ಒಕ್ಕಲಿಗ ಸಂಘದ ನಿರ್ದೇಶಕ ಸ್ಥಾನಕ್ಕೆ ಡಾ. ಅಂಜನಪ್ಪ ನೇತೃತ್ವದ ತಂಡ ಸಜ್ಜು
ಬೆಂಗಳೂರು, ನವೆಂಬರ್14: ಒಕ್ಕಲಿಗ ಸಂಘದ ನಿರ್ದೇಶಕ ಸ್ಥಾನಕ್ಕೆ 13 ಅಭ್ಯರ್ಥಿಗಳ ಹೆಸರನ್ನು ಭಾನುವಾರ ಅಧಿಕೃತವಾಗಿ ಘೋಷಣೆ ಮಾಡಲಾಗಿದೆ. ಸಮುದಾಯದ ಸರ್ವಾಂಗೀಣ ಅಭಿವೃದ್ಧಿ, ಮಕ್ಕಳಿಗೆ ಉತ್ತಮ ಶಿಕ್ಷಣ, ಆರೋಗ್ಯ ಕ್ಷೇತ್ರದಲ್ಲಿ ಬದಲಾವಣೆ, ಪ್ರತಿಭಾವಂತರಿಗೆ
ಪ್ರೊತ್ಸಾಹ ಸ್ವಚ್ಛ ಮತ್ತು ದಕ್ಷ ಆಡಳಿತ ನೀಡುವ ಗುರಿಯನ್ನು ಹೊಂದಿರುವುದಾಗಿ ಡಾ. ಅಂಜನಪ್ಪ ನೇತೃತ್ವದ ತಂಡ ಘೋಷಿಸಿದೆ.
ಬೆಂಗಳೂರಿನ ಅರಮನೆ ಮೈದಾನದ ತ್ರಿಪುರ ವಾಸಿನಿಯಲ್ಲಿ ಭಾನುವಾರದಂದು ನಡೆದ ಕಾರ್ಯಕ್ರಮದಲ್ಲಿ ಸುಪ್ರೀಂಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ವಿ. ಗೋಪಾಲಗೌಡ ಅವರ ಸಮ್ಮುಖದಲ್ಲಿ ಖ್ಯಾತ ವೈದ್ಯ ಡಾ.ಆಂಜನಪ್ಪ, ನಿವೃತ್ತ ಉಪಕುಲಪತಿ ಪ್ರೊ. ನಾರಾಯಣಗೌಡ ನೇತೃತ್ವದ 13 ಮಂದಿ ನಿದೇರ್ಶಕ ಸ್ಥಾನದ ಅಭ್ಯರ್ಥಿಗಳ ಹೆಸರುಗಳನ್ನು ಸಾವಿರಾರು ಸಂಖ್ಯೆಯ ಜನರ ಸಮ್ಮುಖದಲ್ಲಿ ಘೋಷಣೆ ಮಾಡಲಾಯಿತು.
ಪ್ರತಿಜ್ಞೆ ಸ್ವೀಕರಿಸಿದ ಅಭ್ಯರ್ಥಿಗಳು ಯಾವುದೇ ರೀತಿಯ ಪ್ರತಿಫಲಾಪೇಕ್ಷೆ ಇಲ್ಲದೆ, ಸ್ವಹಿತಾಸಕ್ತಿಗೆ ಗಮನ ಕೊಡದೆ ಸಮುದಾಯದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಸೇವೆ ಮಾಡುತ್ತೇವೆ ಎಂದು ಶಪಥ ಮಾಡಿದರು. ಚುನಾವಣಾ ನಿರ್ದೇಶಕ ಸ್ಥಾನಕ್ಕೆ ಸ್ಪರ್ಧಿಸಿರುವಾ ಅಭ್ಯರ್ಥಿಗಳು ಘೋಷಣಾ ಮತ್ತು ಪ್ರತಿಜ್ಞೆಯನ್ನು ತೆಗೆದುಕೊಂಡು ಸಮುದಾಯದ ಹಿತ, ಎಲ್ಲ ಅಭಿವೃದ್ಧಿಗಾಗಿ ಶ್ರಮಿಸುತ್ತೇವೆ ಎಂದು ಘೋಷಿಸಿದರು.

