Double Decker Flyover: ಎಲ್ಲಾ ಮೆಟ್ರೋ ಮಾರ್ಗಗಳಲ್ಲೂ ಡಬಲ್ ಡೆಕ್ಕರ್ ಮೇಲ್ಸೇತುವೆ: ಮಾಹಿತಿ ನೀಡಿದ ಡಿ ಕೆ ಶಿವಕುಮಾರ್
ಬೆಂಗಳೂರು, ಫೆಬ್ರವರಿ 27: ಈಗ ಆಗಿರುವ ಮೆಟ್ರೋಗಳಲ್ಲಿ ಡಬಲ್ ಡೆಕ್ಕರ್ ಮೇಲ್ಸೆತುವೆ ಮಾಡಿದ್ದರೆ ಈಗ ನಮಗೆ ಇಷ್ಟು ಸಮಸ್ಯೆ ಆಗುತ್ತಿರಲಿಲ್ಲ. ಮುಂದಿನ ಎಲ್ಲಾ ಮೆಟ್ರೋ ಮಾರ್ಗಗಳಲ್ಲೂ ಡಬಲ್ ಡೆಕ್ಕರ್ ಮೇಲ್ಸೇತುವೆ ಮಾಡಲಾಗುವುದು. ಇದಕ್ಕೆ ಪಾಲಿಕೆ ವತಿಯಿಂದ ಶೇ.50ರಷ್ಟು ವೆಚ್ಚ ಭರಿಸಲಾಗುವುದು. ಇನ್ನು 160 ಕಿ.ಮೀ ಉದ್ದದಷ್ಟು ಮೇಲ್ಸೇತುವೆ, ರಾಜಕಾಲುವೆಗಳ ಬಫರ್ ವಲಯದಲ್ಲಿ 300 ಕಿ.ಮೀ ಉದ್ದದ ರಸ್ತೆಗಳನ್ನು ಮಾಡಲು ಮುಂದಾಗಿದ್ದೇವೆ. ಹೀಗೆ ಹಂತಹಂತವಾಗಿ ಯೋಜನೆ ಜಾರಿ ಮಾಡುತ್ತಿದ್ದು, ಇದಕ್ಕೆ ಕಾಲಾವಕಾಶಗಳು ಬೇಕು ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಹೇಳಿದರು.
ಜಾರ್ಜ್ ಅವರು ಸ್ಟೀಲ್ ಬ್ರಿಡ್ಜ್ ಮಾಡಲು ಮುಂದಾಗಿದ್ದರು, ಬಿಜೆಪಿ ವಿರೋಧಿಸಿತ್ತು. ಬೆಂಗಳೂರಿನ ರಸ್ತೆ ಪರಿಸ್ಥಿತಿಯನ್ನು ದೇವರೇ ಬಂದರೂ ಒಂದೆರಡು ವರ್ಷದಲ್ಲಿ ಸರಿಪಡಿಸಲು ಆಗುವುದಿಲ್ಲ ಎಂದು ಹೇಳಿದ್ದನ್ನು ಟೀಕಿಸಿದ್ದಾರೆ. ಅವರು ಟೀಕೆ ಮಾಡಲಿ, ನಾನು ಅದನ್ನು ಸ್ವಾಗತಿಸುತ್ತೇನೆ. ಅವರು ಟೀಕೆ ಮಾಡಿದಷ್ಟು ಒಳ್ಳೆಯದು. ಅವರು ಈ ವಿಚಾರವನ್ನು ಅಧಿವೇಶನದಲ್ಲಿ ಚರ್ಚೆ ಮಾಡಲಿ ಎಂದು ನಾನು ಈ ವಿಚಾರವಾಗಿ ಪ್ರತಿಕ್ರಿಯಿಸುತ್ತಿಲ್ಲ.

