ವಿಶ್ವದಲ್ಲೇ ಬೆಂಗಳೂರನ್ನು ಉತ್ತಮ ನಗರವಾಗಿಸಲು ಡಿಕೆಶಿ ಮಾಡಿದ ಮನವಿ ಏನು?
ಬೆಂಗಳೂರು, ಸೆಪ್ಟಂಬರ್ 13: ವಿಶ್ವದಲ್ಲೇ ಬೆಂಗಳೂರನ್ನು ಉತ್ತಮ ನಗರವನ್ನಾಗಿಸಲು ನಿಮ್ಮ ಆಲೋಚನೆಗಳನ್ನು ಹಂಚಿಕೊಳ್ಳಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮನವಿ ಮಾಡಿದರು. ಸಾರ್ವಜನಿಕರು ಆಲೋಚನೆ ಹಂಚಿಕೊಳ್ಳಲು ಅನುಕೂಲವಾಗುವಂತೆ ಅವರು ಇಮೇಲ್ ಐಡಿ ([email protected]) ಬಿಡುಗಡೆ ಮಾಡಿದರು.
ಬೆಂಗಳೂರನ್ನು ವಿಶ್ವದ ಅತ್ಯುತ್ತಮ ನಗರವನ್ನಾಗಿ ಮಾಡುವ ಉತ್ಸಾಹೀ ಪ್ರಯತ್ನದ ಕುರಿತು ಮಂಗಳವಾರ ಮಾತನಾಡಿದ ಡಿ.ಕೆ ಶಿವಕುಮಾರ್, ನಗರವನ್ನು ಅತ್ಯುತ್ತಮಗೊಳಿಸಲು ನಿಮ್ಮ ಆಲೋಚನೆಗಳನ್ನು 'ಬೆಟರ್ ಬೆಂಗಳೂರು ಕ್ರಿಯಾ ಯೋಜನೆ ಸಮಿತಿ' ಜೊತೆ ಹಂಚಿಕೊಳ್ಳಿ ಎಂದು ವಿದ್ಯಾರ್ಥಿಗಳು, ಐಟಿ ವೃತ್ತಿಪರರು, ಸ್ಟಾರ್ಟ್ ಅಪ್ಗಳು ಹಾಗೂ ಸಮಾಜದ ಎಲ್ಲ ಸ್ತರ ಜನರಲ್ಲಿ ಅವರು ಮನವಿ ಮಾಡಿದರು. ಇಮೇಲ್ ಮೂಲಕ ಆಲೋಚನೆಗಳನ್ನು ಹಂಚಿಕೊಳ್ಳಬಹುದು ಎಂದು ತಿಳಿಸಿದರು.
ಬೆಂಗಳೂರಿನ ಗತವೈಭವವನ್ನು ಪುನರುಜ್ಜೀವನಗೊಳಿಸಲು ಕಾಂಗ್ರೆಸ್ ಪಕ್ಷದ 'ಬೆಟರ್ ಬೆಂಗಳೂರು ಕ್ರಿಯಾ ಯೋಜನೆ ಸಮಿತಿ', ನಾಗರಿಕರಿಂದ ಸಲಹೆ-ಸೂಚನೆಗಳನ್ನು ಪಡೆಯಲು ಪ್ರಾಮಾಣಿಕ ಪ್ರಯತ್ನ ಮಾಡಲಿದೆ. ಬೆಂಗಳೂರಿನ ಭವಿಷ್ಯಕ್ಕಾಗಿ ಸಮಿತಿಯು ನೀಲನಕ್ಷೆ ಸಿದ್ಧಪಡಿಸುತ್ತಿದೆ. ನಾವು ಸಲಹೆ-ಸೂಚನೆ, ಆಲೋಚನೆಗಳಿಗಾಗಿ ಎದುರು ನೋಡುತ್ತಿದ್ದೇವೆ. ನಿಮ್ಮ ಸಲಹೆಗಳನ್ನು ನಾವು [email protected] ಇಮೇಲ್ ಮೂಲಕ ಸ್ವೀಕರಿಸಲಿದ್ದೇವೆ. ಇದು ರಾಜಕೀಯ ಪ್ರಯತ್ನವಲ್ಲ ಎಂದು ಅವರು ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದರು.
