ನಾನು ಕೊಲೆ ಮಾಡಿಲ್ಲ, ರೇಪ್ ಮಾಡಿಲ್ಲ: ಡಿಕೆ ಶಿವಕುಮಾರ್ ಕಿಡಿ
Recommended Video
ಬೆಂಗಳೂರು, ಆಗಸ್ಟ್ 30: ''ನಾನು ಯಾರನ್ನೂ ಕೊಲೆ ಮಾಡಿಲ್ಲ, ರೇಪ್ ಮಾಡಿಲ್ಲ, ಮೋಸ ಮಾಡಿಲ್ಲ. ಯಾರ ದುಡ್ಡನ್ನೂ ಕದ್ದಿಲ್ಲ. ನಾನು ಶಾಸಕರನ್ನು ಹಿಡಿದಿಟ್ಟುಕೊಂಡಿದ್ದೆ. ಅದಕ್ಕೆ ಸಮನ್ಸ್ ನೀಡಿದ್ದಾರೆ'' ಎಂದು ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಅವರು ಪರೋಕ್ಷವಾಗಿ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದರು.
ವಿಚಾರಣೆಗೆ ತುರ್ತಾಗಿ ಹಾಜರಾಗುವಂತೆ ಜಾರಿ ನಿರ್ದೇಶನಾಲಯವು (ಇ.ಡಿ) ಸಮನ್ಸ್ ಜಾರಿ ಮಾಡಿದ ಕುರಿತು ಶುಕ್ರವಾರ ಬೆಳಿಗ್ಗೆ ತಮ್ಮ ನಿವಾಸದ ಬಳಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ತಾವು ಯಾರಿಗೂ ಮೋಸ ಮಾಡಿ ದುಡ್ಡು ಸಂಪಾದಿಸಿಲ್ಲ. ವಂಚನೆ ಮಾಡಿಲ್ಲ ಎಂದು ಹೇಳಿದರು.
''ಇಂದು ನಾನು ವಕೀಲರನ್ನು ಭೇಟಿ ಮಾಡಬೇಕಿದೆ. ಬಳಿಕ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸುತ್ತೇನೆ. ಅದರ ನಂತರ ದೆಹಲಿಗೆ ತೆರಳುತ್ತೇನೆ. ಈಗಾಗಲೇ ವಿಮಾನ ಬುಕ್ ಮಾಡಿದ್ದೇನೆ. ಮಧ್ಯಾಹ್ನ 1 ಗಂಟೆಗೆ ವಿಚಾರಣೆಗೆ ಬರುವಂತೆ ಸಮನ್ಸ್ ನೀಡಲಾಗಿದೆ. ವಿಚಾರಣೆಗೆ ಹಾಜರಾಗುತ್ತೇನೆ'' ಎಂದು ತಿಳಿಸಿದರು.

ರಾಜಕೀಯ ಪ್ರಕರಣ ಎದುರಿಸೇಕಾಗುತ್ತದೆ
''ನಮ್ಮ ಶಾಸಕರನ್ನು ಇರಿಸಿಕೊಂಡಿದ್ದರೆ ರಾಜಕೀಯ ಪ್ರಕರಣಗಳನ್ನು ಎದುರಿಸುತ್ತಿದ್ದೇನೆ. ಒಳ್ಳೆಯದು ಮಾಡಲು ಹೋದಾಗ ಈ ರೀತಿ ಎದುರಿಸಬೇಕಾಗುತ್ತದೆ. ಇ.ಡಿ ಸಮನ್ಸ್ ವಿರುದ್ಧ ಹೈಕೋರ್ಟ್ನಲ್ಲಿ ಸಲ್ಲಿಸಿದ್ದ ಅರ್ಜಿ ವಜಾ ಆಗಿದೆ. ಎಲ್ಲ ವಿಚಾರ ಬಳಿಕ ಮಾತನಾಡುತ್ತೇನೆ. ರಾತ್ರಿ ಒಂಬತ್ತು ಗಂಟೆಗೆ ಸಮನ್ಸ್ ನೀಡಿ ಅರ್ಜೆಂಟಾಗಿ ಬರಬೇಕು ಎಂದು ಹೇಳಿದ್ದಾರೆ. ಹೀಗಾಗಿ ವಕೀಲರನ್ನು ಭೇಟಿ ಮಾಡಲು ಸಾಧ್ಯವಾಗಿಲ್ಲ. ಈಗ ವಕೀಲರ ಭೇಟಿ ಮಾಡುತ್ತೇನೆ'' ಎಂದರು.

