ಡಿಕೆ ರವಿಯದು ಆತ್ಮಹತ್ಯೆ : ಅಂತಿಮ ಷರಾ ಬರೆದ ಸಿಬಿಐ
ಬೆಂಗಳೂರು, ಅಕ್ಟೋಬರ್ 03 : ಮಾರ್ಚ್ 16ನೇ ತಾರೀಖಿನಂದು ಸಾವಿಗೀಡಾಗ ಐಎಎಸ್ ಅಧಿಕಾರಿ ಡಿಕೆ ರವಿ ಅವರದ್ದು 'ಆತ್ಮಹತ್ಯೆ' ಎಂದು ಕೇಂದ್ರ ತನಿಖಾ ದಳ (ಸಿಬಿಐ) ಹೇಳಿದ್ದು, ಈ ಪ್ರಕರಣದಲ್ಲಿ ಯಾವುದೇ ವ್ಯಕ್ತಿಯ ತನಿಖೆಯ ಅಗತ್ಯವಿಲ್ಲವೆಂದು ಷರಾ ಬರೆದು ಪ್ರಕರಣವನ್ನು ಕ್ಲೋಸ್ ಮಾಡಿದೆ.
ತನಿಖೆ ಮುಕ್ತಾಯದ ವರದಿಯನ್ನು ಸಿಬಿಐ ಸಿದ್ಧಪಡಿಸಿದ್ದು, ಕೇಂದ್ರ ಕಚೇರಿಯಿಂದ ಸಮ್ಮತಿ ಪಡೆದ ತಕ್ಷಣ, ಕಾನೂನಿನನ್ವಯ ಮ್ಯಾಜಿಸ್ಟ್ರೇಟ್ ಮುಂದೆ ಇನ್ನೆರಡು ದಿನಗಳಲ್ಲಿ ವರದಿಯನ್ನು ಸಲ್ಲಿಸಲಿದೆ. ಸಾರ್ವಜನಿಕ ಒತ್ತಾಯದ ಮೇರೆಗೆ ರಾಜ್ಯ ಸರಕಾರ ಈ ಪ್ರಕರಣದ ತನಿಖೆಯನ್ನು ಸಿಐಡಿಯಿಂದ ಸಿಬಿಐಗೆ ಒಪ್ಪಿಸಿತ್ತು.
ಮಾರ್ಚ್ 16ನೇ ತಾರೀಖಿನಂದು ದೊಡ್ಡಕೊಪ್ಪಲು ಕರಿಯಪ್ಪನ ಮಗ ರವಿ ಅವರ ಶವ ಬೆಂಗಳೂರಿನ ಅಪಾರ್ಟ್ಮೆಂಟಿನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಸಿಕ್ಕಿತ್ತು. ದಕ್ಷ ಅಧಿಕಾರಿ ಎಂದು ಹೆಸರು ಪಡೆದಿದ್ದ ಡಿಕೆ ರವಿ ಅವರ ಸಾವಿನ ನಿಗೂಢತೆಯನ್ನು ಭೇದಿಸುವುದು ರಾಜ್ಯ ಪೊಲೀಸರಿಗೆ ಭಾರೀ ಸವಾಲಿನದಾಗಿತ್ತು. [ಖಾಸಗಿ ವಿಷಯಗಳು]

ಕೋಲಾರದಲ್ಲಿ ಭೂ ಮಾಫಿಯಾ ವಿರುದ್ಧ ಯುದ್ಧ ಸಾರಿದ್ದ ಡಿಕೆ ರವಿಯನ್ನು ಬೆಂಗಳೂರಿನ ವಾಣಿಜ್ಯ ತೆರಿಗೆ ಇಲಾಖೆಗೆ ಹೆಚ್ಚುವರಿ ಕಮಿಷನರ್ ಆಗಿ ವರ್ಗಾವಣೆ ಮಾಡಲಾಗಿತ್ತು. ಅಲ್ಲಿ ಕೂಡ ಅವರು ತೆರಿಗೆಗಳ್ಳರ ವಿರುದ್ಧ ತಿರುಗಿಬಿದ್ದಿದ್ದರು. ಕೋಲಾರದಲ್ಲಿದ್ದಾಗ ಮತ್ತು ಬೆಂಗಳೂರಿನಲ್ಲಿದ್ದಾಗ ಅವರಿಗೆ ಹಲವಾರು ಬೆದರಿಕೆ ಕರೆಗಳು ಕೂಡ ಬಂದಿದ್ದವು. [ಡಿಕೆ ರವಿ ಪ್ರಕರಣದ ಟೈಮ್ ಲೈನ್]