ಒಕ್ಕಲಿಗ ಸಮುದಾಯದ ಮಕ್ಕಳ ಶಿಕ್ಷಣಕ್ಕೆ ಒತ್ತು
ಪ್ರಮುಖವಾಗಿ ಒಕ್ಕಲಿಗ ಸಮುದಾಯದ ಮಕ್ಕಳ ಶಿಕ್ಷಣಕ್ಕೆ ಒತ್ತು ಕೊಟ್ಟು, ಪ್ರತಿಭಾವಂತ ಯುವಕರು ಮತ್ತು ಯುವತಿಯರು ಹಾಗೂ ವಿದ್ಯಾವಂತರನ್ನು ಗುರುತಿಸುವುದು ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದವರಿಗೆ ಆರ್ಥಿಕ ನೆರವು ನೀಡುತ್ತೇವೆ ಎಂದು ವಾಗ್ದಾನ ಮಾಡಿದರು.
ರಾಜ್ಯದಲ್ಲೇ 2ನೇ ಅತಿ ದೊಡ್ಡ ಸಮುದಾಯವಾಗಿರುವ ಒಕ್ಕಲಿಗ ಸಮುದಾಯವು ಎಲ್ಲ ಕ್ಷೇತ್ರಗಳಲ್ಲೂ ಅಭಿವೃದ್ಧಿ ಹೊಂದಬೇಕು, ಶೈಕ್ಷಣಿಕ ಸಂಸ್ಥೆಗಳ ಸ್ಥಾಪನೆ ಮೂಲಕ ಶಿಕ್ಷಣಕ್ಕೆ ಒತ್ತು ಕೊಡುವುದು, ವೈದ್ಯಕೀಯ ಮತ್ತು ಇಂಜಿನಿಯರಿಂಗ್ ಕಾಲೇಜು ಸ್ಥಾಪನೆ, ಸಮುದಾಯದ ಆಸ್ತಿ ಸಂರಕ್ಷಣೆ ಮಾಡುವ ಶಪಥವನ್ನು ಮಾಡಲಾಯಿತು.

ಖ್ಯಾತ ವೈದ್ಯ ಡಾ.ಅಂಜನಪ್ಪ ಮಾತನಾಡಿ
ಪ್ರಾಸ್ತವಿಕವಾಗಿ ಮಾತನಾಡಿದ ಖ್ಯಾತ ವೈದ್ಯ ಡಾ.ಅಂಜನಪ್ಪ, ಈ ಬಾರಿಯ ಒಕ್ಕಲಿಗ ಕಾರ್ಯಕಾರಿ ಸಮಿತಿಯ ನಿರ್ದೇಶಕ ಸ್ಥಾನಕ್ಕೆ ನಡೆಯಲಿರುವ ಚುನಾವಣೆ ಹಿಂದಿನ ಚುನಾವಣೆಗಿಂತಲೂ ವಿಭಿನ್ನ ಮತ್ತು ವಿಶಿಷ್ಟವಾಗಿದೆ. ನಾವು ಯಾವುದೇ ರೀತಿಯ ಆಸೆ ಆಮಿಷಗಳಿಗೆ ಬಲಿಯಾಗದೆ ಸಮುದಾಯದ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಚುನಾವಣೆ ಎದುರಿಸೋಣ ಎಂದು ಕರೆ ನೀಡಿದರು.