ಡಿಕೆಶಿ ಮನೆಗೆ ನಾರಾಯಣ ಗೌಡ ಭೇಟಿ
ಡಿಕೆ ಶಿವಕುಮಾರ್ ಅವರ ಸದಾಶಿವನಗರದ ನಿವಾಸಕ್ಕೆ ಶುಕ್ರವಾರ ಬೆಳಿಗ್ಗೆಯೇ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ನಾರಾಯಣ ಗೌಡ, ಮಾಜಿ ಮೇಯರ್ ಪದ್ಮಾವತಿ ಅವರು ಭೇಟಿ ನೀಡಿದ್ದು ಸಾಕಷ್ಟು ಕುತೂಹಲ ಮೂಡಿಸಿದೆ. ವಕೀಲರ ಭೇಟಿಗೆ ತೆರಳುವುದಾಗಿ ಹೇಳಿದ ಡಿಕೆ ಶಿವಕುಮಾರ್ ಅವರು, ಕುಟುಂಬ ಸಮೇತ ಮನೆಯಿಂದ ತೆರಳಿದರು.

ಕಪಿಲ್ ಸಿಬಲ್ ವಾದ ಸಾಧ್ಯತೆ
ಈಗ ಒಂದು ಅರ್ಜಿ ತಿರಸ್ಕೃತಗೊಂಡಿದ್ದರೂ ಮೇಲ್ಮನವಿ ಸಲ್ಲಿಸಲು ಡಿಕೆ ಶಿವಕುಮಾರ್ ಅವರಿಗೆ ಅವಕಾಶವಿದೆ. ಏಕಸದಸ್ಯ ನ್ಯಾಯಪೀಠ ಅರ್ಜಿ ತಿರಸ್ಕರಿಸಿರುವುದರಿಂದ ಅದನ್ನು ಹೈಕೋರ್ಟ್ನ ವಿಭಾಗೀಯ ಪೀಠದಲ್ಲಿ ಪ್ರಶ್ನಿಸಬಹುದಾಗಿದೆ. ಡಿಕೆ ಶಿವಕುಮಾರ್ ಅವರ ಪರ ಕಾಂಗ್ರೆಸ್ನ ಹಿರಿಯ ವಕೀಲ ಕಪಿಲ್ ಸಿಬಲ್ ಅವರು ವಕಾಲತ್ತು ವಹಿಸಲಿದ್ದಾರೆ ಎಂದು ಹೇಳಲಾಗಿದೆ. ಈಗಾಗಲೇ ಅವರು ಕಪಿಲ್ ಸಿಬಲ್ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ ಎಂದು ವರದಿಯಾಗಿದೆ.

ಅರ್ಜಿ ವಜಾಗೊಳಿಸಿದ ಹೈಕೋರ್ಟ್
ಡಿ.ಕೆ. ಶಿವಕುಮಾರ್ ಅವರ ದೆಹಲಿ ನಿವಾಸ ಮೇಲೆ ಐಟಿ ಅಧಿಕಾರಿಗಳು ನಡೆಸಿದ್ದ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇ.ಡಿ ಸಮನ್ಸ್ ಜಾರಿ ಮಾಡಿತ್ತು. ಅದನ್ನು ಪ್ರಶ್ನಿಸಿ ಡಿಕೆ ಶಿವಕುಮಾರ್ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಹೈಕೋರ್ಟ್ನ ಏಕಸದಸ್ಯ ನ್ಯಾಯಪೀಠ ಗುರುವಾರ ತಿರಸ್ಕರಿಸಿತ್ತು. ಡಿ. ಕೆ. ಶಿವಕುಮಾರ್ ದೆಹಲಿಯ ನಿವಾಸದಲ್ಲಿ ಪತ್ತೆಯಾದ ಸುಮಾರು 8 ಕೋಟಿ ರೂ. ಹಣದ ಬಗ್ಗೆ ಇಡಿ ತನಿಖೆ ನಡೆಸುತ್ತಿದೆ. ಈ ತನಿಖೆಯ ವಿಚಾರದಲ್ಲಿ ತಮಗೆ ನೀಡಿರುವ ಸಮನ್ಸ್ ರದ್ದುಗೊಳಿಸುವಂತೆ ಡಿ. ಕೆ. ಶಿವಕುಮಾರ್ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.

