ಜೆಡಿಎಸ್ ಬಗ್ಗೆ ಲಘುವಾಗಿ ಮಾತನಾಡಬೇಡಿ: ಮುನಿರತ್ನ ನೀಡಿದ ಎಚ್ಚರಿಕೆ
ಬೆಂಗಳೂರು, ನ 12: ಭಾರೀ ಮತಗಳ ಅಂತರದಿಂದ ರಾಜರಾಜೇಶ್ವರಿ ನಗರ ಅಸೆಂಬ್ಲಿ ಉಪಚುನಾವಣೆ ಗೆದ್ದಿರುವ ಬಿಜೆಪಿಯ ಮುನಿರತ್ನ, ತಮ್ಮ ಎದುರಾಳಿ ಜೆಡಿಎಸ್ ಬಗ್ಗೆ ಲಘುವಾಗಿ ಮಾತನಾಡಬೇಡಿ ಎಂದು ಎಚ್ಚರಿಕೆ ನೀಡಿದ್ದಾರೆ.
"ಜೆಡಿಎಸ್ ಪಕ್ಷಕ್ಕೆ ಠೇವಣಿ ಸಿಗದೇ ಇರುವುದಕ್ಕೆ ಯಾರೂ ಆ ಪಕ್ಷದ ಬಗ್ಗೆ ಲಘುವಾಗಿ ಮಾತನಾಡಬಾರದು. ಆ ಪಕ್ಷಕ್ಕೆ ತನ್ನದೇ ಆದ ವರ್ಚಸ್ಸು ಇದೆ. ಕಳೆದ ಬಾರಿಯ ಚುನಾವಣೆಯಲ್ಲಿ ಜೆಡಿಎಸ್ ಉತ್ತಮ ಮತವನ್ನು ಪಡೆದಿತ್ತು"ಎಂದು ಮುನಿರತ್ನ ಹೇಳಿದ್ದಾರೆ.
"ಮತದಾನ ಕಮ್ಮಿಯಾಗಿರುವುದರಿಂದ ಜೆಡಿಎಸ್ಸಿಗೆ ಹಿನ್ನಡೆಯಾಗಿರಬಹುದು. ಜೆಡಿಎಸ್ ಪಕ್ಷದಲ್ಲೂ ಉತ್ತಮ ನಾಯಕರಿದ್ದಾರೆ, ಅಸಂಖ್ಯಾತ ಕಾರ್ಯಕರ್ತರಿದ್ದಾರೆ ಎನ್ನುವುದನ್ನು ಮರೆಯಬಾರದು"ಎಂದು ಮುನಿರತ್ನ ಅಭಿಪ್ರಾಯ ಪಟ್ಟಿದ್ದಾರೆ.

"ನಿಖಿಲ್ ಕುಮಾರಸ್ವಾಮಿ ಪ್ರಚಾರದ ವೇಳೆ ನನ್ನ ವಿರುದ್ದವಾಗಿಯೂ ಮಾತನಾಡಿದ್ದಾರೆ. ರಾಜಕೀಯ ಬೇರೆ ಸಿನಿಮಾ ರಂಗ ಬೇರೆ. ಈಗಲೂ ನನ್ನ ಕಥೆಗೆ ನಿಖಿಲ್ ಸೂಕ್ತ ನಾಯಕ ಎಂದೆನಿಸಿದರೆ, ಅವರನ್ನೇ ನಾಯಕನಾಗಿ ಸಿನಿಮಾ ಮಾಡುತ್ತೇನೆ"ಎಂದು ಮುನಿರತ್ನ ಹೇಳಿದ್ದಾರೆ.
"ನಿಖಿಲ್, ಅವರ ಪಕ್ಷದ ಅಭ್ಯರ್ಥಿ ಪರ ಪ್ರಚಾರ ಮಾಡಿದ್ದಾರೆ, ಇದರಲ್ಲಿ ತಪ್ಪೇನಿದೆ. ಅವರು ಸರಿಯಾಗಿಯೇ ಮಾಡಿದ್ದಾರೆ. ಚುನಾವಣೆ ಎಂದ ಮೇಲೆ ಆರೋಪ, ಪ್ರತ್ಯಾರೋಪ ಸಹಜ. ಎಲ್ಲಾ ಮರೆತು ಅಭಿವೃದ್ದಿಯ ಕಡೆ ಗಮನ ಕೊಡಬೇಕು"ಎಂದು ಮುನಿರತ್ನ ಹೇಳಿದ್ದಾರೆ.
"ಜೆಡಿಎಸ್ ಪಕ್ಷವನ್ನು ಕ್ಷೇತ್ರದಲ್ಲಿ ಒಡೆಯುವ ಕೆಲಸ ನಮ್ಮಿಂದ ನಡೆದಿಲ್ಲ. ಕಾಂಗ್ರೆಸ್ ಅಭ್ಯರ್ಥಿಯ ತಂದೆ ಹನುಮಂತರಾಯಪ್ಪ ಈ ಕೆಲಸವನ್ನು ಮಾಡಿರಬಹುದು"ಎಂದು ಮುನಿರತ್ನ ಹೇಳಿದ್ದಾರೆ. (ಸಂಗ್ರಹ ಚಿತ್ರ)












Click it and Unblock the Notifications