ಸಮುದಾಯದ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಪ್ರಜ್ಞಾವಂತರು ಮತ ಚಲಾಯಿಸಬೇಕು. ಯಾವುದೇ ರೀತಿಯ ಆಸೆ, ಆಮಿಷಗಳಿಗೆ ಬಲಿಯಾಗದೆ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ನಮ್ಮ ನೇತೃತ್ವದ ತಂಡವನ್ನು ಗೆಲ್ಲಿಸಬೇಕೆಂದು ಮನವಿ ಮಾಡಿದರು
ನಮ್ಮ ನೇತೃತ್ವದಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳು ಉತ್ತಮವಾದ ಸಚ್ಛಾರಿತ್ರ್ಯವನ್ನು ಹೊಂದಿದ್ದಾರೆ. ಕಳೆದ ಹಲವು ವರ್ಷಗಳಿಂದ ಸಾರ್ವಜನಿಕ ಜೀವನದಲ್ಲಿ ಯಾವುದೇ ಕಳಂಕವನ್ನು ಅಂಟಿಸಿಕೊಳ್ಳದೆ ಸಮಾಜ ಸೇವೆಯನ್ನು ಉಸಿರಾಗಿಸಿಕೊಂಡಿದ್ದಾರೆ. ಇಂಥವರನ್ನು ಆಯ್ಕೆ ಮಾಡಿದರೆ ಸಮುದಾಯದ ಅಭಿವೃದ್ಧಿಗೆ ಅನುಕೂಲವಾಗಲಿದೆ ಎಂದು ಅಭಿಪ್ರಾಯಪಟ್ಟರು.
ಜನಸೇವೆಯೇ ಜನಾರ್ಧನ ಸೇವೆ ಎಂಬುದು ನಮ್ಮ ತಂಡದ ಉಸಿರಾಗಿದೆ. ನಾವು ಇನ್ನೊಬ್ಬರ ಮೇಲೆ ಹಗೆತನ ಸಾಧಿಸುವುದಾಗಲಿ, ದ್ವೇಷ ಸಾಧಿಸುವುದು ನಮ್ಮ ಉದ್ದೇಶವಲ್ಲ. ಸಮುದಾಯದ ಹಿತವೇ ನಮ್ಮ ಮುಖ್ಯ ಗುರಿಯಾಗಿದೆ ಎಂದರು.

ಪ್ರೊ.ನಾರಾಯಣಗೌಡ ಮಾತನಾಡಿ
ಕೃಷಿ ವಿವಿಯ ನಿವೃತ್ತ ಉಪಕುಲಪತಿ ಪ್ರೊ.ನಾರಾಯಣಗೌಡ ಮಾತನಾಡಿ, ಈ ವರ್ಷ ನಡೆಯಲಿರುವ ಚುನಾವಣೆ ವಿಭಿನ್ನವಾಗಿದೆ. ಹಿಂದೆ ಕೆಲವರು ಹಣ, ಆಸೆ, ಆಮಿಷಗಳನ್ನು ಒಡ್ಡಿ ಗೆದ್ದು ಬಂದು ಸಮುದಾಯದ ಹಿತವನ್ನು ಕಡೆಗಣಿಸುತ್ತಿದ್ದರು
ಆದರೆ ಇಂದು ಘೋಷಣೆ ಮಾಡಿರುವ ಅಭ್ಯರ್ಥಿಗಳು ಸಮುದಾಯದ ಅಭಿವೃದ್ಧಿಪಡಿಸುವ ಶಪಥ ಮಾಡಿದ್ದಾರೆ. ಅಂಥವರಿಗೆ ಎಲ್ಲರೂ ಬೆಂಬಲ ಕೊಡಿ ಎಂದು ಮನವಿ ಮಾಡಿದರು.
ಬೆಂಗಳೂರನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ನಾಡಪ್ರಭು ಕೆಂಪೇಗೌಡರ ಹುಟ್ಟೂರಾದ ರಾಮನಗರ ಜಿಲ್ಲೆ ಮಾಗಡಿ ತಾಲ್ಲೂಕಿನ ಕೆಂಪಾಪುರದಲ್ಲಿ ಎಲ್ಲ ಅಭ್ಯರ್ಥಿಗಳು ಅವರ ಸಮಾಧಿಗೆ ಪುಷ್ಪನಮನ ಸಲ್ಲಿಸಿ ಉತ್ತಮ ಆಡಳಿತ ನೀಡುವ ಪ್ರತಿಜ್ಞೆ ಮಾಡಿದ್ದಾರೆ ಎಂದು ಹೇಳಿದರು.
ಸಮುದಾಯದ ಅಭಿವೃದ್ದಿಯೇ ನಮ್ಮ ಹೆಗ್ಗುರುತು. ನಮ್ಮ ಭರವಸೆಗಳು ಕೇವಲ ಘೋಷಣೆಗೆ ಸೀಮಿತವಾಗದೆ ಗೆದ್ದ ಕೆಲವೇ ದಿನಗಳಲ್ಲಿ ಅನುಷ್ಠಾನ ಮಾಡಿ ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತೇವೆ ಎಂದು ವಾಗ್ದಾನ ಮಾಡಿದರು.
