Breaking: ಜಾರಿ ನಿರ್ದೇಶನಾಲಯದ ಮುಂದೆ ಹಾಜರಾಗುವಂತೆ ಮತ್ತೆ ಡಿಕೆ ಸಹೋದರರಿಗೆ ಸಮನ್ಸ್
ಬೆಂಗಳೂರು, ಅ. 06: ಅಕ್ಟೋಬರ್ 7ರಂದು ಯಂಗ್ ಇಂಡಿಯಾ ಹಾಗೂ ನ್ಯಾಷನಲ್ ಹೆರಾಲ್ಡ್ ಪ್ರಕರಣ ವಿಚಾರವಾಗಿ ವಿಚಾರಣೆಗೆ ಬರುವಂತೆ ಜಾರಿ ನಿರ್ದೇಶನಾಲಯದಿಂದ ಡಿಕೆ ಸಹೋದರರಿಗೆ ಮತ್ತೆ ನೋಟಿಸ್ ಜಾರಿ ಮಾಡಲಾಗಿದೆ.
ದೆಹಲಿಯ ಜಾರಿ ನಿರ್ದೇಶನಾಲಯದ ಕಚೇರಿ ಮುಂದೆ ಅಕ್ಟೋಬರ್ 7 ರಂದು ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯವು (ಇಡಿ) ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹಾಗೂ ಅವರ ಸಹೋದರ, ಸಂಸದ ಡಿಕೆ ಸುರೇಶ್ ಅವರಿಗೆ ಮತ್ತೆ ಸಮನ್ಸ್ ಜಾರಿ ಮಾಡಿದೆ.
ಈ ಮೊದಲು ದಿನಾಂಕ 23-09-2022 ರಂದು ಇವರಿಬ್ಬರಿಗೂ ಅಕ್ಟೋಬರ್ 7 ರಂದು ವಿಚಾರಣೆಗೆ ಬರುವಂತೆ ಇಡಿ ಸಮನ್ಸ್ ಜಾರಿ ಮಾಡಿತ್ತು. ಆದರೆ ಭಾರತ್ ಜೋಡೋ ಪಾದಯಾತ್ರೆ ಹಿನ್ನೆಲೆಯಲ್ಲಿ ಕಾಲಾವಕಾಶ ನೀಡುವಂತೆ ಶಿವಕುಮಾರ್ ಹಾಗೂ ಸುರೇಶ್ ಅವರು ಪತ್ರ ಬರೆದು ಸಮಯಾವಕಾಶ ಕೋರಿದ್ದರು.

ಆದರೆ ಸಮಯಾವಕಾಶ ನೀಡಲು ನಿರಾಕರಿಸಿರುವ ಇಡಿ 7-10-2022 ರಂದು ಶುಕ್ರವಾರ ದೆಹಲಿಯಲ್ಲಿ ವಿಚಾರಣೆಗೆ ಹಾಜರಾಗುವಂತೆ ದಿನಾಂಕ 05-10-2022 ರಂದು ಮತ್ತೊಂದು ನೋಟಿಸ್ ಜಾರಿ ಮಾಡಿದೆ.
ಜಾರಿ ನಿರ್ದೇಶನಾಲಯದ ನೋಟಿಸ್ಗೆ ಪ್ರತಿಕ್ರಿಯೆ ನೀಡಿರುವ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, "ಭಾರತ್ ಜೋಡೋ ಯಾತ್ರಾ ದೃಷ್ಟಿಯಿಂದ ಸಮನ್ಸ್ ಅನ್ನು ಮುಂದೂಡುವಂತೆ ನಾನು ಜಾರಿ ನಿರ್ದೇಶನಾಲಯವನ್ನು ವಿನಂತಿಸಿದ್ದೆ. ಅದನ್ನು ಅವರು ತಿರಸ್ಕರಿಸಿರುವುದು ರಾಜಕೀಯ ಕಿರುಕುಳದ ಸ್ಪಷ್ಟ ಸಂಕೇತವಾಗಿದೆ. ಭಾರತ ಐಕ್ಯತಾ ಯಾತ್ರೆಯಲ್ಲಿ ನಾನು ಭಾಗವಹಿಸುವುದು ಅವರಿಗೆ ಇಷ್ಟವಿಲ್ಲ" ಎಂದು ಟ್ವೀಟ್ ಮಾಡಿದ್ದಾರೆ.
#BharatJodoYatra ದೃಷ್ಟಿಯಿಂದ ಸಮನ್ಸ್ ಅನ್ನು ಮುಂದೂಡುವಂತೆ ನಾನು ಜಾರಿ ನಿರ್ದೇಶನಾಲಯವನ್ನು ವಿನಂತಿಸಿದ್ದೆ. ಅದನ್ನು ಅವರು ತಿರಸ್ಕರಿಸಿರುವುದು ರಾಜಕೀಯ ಕಿರುಕುಳದ ಸ್ಪಷ್ಟ ಸಂಕೇತವಾಗಿದೆ. #BharathAikyataYatre ಯಲ್ಲಿ ನಾನು ಭಾಗವಹಿಸುವುದು ಅವರಿಗೆ ಇಷ್ಟವಿಲ್ಲ.
— DK Shivakumar (@DKShivakumar) October 6, 2022
ಈ ಹಿಂದೆ ಮೈಸೂರಿನ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿ ಕೆ ಶಿವಕುಮಾರ್ " ವಿಚಾರಣೆಗೆ ಸಂಪೂರ್ಣ ಸಹಕಾರ ನೀಡುತ್ತೇನೆ. ಅಕ್ಟೋಬರ್ 7 ರಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯೊಂದಿಗೆ ಆದಿಚುಂಚನಗಿರಿ ಮಠಕ್ಕೆ ತೆರಳಿ ಸ್ವಾಮೀಜಿ ಅವರನ್ನು ಭೇಟಿ ಮಾಡಬೇಕಿದೆ. ಹೀಗಾಗಿ, ಕೆಲವು ದಿನಗಳ ಕಾಲಾವಕಾಶ ಕೇಳುತ್ತೇನೆ" ಎಂದು ಹೇಳಿದ್ದರು.

"ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿಗೆ ಕಿರುಕುಳ ನೀಡಿದ ನಂತರ ನನ್ನನ್ನು ವಿಚಾರಣೆಗೆ ಕರೆದಿದ್ದಾರೆ. ಬೇರೆ ಪ್ರಕರಣಗಳೊಂದಿಗೆ ಇದನ್ನೂ ಸೇರಿಸುವ ಪ್ರಯತ್ನ ಮಾಡುತ್ತಿದ್ದಾರೆ. ಈ ಯಾತ್ರೆ ನಡುವಯೇ ನನಗೆ ಹಾಗೂ ಸಹೋದರ ಡಿ.ಕೆ.ಸುರೇಶ್ಗೆ ನೋಟೀಸ್ ನೀಡಿದ್ದಾರೆ " ಎಂದು ಆರೋಪಿಸಿದ್ದರು.
ನಾಳೆ ದೆಹಲಿಗೆ ತರಳಿ ವಿಚಾರಣೆಗೆ ಹಾಜರಾಗುವ ಬಗ್ಗೆ ಪಕ್ಷದ ಮುಖಂಡರ ಜತೆ ಸಮಾಲೋಚನೆ ನಡೆಸಿ ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳುವುದಾಗಿ ಡಿ ಕೆ ಶಿವಕುಮಾರ್ ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.












Click it and Unblock the Notifications