ಸಮಿತಿ ಜತೆ ಸಲಹೆ ಹಂಚಿಕೊಳ್ಳಲು ಡಿಕೆಶಿ ಮನವಿ
ನೀವು ಯಾವುದೇ ಪಕ್ಷದ ಬೆಂಬಲಿಗರಾಗಿದ್ದರೂ ಸಹ ದಯವಿಟ್ಟು ಉತ್ತಮ ಬೆಂಗಳೂರಿಗಾಗಿ ಈ ಸಮಿತಿಯೊಂದಿಗೆ ತೊಡಗಿಸಿಕೊಳ್ಳಿ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು ಐಟಿ ವೃತ್ತಿಪರರು, ಸ್ಟಾರ್ಟ್ಅಪ್ಗಳು, ವಿದ್ಯಾರ್ಥಿಗಳು, ಗೃಹಿಣಿಯರು, ನಿವಾಸಿ ಸಂಘಗಳು, ನಾಗರಿಕ ಸಮಾಜ ಸೇರಿದಂತೆ ವಿವಿಧ ವೃತ್ತಿಪರ ಹಿನ್ನೆಲೆಯ ಜನರು ಉತ್ತಮ ಬೆಂಗಳೂರಿಗಾಗಿ ತಮ್ಮ ಸಲಹೆಗಳನ್ನು ಹಂಚಿಕೊಳ್ಳಿ ಎಂದಿದ್ದಾರೆ.
ಅಲ್ಲದೇ 2023ರಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ನಂತರ, ಬೆಂಗಳೂರನ್ನು ಇಡೀ ಜಗತ್ತೇ ತಿರುಗಿ ನೋಡುವಂತೆ ಮಾದರಿ ನಗರವನ್ನಾಗಿ ಮಾಡುತ್ತೇವೆ ರಾಜಧಾನಿಯ ಬಗ್ಗೆ ತಮ್ಮ ದೂರದೃಷ್ಟಿ ಕುರಿತು ಡಿ.ಕೆ.ಶಿವಕುಮಾರ್ ಮಾತನಾಡಿದರು.
ಕಾಂಗ್ರೆಸ್ ಬೆಂಗಳೂರಿಗೆ ಹೊಸ ರೂಪ ನೀಡಲಿದೆ
2023ರಿಂದ 2028ರ ಅವಧಿಯಲ್ಲಿ, ವಾಸಿಸಲು, ಕೆಲಸ ಮಾಡಲು ಮತ್ತು ಉತ್ತಮ ಗುಣಮಟ್ಟದ ಜೀವನವನ್ನು ಆನಂದಿಸಲು ವಿಶ್ವದ ಅತ್ಯುತ್ತಮ ನಗರಗಳಲ್ಲಿ ಒಂದನ್ನಾಗಿಸುವ ಮೂಲಕ ಕಾಂಗ್ರೆಸ್ ಬೆಂಗಳೂರಿಗೆ ಹೊಸ ರೂಪ ನೀಡಲಿದೆ. ಇದಕ್ಕಾಗಿ ನಾವು ನಗರದ ಟ್ರಾಫಿಕ್ ಸಮಸ್ಯೆಗಳನ್ನು ಪರಿಹರಿಸಬೇಕು ಮತ್ತು ಹವಾಮಾನ ಬದಲಾವಣೆಯ ಸಮರಕ್ಕೆ ಸಿದ್ಧವಾಗಬೇಕು.