ಕೊಡಬಾರದ ಹಿಂಸೆ ಕೊಟ್ಟಿದ್ದಾರೆ
ಪಕ್ಷದ ಆದೇಶದ ಮೇರೆಗೆ ನಾನು ಗುಜರಾತ್ನ ಕಾಂಗ್ರೆಸ್ ಶಾಸಕರನ್ನು ರಕ್ಷಣೆ ಮಾಡಿದ್ದೆ. ಈ ಕಾರಣಕ್ಕೆ 84 ಕಡೆ ದಾಳಿಗಳನ್ನು ಮಾಡಿ ಕೊಡಬಾರದ ಹಿಂಸೆ ನೀಡಿದರು. ಕೇಸ್ಗಳನ್ನು ಹಾಕಿದರು. ನನ್ನ ಮನೇಲಿ ಇದ್ದದ್ದು ನನ್ನದೇ ಹಣ ಎಂದಿದ್ದೇನೆ. ಅವರಿಗೆ ಪ್ರತಿಯೊಂದು ದಾಖಲೆ ಸಲ್ಲಿಸಿದ್ದೇನೆ, ಎಲ್ಲವನ್ನೂ ಮಾಡಿದ್ದೆನೆ. ಆದರೂ ಮತ್ತೆ ಮತ್ತೆ ದಾಳಿ ಮಾಡಿದ್ದಾರೆ. ನನ್ನ ತಾಯಿ, ತಂಗಿ ಎಲ್ಲ ಆಸ್ತಿಯನ್ನೂ ಅಟ್ಯಾಚ್ ಮಾಡಿದ್ದಾರೆ ಎಂದು ಎಎನ್ಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಸಂದರ್ಭದಲ್ಲಿ ಆರೋಪಿಸಿದರು.

ರಕ್ತ ಹೀರಿದ್ದಾರೆ, ದೇಹ ಉಳಿದಿದೆ
ನನಗೆ ಕಿರುಕುಳ ನೀಡುತ್ತೇವೆ ಎಂದು ಬಿಜೆಪಿ ಮುಖಂಡರು ಹೇಳಿದ್ದು ದಾಖಲೆಗಳಲ್ಲಿವೆ. ನನಗೆ ತೊಂದರೆ ನೀಡುವ ಮೂಲಕ ಅವರು ಖುಷಿ ಪಡಲಿ. ಆದರೆ ನಾನು ವಿಚಾರಣೆಯಲ್ಲಿ ಪಾಲ್ಗೊಳ್ಳುತ್ತೇನೆ ಮತ್ತು ಸಹಕರಿಸುತ್ತೇನೆ. ನನ್ನ 84 ವರ್ಷದ ತಾಯಿಯನ್ನೂ ಬೇನಾಮಿ ಆಸ್ತಿ ವಿಚಾರದಲ್ಲಿ ಅಧಿಕಾರಿಗಳು ತನಿಖೆ ಮಾಡಿದ್ದಾರೆ. ನಮ್ಮ ಇಡೀ ರಕ್ತವನ್ನು ಈಗಲೇ ಹೀರಿದ್ದಾರೆ. ದೇಹ ಮಾತ್ರ ಉಳಿದಿದೆ ಎಂದು ಮಾರ್ಮಿಕವಾಗಿ ನುಡಿದರು.












Click it and Unblock the Notifications