ನಾನು ದೀರ್ಘಾವಧಿಯ ಪರಿಹಾರಕ್ಕೆ ಮುಂದಾಗಿದ್ದೇನೆ. ಬೆಂಗಳೂರು ನಗರದಲ್ಲಿ ಯಾವುದೇ ಮಾಸ್ಟರ್ ಪ್ಲಾನ್ ಇಲ್ಲದೆ ಏನು ಮಾಡಲು ಆಗುವುದಿಲ್ಲ. ಅರಮನೆ ಜಾಗಕ್ಕೆ 3 ಸಾವಿರ ಕೋಟಿ ಪರಿಹಾರ ನೀಡಬೇಕು ಎಂದು ಕೇಳಲಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಟನಲ್ ರಸ್ತೆ ಬದಲು ಬೆಂಗಳೂರಿನ ರಸ್ತೆಗಳ ಅಗಲೀಕರಣ ಮಾಡಲು ಮುಂದಾದರೆ ಭೂಸ್ವಾಧೀನ ಪ್ರಕ್ರಿಯೆ ಮಾಡುವುದಕ್ಕೇ 3 ಲಕ್ಷ ಕೋಟಿ ಅಗತ್ಯವಿದೆ. ಎಲ್ಲಾ ಕಡೆಯು 1:2 ಅನುಪಾತದಲ್ಲಿ ಪರಿಹಾರ ನೀಡಬೇಕಿದೆ.
ರಾಜ್ಯ ಸರ್ಕಾರ 60 ಸಾವಿರ ಕೋಟಿ ಮೊತ್ತದ ಗ್ಯಾರಂಟಿ ಯೋಜನೆ ಜಾರಿ ಮಾಡಿದೆ. ಹೀಗಾಗಿ ನಾವು ತೆರಿಗೆ ಮೂಲಕ ಹೆಚ್ಚು ಆದಾಯ ಸಂಗ್ರಹಿಸಿದ್ದೇವೆ. ನಗರದಲ್ಲಿ ಆಸ್ತಿ ದಾಖಲೆಗಳ ಡಿಜಿಟಲೀಕರಣ ಮಾಡಿ ಮನೆಬಾಗಿಲಿಗೆ ಆಸ್ತಿಪತ್ರ ತಲುಪಿಸುತ್ತಿದ್ದೇವೆ. ಬೈಯುವವರೆಲ್ಲರೂ ಬೈಯುತ್ತಿರಲಿ. ಎಲ್ಲದಕ್ಕೂ ಅಧಿವೇಶನದಲ್ಲಿ ಉತ್ತರ ನೀಡುತ್ತೇನೆ. ಅವರು ಉತ್ತಮ ಸಲಹೆ ನೀಡಿದರೆ ಅದನ್ನು ಪರಿಗಣಿಸಲು ನಾನು ಸಿದ್ಧನಿದ್ದೇನೆ. ನಾನು ಮುಂಬೈ, ಹೈದರಾಬಾದ್, ದೆಹಲಿ ರಸ್ತೆಗಳನ್ನು ನೋಡಿದ್ದೇನೆ. ಎಲ್ಲವೂ ಬೆಂಗಳೂರು ರಸ್ತೆಗಳಿಗಿಂತ ಹದಗೆಟ್ಟಿವೆ. ಅಧಿವೇಶನದಲ್ಲಿ ಬೇರೆ ನಗರಗಳಲ್ಲಿ ವಾಹನ ಸಂಚಾರದ ಸಮಯವನ್ನು ಹೇಳುತ್ತೇನೆ. ಬೆಂಗಳೂರು ಜಗತ್ತಿನ ಗಮನ ಸೆಳೆದಿದ್ದು, ಹೀಗಾಗಿ ಬೆಂಗಳೂರಿನ ಸಂಚಾರ ದಟ್ಟಣೆ ಎದ್ದು ಕಾಣುತ್ತಿದೆ. ಬೆಂಗಳೂರಿನ ಮೇಲೆ ಒತ್ತಡ ಇಳಿಸಲು ಬಿಯಾಂಡ್ ಬೆಂಗಳೂರು ಪರಿಕಲ್ಪನೆಯಲ್ಲಿ ಕೆಲಸ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ಬಿಬಿಎಂಪಿ ವಿಭಜನೆ ಸಂಬಂಧಿಸಿದಂತೆ ಕುಮಾರಸ್ವಾಮಿ ಅವರು ಟೀಕೆ ಮಾಡಿದ್ದು ಕೇಂಪೇಗೌಡರ ಹೆಸರು ನಾಶ ಮಾಡಲು ಹೊರಟಿದ್ದಾರೆ ಎಂಬ ಹೇಳಿಕೆ ಕುರಿತು ಡಿ ಕೆ ಶಿವಕುಮಾರ್ ಮಾತನಾಡಿ, ಕುಮಾರಸ್ವಾಮಿ ಬರೀ ರಾಜಕೀಯ ಮಾಡುತ್ತಾರೆ. ಕುಮಾರಸ್ವಾಮಿ ಅವರ ಕಾಲದಲ್ಲಿ ಏನು ಮಾಡಿದ್ದಾರೆ? ನಾನು ಕೃಷ್ಣಾ ಅವರ ಕಾಲದಲ್ಲಿ ನಗರಾಭಿವೃದ್ಧಿ ಸಚಿವನಾಗಿದ್ದಾಗ ಬೆಂಗಳೂರು ಪಾಲಿಕೆ ವ್ಯಾಪ್ತಿ ಹೆಬ್ಬಾಳ, ಆರ್ ಆರ್ ನಗರ ಮುಖ್ಯದ್ವಾರ, ಬನಶಂಕರಿ, ಕೆ.ಆರ್ ಪುರಂದವರೆಗೂ ಮಾತ್ರ ಇತ್ತು. ಅವರ ಸರ್ಕಾರ ಬಂದ ನಂತರ ಇದನ್ನು ವಿಸ್ತರಣೆ ಮಾಡಿದ್ದು ಯಾಕೆ? ಬೆಂಗಳೂರು ವಿಸ್ತರಣೆಯಾಗುತ್ತಿದೆ.
ಎಲೆಕ್ಟಾನಿಕ್ ಸಿಟಿಯೋ ಪ್ರತ್ಯೇಕ ಬೆಂಗಳೂರು ಆಗಿದೆ. ಅಲ್ಲಿನ ಆದಾಯ, ಯೋಜನೆ ಏನಾಗಬೇಕು? ಬೆಂಗಳೂರು ಎಂದರೆ, ಸದಾಶಿವನಗರ, ವಿಧಾನಸೌಧ ಸುತ್ತಮುತ್ತಲಿನ ಪ್ರದೇಶ ಮಾತ್ರವಲ್ಲ. 2023 ಮಾರ್ಚ್ ತಿಂಗಳಲ್ಲಿ ಬಿಜೆಪಿ ಸರ್ಕಾರ ಒಂದು ನೋಟಿಫಿಕೇಶನ್ ಮಾಡಿ ವೈಟ್ ಫೀಲ್ಡ್ ಭಾಗದಲ್ಲಿ 90 ಮೀಟರ್ ರಸ್ತೆ (ಐಆರ್ ಆರ್) ಮಾಡಬೇಕು ಎಂದು ಹೇಳಿದ್ದಾರೆ. ಬೆಂಗಳೂರಿನ ಒಳಗೆ 19 ಕಿ.ಮೀ ಉದ್ದದ ರಸ್ತೆ ಮಾಡಲು ಭೂಸ್ವಾಧಿನಕ್ಕಾಗಿಯೇ 25 ಸಾವಿರ ಕೋಟಿ ಅಗತ್ಯವಿದೆ. ಇದನ್ನು ಯಾರಿಗಾಗಿ ಮಾಡಿದ್ದಾರೋ ಗೊತ್ತಿಲ್ಲ. ಈ ಭಾಗದಲ್ಲಿ ದೊಡ್ಡ ದೊಡ್ಡ ಕಟ್ಟಡ ಕಟ್ಟಲಾಗಿದೆ. ಇದನ್ನು ನೋಡದೇ ಅವರು ನೋಟಿಫಿಕೇಶನ್ ಹೊರಡಿಸಿದ್ದರು. ಟೀಕೆ ಮಾಡುವವರು ಮಾಡಲಿ. ನಾನು ಪ್ರಗತಿ ಮಾರ್ಗದಲ್ಲಿ ಮುನ್ನಡೆಯಲು ಬಯಸುತ್ತೇವೆ ಎಂದು ಹೇಳಿದರು.












Click it and Unblock the Notifications