ಬೆಂಗಳೂರು ಗಲಭೆ: ಎಸ್ಡಿಪಿಐ 17 ಕಾರ್ಯಕರ್ತರ ಬಂಧನ
ಬೆಂಗಳೂರು, ಡಿಸೆಂಬರ್ 21: ಬೆಂಗಳೂರು ಗಲಭೆಗೆ ಸಂಬಂಧಿಸಿದಂತೆ ಹಿಂಸಾಚಾರಕ್ಕೆ ಪ್ರಚೋದಿಸಿದ ಆರೋಪದಡಿ ಎಸ್ಡಿಪಿಐ ಮತ್ತು ಪಿಎಫ್ಐನ ಹದಿನೇಳು ಮುಖಂಡರನ್ನು ರಾಷ್ಟ್ರೀಯ ತನಿಖಾ ಸಂಸ್ಥೆ ಬಂಧಿಸಿದೆ.
ಆಗಸ್ಟ್ 8 ರಂದು ನಡೆದ ಗಲಭೆಯಲ್ಲಿ ಡಿ. ಜೆ. ಹಳ್ಳಿ ಪೊಲೀಸ್ ಠಾಣೆಗೆ ಬೆಂಕಿ ಇಟ್ಟು ಸುಟ್ಟು ಹಾಕಿದ್ದರು. ಪುಲಿಕೇಶಿನಗರದ ಶಾಸಕ ಅಖಂಡ ಶ್ರೀನಿವಾಸ್ ಅವರ ಅಕ್ಕನ ಮಗ ನವೀನ್ ನ ಫೇಸ್ ಬುಕ್ ಪೋಸ್ಟ್ ನಿಂದ ಗಲಾಟೆ ಆರಂಭವಾಗಿತ್ತು. ಅಖಂಡ ಶ್ರೀನಿವಾಸ್ ಅವರ ಮನೆಗೆ ದಾಳಿ ನಡೆಸಿ ಕಲ್ಲು ತೂರುವ ಮೂಲಕ ಗಲಭೆ ಎಬ್ಬಿಸಿದ್ದರು. ಬಳಿಕ ಗಲಭೆಗೆ ಪ್ರಚೋದಿಸಿ ಪೊಲೀಸ್ ಠಾಣೆಗಳಿಗೆ ಬೆಂಕಿ ಇಟ್ಟು ಸಾರ್ವಜನಿಕ ಆಸ್ತಿಗೆ ನಷ್ಟವುಂಟು ಮಾಡಲಾಗಿತ್ತು. ಈ ಸಂಬಂಧ ಎರಡು ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡಿದ್ದ ರಾಷ್ಟ್ರೀಯ ತನಿಖಾ ಸಂಸ್ಥೆ ಎಸ್ ಡಿಪಿಐ ಹಾಗೂ ಪಿಎಫ್ಐ ಮುಖಂಡರ ಮತ್ತು ಕಾರ್ಯಕರ್ತರ ನಿವಾಸದ ಮೇಲೆ ದಾಳಿ ನಡೆಸಿತ್ತು.
ಎಸ್ಡಿಪಿಐನ ಮುಖಂಡರಾದ ಬೆಂಗಳೂರು ನಗರ ಜಿಲ್ಲಾ ಘಟಕದ ಅಧ್ಯಕ್ಷ ಷರೀಫ್, ಕೆ.ಜಿ.ಹಳ್ಳಿ ವಾರ್ಡ್ ನ ಅಧ್ಯಕ್ಷ ಇಮ್ರಾನ್ ಅಹಮದ್, ರುಭಾ, ಶಬ್ಬೀರ್ ಖಾನ್, ಶಯಿಕ್ ಅಜ್ಮಲ್, ಗಲಭೆಗೆ ಪ್ರಚೋದನೆ ನೀಡಿರುವುದು ಎನ್ಐಎ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಗಲಭೆ ದಿನ ಸಂಜೆ ಥಣಿಸಂದ್ರದಲ್ಲಿ ಸಭೆ ಸೇರಿ ಕೆ.ಜಿ. ಹಳ್ಳಿ ಠಾಣೆ ಮೇಲೆ ದಾಳಿ ನಡೆಸಲು ತೀರ್ಮಾನಿಸಿದ್ದರು. ಅದರಂತೆ ಕೆ.ಜಿ.ಹಳ್ಳಿ ಠಾಣೆ ಹಾಗೂ ಡಿ.ಜೆ. ಹಳ್ಳಿ ಪೊಲೀಸ್ ಠಾಣೆ ಮೇಲೆ ದಾಳಿ ನಡೆಸಿ ಪೊಲೀಸರ ಮೇಲೂ ಕಲ್ಲು ತೂರಿದ್ದರು. ಇದೇ ವೇಳೆ ನಾಗವಾರದ ಎಸ್ಡಿಪಿಐ ಮುಖಂಡ ಅಬ್ಬಾಸ್ ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಜಮಾಯಿಸಿ ಸಾರ್ವಜನಿಕ ಆಸ್ತಿಗೆ ನಷ್ಟವುಂಟು ಮಾಡಲು ಪ್ರಚೋದನೆ ನೀಡಿರುವುದು ಎನ್ಐಎ ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ಪ್ರಕಟಣೆ ತಿಳಿಸಿದೆ.
ಸಾಮಾಜಿಕ ಜಾಲತಾಣ ಫೇಸ್ ಬುಕ್, ವಾಟ್ಸಪ್, ಬಳಸಿ ಗಲಭೆಯ ಸಂದೇಶ ರವಾನಿಸಿದ್ದರು. ಇದರಿಂದ ಕೆ.ಜಿ. ಹಳ್ಳಿಯಿಂದ ದೂರ ಇರುವರೂ ಬಂದು ಹಿಂಸಾಚಾರದಲ್ಲಿ ತೊಡಗಿದ್ದರು. ಆರೋಪಿ ಸದ್ಧಾಂ, ಸಯ್ಯದ್ ಸೊಹೇಲ್, ಕಲೀಮುಲ್ಲಾ ಸಾಮಾಜಿಕ ಜಾಲ ತಾಣ ಬಳಿಸ ಹಿಂಸಾಚಾರಕ್ಕೆ ಪ್ರಚೋದನೆ ನೀಡಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ಎನ್ಐಎ ಹೇಳಿದೆ.
ಡಿ.ಜೆ ಹಳ್ಳಿ ಕೆ.ಜಿ. ಹಳ್ಳಿ ಗಲಭೆ ಸಂಬಂಧ ಈವರೆಗೂ 187 ಆರೋಪಿಗಳನ್ನು ಎನ್ಐಎ ಬಂಧಿಸಿದ್ದು, ತನಿಖೆ ಮುಂದುವರೆದಿದೆ.
Recommended Video