ರವಿ ಅವರ ಸಾವು ಸಂಭವಿಸಿದ ನಂತರ ರಾಜ್ಯಾದ್ಯಂತ ಭಾರೀ ಪ್ರತಿಭಟನೆಗಳಾಗಿದ್ದವು. ರಾಜಕಾರಣಿಗಳು, ಪೊಲೀಸ್ ಅಧಿಕಾರಿಗಳ ಹೇಳಿಕೆಗಳು ಭಾರೀ ಗೊಂದಲ ಸೃಷ್ಟಿಸಿದ್ದವು. ಮಾಜಿ ಪೊಲೀಸ್ ಆಯುಕ್ತ ಎಂಎನ್ ರೆಡ್ಡಿ ಅವರು ಇದು ವೈಯಕ್ತಿಕ ಕಾರಣಗಳಿಂದಾದ ಆತ್ಮಹತ್ಯೆಯಲ್ಲದೆ ಮತ್ತೇನೂ ಅಲ್ಲ ಎಂದು ಹೇಳಿ ವಿವಾದ ಸೃಷ್ಟಿಸಿದ್ದರು.
ರವಿಯವರದ್ದು ಆತ್ಮಹತ್ಯೆಯಲ್ಲ, ಕೊಲೆ ಎಂದು ವಿರೋಧ ಪಕ್ಷದವರು ವಿಧಾನಸೌಧದಲ್ಲಿ ಬೊಬ್ಬೆ ಹೊಡೆದಿದ್ದರು. ಅವರ ಕೊಲೆಯ ಹಿಂದೆ ಕಾಣದ ಕೈಗಳ ಕೈವಾಡವಿದೆ, ಅನೇಕ ರಾಜಕಾರಣಿಗಳ ಸಂಚಿದೆ ಎಂದು ಕೂಗು ಎದ್ದಿದ್ದ ಕಾರಣ ಮಾರ್ಚ್ 25ರಂದು ಸಿದ್ದರಾಮಯ್ಯ ಅವರು ತನಿಖೆಯನ್ನು ಸಿಬಿಐಗೆ ಒಪ್ಪಿಸಿದ್ದರು.
ತನಿಖೆಗೆ ಯಾವುದೇ ಶಿಫಾರಸಿಲ್ಲ
ತನಿಖೆ ಮತ್ತು ವೈಜ್ಞಾನಿಕ ವರದಿಗಳ ಆಧಾರದ ಮೇಲೆ ಈ ಪ್ರಕರಣದಲ್ಲಿ ಯಾವುದೇ ವ್ಯಕ್ತಿಯ ಕೈವಾಡವಿಲ್ಲ ಎಂದು ಸಿಬಿಐ ತನ್ನ ವರದಿಯಲ್ಲಿ ಹೇಳಿದ್ದು, ಯಾವುದೇ ವ್ಯಕ್ತಿಯ ವಿರುದ್ಧ ತನಿಖೆಗೆ ಶಿಫಾರಸು ಮಾಡುವುದಿಲ್ಲ ಎಂದಿದೆ.
ಪೋಸ್ಟ್ ಮಾರ್ಟಂ ವರದಿ ರವಿ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಎಂದಿತ್ತು. ರವಿಯವರ ದೇಹದ ಕೆಲ ಭಾಗಗಳನ್ನು ಕೇಂದ್ರ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಮತ್ತು ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ಪರೀಕ್ಷೆಗೆ ಕಳುಹಿಸಲಾಗಿತ್ತು. ಎಲ್ಲ ವರದಿಯಲ್ಲಿಯೂ ಇದು ಆತ್ಮಹತ್ಯೆ ಎಂದೇ ಹೇಳಲಾಗಿದೆ.












Click it and Unblock the Notifications