ಮೆಟ್ರೋ ಭದ್ರತಾ ಸಿಬ್ಬಂದಿ ಮೇಲೆ ಹಲ್ಲೆ, ಪೊಲೀಸಪ್ಪನ ಬಂಧನ
ಬೆಂಗಳೂರು, ಜುಲೈ 17 : ಕಂಠಪೂರ್ತಿ ಕುಡಿದು ಮೆಟ್ರೋ ಭದ್ರತಾ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದ ಟ್ರಾಫಿಕ್ ಹೆಡ್ ಕಾನ್ಸ್ಟೆಬಲ್ ನನ್ನು ಭಾನುವಾರ ಪೊಲೀಸರು ಬಂಧಿಸಿದ್ದಾರೆ.
ಪಾನಮತ್ತರಾಗಿದ್ದ ಟ್ರಾಫಿಕ್ ಹೆಡ್ ಕಾನ್ಸ್ಟೆಬಲ್ ಜಿ.ಎಚ್.ವೀರಣ್ಣ ಅವರನ್ನು ಮೆಟ್ರೊ ನಿಲ್ದಾಣದೊಳಗೆ ಹೋಗಲು ಭದ್ರತಾ ಸಿಬ್ಬಂದಿ ಬಿಡಲಿಲ್ಲ. ಇದರಿಂದಾಗಿ ಅವರು ಕೋಪಗೊಂಡು ಹಲ್ಲೆ ನಡೆಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ವಿಮಾನ ನಿಲ್ದಾಣ ಸಂಚಾರ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೆಬಲ್ ಜಿ.ಎಚ್.ವೀರಣ್ಣ ಶುಕ್ರವಾರ ರಾತ್ರಿ (ಜ. 14 8.30ರ ಸುಮಾರಿಗೆ ಹೊಸಹಳ್ಳಿ ಮೆಟ್ರೊ ಸ್ಟೇಷನ್ ಗೆ ಆಗಮಿಸಿದ್ದರು.
ಆಗ ಸೆಕ್ಯುರಿಟಿ ಗಾರ್ಡ್ ಭೀಮಪ್ಪ ಕಿಲಾರಿ ಭದ್ರತಾ ತಪಾಸಣೆ ನಡೆಸಲು ಮುಂದಾದಗ ಕಾನ್ಸ್ಟೆಬಲ್ ವೀರಣ್ಣ ನಿರಾಕರಿಸಿ ಕಿಲಾರಿ ಮೇಲೆ ಹಲ್ಲೆ ನಡೆಸಿದ್ದರು. ಕಿಲಾರಿಯವರ ಸಹೋದ್ಯೋಗಿಗಳು ಮಧ್ಯ ಪ್ರವೇಶಿಸಿ ಜಗಳವನ್ನು ಶಮನಗೊಳಿಸಿದರು.
ಬಳಿಕ ಸೆಕ್ಯುರಿಟಿ ಗಾರ್ಡ್ ಕಿಲಾರಿ ವಿಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು. ಅದರ ಮೇರೆಗೆ ವೀರಣ್ಣ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಕಳೆದ 20 ದಿನಗಳಿಂದ ಆರೋಗ್ಯವಿಲ್ಲವೆಂದು ರಜೆಯಲ್ಲಿದ್ದ ವೀರಣ್ಣ ಅಂದು ಕಚೇರಿ ಕೆಲಸದಲ್ಲಿರಲಿಲ್ಲ.
ಐಪಿಸಿ ಸೆಕ್ಷನ್ 341,323,504 ಮತ್ತು 506ರಡಿಯಲ್ಲಿ ಪೊಲೀಸ್ ಕಾನ್ಸ್ಟೆಬಲ್ ವೀರಣ್ಣ ವಿರುದ್ಧ ದೂರು ದಾಖಲಿಸಲಾಗಿದೆ. ಆರೋಪಿಯನ್ನು ಬೇರೆ ಆರೋಪಿಗಳಂತೆಯೇ ನೋಡಿಕೊಳ್ಳಲಾಗುವುದು. ಕಾನೂನು ಕ್ರಮವನ್ನು ಅನುಸರಿಸಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಪಶ್ಚಿಮ ವಲಯ ಡಿಸಿಪಿ ಅನುಚೇತ್ ತಿಳಿಸಿದ್ದಾರೆ.












Click it and Unblock the Notifications