ನಗರದ ನಿವಾಸಿಗಳು ತಮ್ಮ ಆಲೋಚನೆಗಳು ಮತ್ತು ಸಲಹೆಗಳನ್ನು ನೀತಿ ನಿರೂಪಕರೊಂದಿಗೆ ಹಂಚಿಕೊಳ್ಳುವಾಗ ನಗರದಲ್ಲಿನ ನಿರ್ದಿಷ್ಟ ಪ್ರದೇಶಗಳು ಮತ್ತು ಸಮಸ್ಯೆಗಳಿಗೆ ಸೂಕ್ತ ಪರಿಹಾರಗಳೊಂದಿಗೆ ಸಿದ್ಧರಿರಬೇಕು ಎಂದು ತಿಳಿಸಿದರು.
'ಬೆಟರ್ ಬೆಂಗಳೂರು ಕ್ರಿಯಾ ಯೋಜನೆ ಸಮಿತಿ'ಯ ಮಾಹಿತಿ
ಡಿ.ಕೆ ಶಿವಕುಮಾರ್ ಅವರು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾ ರೆಡ್ಡಿ ಅಧ್ಯಕ್ಷತೆಯಲ್ಲಿ ಒಂಬತ್ತು ಸದಸ್ಯರ 'ಬೆಟರ್ ಬೆಂಗಳೂರು ಕ್ರಿಯಾ ಯೋಜನೆ ಸಮಿತಿ' ರಚಿಸಿದ್ದಾರೆ. ಮಾಜಿ ರಾಜ್ಯಸಭಾ ಸದಸ್ಯರಾದ ರಾಜೀವ್ ಗೌಡ ಅವರನ್ನು ಸಂಚಾಲಕರನ್ನಾಗಿ ಮಾಡಲಾಗಿದೆ. ಮಾಜಿ ಉಪಮುಖ್ಯಮಂತ್ರಿ ಜಿ.ಪರಮೇಶ್ವರ್, ಮಾಜಿ ಸಚಿವರಾದ ಕೆ.ಜೆ.ಜಾರ್ಜ್, ಕೃಷ್ಣಬೈರೇಗೌಡ, ಶಾಸಕರಾದ ಎನ್.ಎ.ಹ್ಯಾರಿಸ್ ಮತ್ತು ರಿಜ್ವಾನ್ ಅರ್ಷದ್ ಸೇರಿದಂತೆ ಹಿರಿಯ ಕಾಂಗ್ರೆಸ್ ನಾಯಕರು, ಬೆಂಗಳೂರಿನ ಇಬ್ಬರು ಮಾಜಿ ಮೇಯರ್ಗಳಾದ ಜಿ.ಪದ್ಮಾವತಿ ಮತ್ತು ಗಂಗಾಂಬಿಕೆ ಸಮಿತಿಯ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.
ಬೆಂಗಳೂರು ಪ್ರವಾಹಕ್ಕೆ ಕಾರಣ ಪತ್ತೆ
ಈ ವರ್ಷ ಬೆಂಗಳೂರಿನಲ್ಲಿ ಸಂಭವಿಸಿದ ಭಾರೀ ಪ್ರವಾಹಕ್ಕೆ ಕಾರಣವಾದ ಪ್ರಾಥಮಿಕ ಕಾರಣಗಳನ್ನು ಪತ್ತೆಹಚ್ಚಲು ಈ ಸಮಿತಿಯು ಬೆಂಗಳೂರಿನ ನಿವಾಸಿಗಳು ಮತ್ತು ಇತರರೊಡನೆ ಸಮಾಲೋಚನೆ ನಡೆಸಲಿದೆ. ತಜ್ಞರು ನೀಡಿದ ಸಲಹೆಗಳ ಆಧಾರದ ಮೇಲೆ ಸಮಿತಿಯು ತನ್ನ ವರದಿ ಮತ್ತು ಶಿಫಾರಸುಗಳನ್ನು ಸಿದ್ಧಪಡಿಸಲಿದೆ ಎಂದು ಡಿ.ಕೆ ಶಿವಕುಮಾರ್ ವಿವರಿಸಿದರು.