ಕಾಂಗ್ರೆಸ್-ಜೆಡಿಎಸ್ ಪಕ್ಷದವರು ಕಳ್ಳರು: ಸದಾನಂದಗೌಡ ಆರೋಪ
ಬೆಂಗಳೂರು, ಸೆಪ್ಟೆಂಬರ್ 17: ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದವರೇ ಕಳ್ಳರು, ತಾವೇ ಕಳ್ಳತನ ಮಾಡಿ ಬೇರೆಯವರನ್ನು ಕಳ್ಳರೆಂದು ಬಿಂಬಿಸಲು ಹೊರಟಿರುವ ಕಳ್ಳರಂತೆ ಕಾಂಗ್ರೆಸ್-ಜೆಡಿಎಸ್ ನವರು ವರ್ತಿಸುತ್ತಿದ್ದಾರೆ ಎಂದು ಕೇಂದ್ರ ಸಚಿವ ಡಿವಿ ಸದಾನಂದಗೌಡ ತಮ್ಮ ರಾಜಕೀಯ ವಿರೋಧಿಗಳ ವಿರುದ್ಧ ಹರಿಹಾಯ್ದಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬಿಜೆಪಿ ಹತ್ತು ಶಾಸಕರು ಕಾಂಗ್ರೆಸ್ ಸಂಪರ್ಕದಲ್ಲಿದ್ದಾರೆ ಎಂದು ಕಾಂಗ್ರೆಸಿಗರು ಹೇಳುತ್ತಿದ್ದಾರೆ, ಮುಖ್ಯಮಂತ್ರಿ ಕುಮಾರಸ್ವಾಮಿ ಕೂಡ ಬಿಜೆಪಿಯ ಶಾಸಕರು ತಮ್ಮೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಹೇಳುತ್ತಿದ್ದಾರೆ, ಹೀಗಿದ್ದಾಗ ಕಳ್ಳರು ಯಾರೆಂದು ಅವರೇ ಹೇಳಬೇಕು.
ಒಂದೊಮ್ಮೆ ಕಾಂಗ್ರೆಸ್ ತೊರೆದು ಪ್ರಜಾಸತ್ತಾತ್ಮಕವಾಗಿ ಬಿಜೆಪಿಗೆ ಸೇರ್ಪಡೆಯಾದರೆ ನಾವ ಬೇಡ ಎಂದು ಹೇಳುವುದಿಲ್ಲ, ಶಾಸಕರ ಶಿವರಾಮ್ ಹೆಬ್ಬಾರ್ ಆಗಿರಬಹುದು, ಇನ್ನು ಯಾರೇ ಆಗಿದ್ದರೂ ಬಿಜೆಪಿಗೆ ಬಂದರೆ ಸ್ವಾಗತಿಸುತ್ತೇವೆ, ಪ್ರಜಾಪ್ರಭುತ್ವ ವ್ಯವಸ್ಥೆಯ ಬಗ್ಗೆ ಬಿಜೆಪಿಗೆ ನಂಬಿಕೆ ಇದೆ ಎಂದರು.

ಕರ್ನಾಟಕದಲ್ಲಿ ಆಪರೇಷನ್ ಕಮಲ ನಡೆಯುತ್ತಿದೆ ಎನ್ನುವ ಕುರಿತು ಪ್ರತಿಕ್ರಿಯೆ ನೀಡಿದ ಅವರು, ವಿಧಾನಸಭೆ ಚುನಾವಣೆ ಮುಗಿದ ಬಳಿಕ ಅತಿದೊಡ್ಡ ಪಕ್ಷವಾದ ಬಿಜೆಪಿಗೆ ಅಧಿಕಾರ ರಚನೆಗೆ ಬೇಡಿಕೆ ಸಲ್ಲಿಸಿದ್ದೆವು, ಆಗ ಕಾರಣಾಂತರಗಳಿಂದ ಸರ್ಕಾರ ರಚಿಸಲು ಸಾಧ್ಯವಾಗಿಲ್ಲ. ಈಗ ಅತೀ ಕಡಿಮೆ ಸ್ಥಾನ ಪಡೆದ ಜೆಡಿಎಸ್ ಅಧಿಕಾರಕ್ಕೆ ಬಂದಿದೆ.
ಅಲ್ಪ ಮತದ ಸರ್ಕಾರ ಬಿದ್ದು ಹೋದಾಗ ಒಂದು ರಾಷ್ಟ್ರೀಯ ಪಕ್ಷವಾಗಿ ಬಿಜೆಪಿ ಸರ್ಕಾರ ರಚನೆ ಮಾಡುವುದು ಅನಿವಾರ್ಯವಾಗುತ್ತದೆ. ಅಂತಹ ಪರಿಸ್ಥಿತಿ ಬಂದರೆ ಬಿಜೆಪಿ ಸರ್ಕಾರ ರಚನೆ ಮಾಡುವುದು ಕೂಡ ಸಂವಿಧಾನಾತ್ಮಕವಾಗಿಯೇ ಇರುತ್ತದೆ. ಅದಕ್ಕೆ ಯಾರ ಒಪ್ಪಿಗೆಯೂ ಬೇಕಾಗಿಲ್ಲ ಎಂದು ಕಾಂಗ್ರೆಸ್ ಹಾಗೂ ಜೆಡಿಎಸ್ ಗೆ ತಿರುಗೇಟು ನೀಡಿದರು.












Click it and Unblock the Notifications