ವಿಧಿ ಈ ರೀತಿ ಕ್ರೂರಿ ಆಗಬಾರದಿತ್ತು: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್!
ಬೆಂಗಳೂರು, ಆಗ. 31: ಡಿಎಂಕೆ ಪಕ್ಷದ ಹೊಸೂರು ಶಾಸಕ ಹಾಗೂ ಡಿ.ಕೆ. ಶಿವಕುಮಾರ್ ಆಪ್ತ ಸ್ನೇಹಿತ ವೈ. ಪ್ರಕಾಶ್ ಅವರ ಪುತ್ರ ಕರುಣಾಸಾಗರ್ ಸೇರಿದಂತೆ ಏಳು ಮಂದಿ ಬೆಂಗಳೂರಿನ ರಸ್ತೆ ಅಪಘಾತದಲ್ಲಿ ದುರ್ಮರಣ ಹೊಂದಿರುವುದಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಶಾಸಕ ಪ್ರಕಾಶ್ ಅವರ ಪುತ್ರ ತೀರಾ ಚಿಕ್ಕ ವಯಸ್ಸಿನಲ್ಲಿ ಇಂತಹ ದುರಂತಕ್ಕೆ ಬಲಿ ಆಗಿರುವುದು ಆಘಾತಕಾರಿ ಸಂಗತಿ. ಮೊದಲಿಂದಲೂ ಪ್ರಕಾಶ್ ಅವರು ತಮ್ಮೊಡನೆ ಉತ್ತಮ ಬಾಂಧವ್ಯ ಹೊಂದಿದ್ದರು. ರಾಜಕೀಯ ಸೇರಿದಂತೆ ಅನೇಕ ವಿಚಾರಗಳನ್ನು ತಾವಿಬ್ಬರೂ ವಿನಿಮಯ ಮಾಡಿಕೊಳ್ಳುತ್ತಿದ್ದೆವು. ರಾಜಕೀಯ ಮೀರಿದ ಉತ್ತಮ ಸ್ನೇಹ, ಒಡನಾಟ ತಮ್ಮ ನಡುವೆ ಇತ್ತು. ತಮ್ಮ ಮಿತ್ರನಿಗೆ ಇಂತಹ ಶೋಕ ಬರಬಾರದಿತ್ತು. ವಿಧಿ ಈ ರೀತಿ ಕ್ರೂರಿ ಆಗಬಾರದಿತ್ತು ಎಂದು ಶಿವಕುಮಾರ್ ನೋವು ವ್ಯಕ್ತಪಡಿಸಿದ್ದಾರೆ.

ಶಾಸಕ ಪ್ರಕಾಶ್ ಅವರು ಹಲವು ಬಾರಿ ತಮ್ಮನ್ನು ಭೇಟಿ ಮಾಡಿದ್ದರು. ಕಳೆದ ಚುನಾವಣೆಯಲ್ಲಿ ನಾನು ಕೂಡ ಹೊಸೂರಿಗೆ ಹೋಗಿ ಕಾಂಗ್ರೆಸ್ ಮಿತ್ರಪಕ್ಷ ಡಿಎಂಕೆ ಅಭ್ಯರ್ಥಿಯಾಗಿದ್ದ ಅವರ ಪರವಾಗಿ ಚುನಾವಣೆ ಪ್ರಚಾರ ಮಾಡಿದ್ದೆ. ಚುನಾವಣೆಯಲ್ಲಿ ಗೆದ್ದ ನಂತರ, ತೀರಾ ಇತ್ತೀಚೆಗೂ ಪ್ರಕಾಶ್ ಅವರು ತಮ್ಮನ್ನು ಭೇಟಿ ಮಾಡಿದ್ದರು. ಹೊಸೂರು ಕ್ಷೇತ್ರದಲ್ಲಿ ತಾವು ಕೈಗೊಳ್ಳಲು ಉದ್ದೇಶಿಸಿರುವ ಅಭಿವೃದ್ಧಿ ಯೋಜನೆಗಳು, ತಮ್ಮ ಸರಕಾರದ ಕಾರ್ಯಕ್ರಮಗಳ ಬಗ್ಗೆಯೂ ಸಮಾಲೋಚನೆ ನಡೆಸಿದ್ದರು ಎಂಬುದನ್ನು ಶಿವಕುಮಾರ್ ಅವರು ಸ್ಮರಿಸಿಕೊಂಡಿದ್ದಾರೆ.

ಪ್ರಕಾಶ್ ಪುತ್ರ ಕರುಣಾಸಾಗರ್ ಸೇರಿದಂತೆ ದುರ್ಮರಣಕ್ಕೆ ಒಳಗಾಗಿರುವ ಎಲ್ಲ ಏಳು ಮಂದಿಯ ಕುಟುಂಬದವರು, ಬಂಧು-ಮಿತ್ರರಿಗೆ ಈ ಶೋಕ ಭರಿಸುವ ಶಕ್ತಿಯನ್ನು ಆ ಭಗವಂತ ನೀಡಲಿ ಎಂದು ಡಿ.ಕೆ. ಶಿವಕುಮಾರ್ ಶೋಕ ಸಂದೇಶದಲ್ಲಿ ಹೇಳಿದ್ದಾರೆ. ಪ್ರಕಾಶ್ ಅವರ ನಿವಾಸಕ್ಕೆ ಭೇಟಿ ನೀಡಿ, ಅವರ ಪುತ್ರನ ಅಂತ್ಯಸಂಸ್ಕಾರದಲ್ಲಿ ಭಾಗಿಯಾಗುವುದಾಗಿ ಶಿವಕುಮಾರ್ ಇದೇ ವೇಳೆ ಹೇಳಿದ್ದಾರೆ.












Click it and Unblock the Notifications