ತತ್ತರಿಸುತ್ತಿರುವ ಆಧುನಿಕ ಜೀವನ ಶೈಲಿಗೆ ವಿದ್ಯುತ್‍ಚಾಲಿತ ವಾಹನಗಳು ಭವಿಷ್ಯದ ಹೊಂಗಿರಣಗಳಾಗಿವೆ. ನಾವು ಹಂತಹಂತವಾಗಿ ವಿದ್ಯುತ್‍ಚಾಲಿತ ವಾಹನಗಳ ಬಳಕೆಯನ್ನು ಹೆಚ್ಚುಗೊಳಿಸುತ್ತಾ ಹೋಗುತ್ತೇವೆ. 2020ರ ಹೊತ್ತಿಗೆ ಎಲ್ಲೆಡೆ ಈ ವಾಹನಗಳು ಬರಬೇಕು ಎನ್ನುವುದು ನಮ್ಮ ಗುರಿಯಾಗಿದೆ,'' ಎಂದರು.

ಸರಕಾರದಿಂದ ಉತ್ತೇಜನ ಕ್ರಮ

ಸರಕಾರದಿಂದ ಉತ್ತೇಜನ ಕ್ರಮ

"ಸದ್ಯಕ್ಕೆ ವಿದ್ಯುತ್‍ಚಾಲಿತ ವಾಹನಗಳಲ್ಲಿ ಬ್ಯಾಟರಿಯ ಬೆಲೆ ದುಬಾರಿಯಾಗಿದೆ. ಇದು ಜನರ ಕೈಗೆಟುಕುವಂತಾದರೆ ಉಪಯೋಗವಾಗುತ್ತದೆ ಎನ್ನುವ ದೃಷ್ಟಿಯಿಂದ ರಾಜ್ಯ ಸರಕಾರದ ನೀತಿಯಲ್ಲಿ ಹಲವು ಉತ್ತೇಜನಾ ಕ್ರಮಗಳನ್ನು ಅಳವಡಿಸಲಾಗಿದೆ. ಉದ್ಯಮಿಗಳು ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕು,'' ಎಂದು ಅವರು ಸಲಹೆ ನೀಡಿದರು.

ಹೊಸ ನೀತಿ

ಹೊಸ ನೀತಿ

"ಉದ್ಯಮ ಕ್ಷೇತ್ರ ಮತ್ತು ಸಾರ್ವಜನಿಕರಿಬ್ಬರಿಗೂ ಲಾಭವಾಗಬೇಕೆಂಬ ದೃಷ್ಟಿಯಿಂದ ರಾಜ್ಯವು ವಿದ್ಯುತ್‍ ಚಾಲಿತ ವಾಹನಗಳು ಮತ್ತು ಇಂಧನ ಸಂಗ್ರಹಣೆ ನೀತಿ - 2017ನ್ನು ಜಾರಿಗೆ ತಂದಿದೆ. ಇಂಥದೊಂದು ನೀತಿ ಕೇಂದ್ರ ಸರಕಾರದಲ್ಲಾಗಲಿ, ಉಳಿದ ರಾಜ್ಯಗಳಲ್ಲಾಗಲಿ ಇಲ್ಲ. ಈ ಮೂಲಕ ನಾವು ಹೊಸ ಮೈಲಿಗಲ್ಲನ್ನು ಸ್ಥಾಪಿಸಿದ್ದೇವೆ,'' ಎಂದು ದೇಶಪಾಂಡೆ ವಿವರಿಸಿದರು.

ತಂತ್ರಜ್ಞಾನ ಅಭಿವೃದ್ಧಿಗೆ ದೇಶಪಾಂಡೆ ಕರೆ

"ಅಗಾಧವಾಗಿ ಬೆಳೆಯುತ್ತಿರುವ ಬೆಂಗಳೂರಿನಂಥ ನಗರಗಳಲ್ಲಿ ನೆಮ್ಮದಿ ಮತ್ತು ಶಾಂತಿಯಿಂದ ಕೂಡಿದ ಪ್ರಯಾಣ ಅನಿವಾರ್ಯವಾಗಿದೆ. ಕರ್ಕಶ ಶಬ್ದವಿಲ್ಲದೆ, ಹೊಗೆ ಉಗುಳದೆ ಸಾಗುವ ಇ-ವಾಹನಗಳು ಈಗ ಅತ್ಯಗತ್ಯವಾಗಿವೆ. ಉದ್ಯಮ ಲೋಕ ಕೂಡ ಇದಕ್ಕೆ ಸಂಬಂಧಿಸಿದ ತಂತ್ರಜ್ಞಾನವನ್ನು ಮತ್ತಷ್ಟು ಅಭಿವೃದ್ಧಿ ಪಡಿಸಬೇಕು," ಎಂದು ಅವರು ಕರೆ ನೀಡಿದರು.

ಸಮಾರಂಭದಲ್ಲಿ ಸರಕಾರದ ಹೆಚ್ಚುವರಿ ಕಾರ್ಯದರ್ಶಿ ಡಿ.ವಿ.ಪ್ರಸಾದ್, ಕೈಗಾರಿಕಾ ಆಯುಕ್ತ ದರ್ಪಣ್ ಜೈನ್ ಸೇರಿದಂತೆ ಹಲವು ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+