ನಾವು ಯಾವುದೇ ಸ್ವಹಿತಾಸಕ್ತಿಗಾಗಿ ಚುನಾವಣೆಗೆ ಸ್ಪರ್ಧಿಸಿಲ್ಲ. ನಮ್ಮ ಸಮುದಾಯವನ್ನು ಇತರೆ ಸಮುದಾಯಗಳಂತೆ ಮೇಲ್ದರ್ಜೆಗೆ ಕೊಂಡೊಯ್ಯಬೇಕಿದೆ. ಯಾರು ಏನೇ ಆರೋಪ ಪ್ರತ್ಯಾರೋಪ ಮಾಡಿದರೂ ತಲೆ ಕೆಡಿಸಿಕೊಳ್ಳುವುದಿಲ್ಲ. ಪಾರದರ್ಶಕ ಮತ್ತು ನ್ಯಾಯಸಮ್ಮತವಾಗಿ ಚುನಾವಣೆಯಲ್ಲಿ ಗೆದ್ದು , ಗೆದ್ದಲು ಗಟ್ಟಿರುವ ವ್ಯವಸ್ಥೆ ಹೊಸ ರೂಪ ಕೊಡುತ್ತೇವೆ ಎಂದರು.

ಸ್ಪರ್ಧಾ ಕಣದಲ್ಲಿರುವ ಅಭ್ಯರ್ಥಿಗಳು
ಕಾರ್ಯಕ್ರಮದಲ್ಲಿ ಸಮುದಾಯದ ವಿವಿಧ ಮುಖಂಡರು ಭಾಗವಹಿಸಿದ್ದರು. ಇದಕ್ಕೂ ಮುನ್ನ ಬೆಳಗ್ಗೆ ಡಾ.ಅಂಜನಪ್ಪ ಹಾಗೂ ಪ್ರೊ. ನಾರಾಯಣಗೌಡ ಅವರ ನೇತೃತ್ವದಲ್ಲಿ ಅಭ್ಯರ್ಥಿಗಳು ನಾಡಪ್ರಭು ಕೆಂಪೇಗೌಡ ಅವರ ಹುಟ್ಟೂರು ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ಕೆಂಪಾಪುರಕ್ಕೆ ತೆರಳಿದ್ದರು. ಕೆಂಪೇಗೌಡ ಅವರ ಸಮಾಧಿಗೆ ನಮಿಸಿ ಸ್ವಚ್ಛ, ಪ್ರಮಾಣಿಕತೆ ಮತ್ತು ದಕ್ಷತೆಯಿಂದ ಸಮುದಾಯದ ಅಭಿವೃದ್ಧಿಗೆ ಶ್ರಮಿಸುವ ವಾಗ್ದಾನ ಮಾಡಿದರು.
ಸ್ಪರ್ಧಾ ಕಣದಲ್ಲಿರುವ ಅಭ್ಯರ್ಥಿಗಳು:
- ಡಾ.ಅಂಜನಪ್ಪ ಟಿ.ಎಚ್.
- ಪ್ರೊನಾರಾಯಣಗೌಡ
- ಕೆ.ಎನ್.ಪುಟ್ಟೇಗೌಡ
- ಎನ್.ನಾಗರಾಜ್
- ಎಸ್.ಕೆ.ಉಮೇಶ್
- ಡಾ.ಭಾವನಾ ಶ್ರೀಧರ್
- ಡಾ.ಶಿವರಾಮ್
- ಅರವಿಂದ
- ಉಮಾಪತಿ ಶ್ರೀನಿವಾಸಗೌಡ
- ಶಂಕರ್
- ವೇಣುಗೋಪಾಲ್.ಎನ್
- ಹಬ್ಬೂರು ತಮ್ಮಣ್ಣ
- ಸತೀಶ್ ಕಡತನಮನೆ












Click it and Unblock the Notifications