ಡಿ. ಜೆ. ಹಳ್ಳಿ ನಿವಾಸಿಗಳಿಗೆ ಎದುರಾಯ್ತು ಹೊಸ ಆತಂಕ
ಬೆಂಗಳೂರು, ಆಗಸ್ಟ್ 13 : ಮಂಗಳವಾರ ರಾತ್ರಿ ಗಲಭೆ ನಡೆದ ಬೆಂಗಳೂರು ನಗರದ ಕಾವಲ್ ಭೈರಸಂದ್ರ, ಡಿ. ಜೆ. ಹಳ್ಳಿ, ಕೆ. ಜೆ. ಹಳ್ಳಿಯಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಮುಂಜಾಗ್ರತಾ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
Recommended Video
ಪುಲಿಕೇಶಿ ನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಸೋದರಳಿಯ ನವೀನ್ ಒಂದು ಸಮುದಾಯದ ವಿರುದ್ಧ ಫೇಸ್ ಬುಕ್ ಪೋಸ್ಟ್ ಹಾಕಿದ್ದಾರೆ ಎಂದು ಆರೋಪಿಸಿ ಆರಂಭವಾದ ಗಲಭೆ ತೀವ್ರ ಸ್ವರೂಪ ಪಡೆದುಕೊಂಡಿತ್ತು.
ಪೊಲೀಸ್ ಠಾಣೆಗಳ ಮೇಲೆ ದಾಳಿ ಮಾಡಲಾಗಿತ್ತು. ಶಾಸಕರ ಮನೆಗೆ ಬೆಂಕಿ ಹಚ್ಚಲಾಗಿತ್ತು. ರಸ್ತೆಯಲ್ಲಿ ನಿಲ್ಲಿಸಿದ್ದ ವಾಹನಗಳಿಗೆ ಬೆಂಕಿ ಹಚ್ಚಲಾಗಿತ್ತು. ಪೊಲೀಸರು ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಗಾಳಿಯಲ್ಲಿ ಗುಂಡು ಹಾರಿಸಿದಾಗ ಮೂವರು ಮೃತಪಟ್ಟಿದ್ದರು.
ಈ ಪ್ರದೇಶಗಳಲ್ಲಿ ಈಗ ಗಲಭೆ ಹತೋಟಿಗೆ ಬಂದಿದೆ. ಆದರೆ, ಇಲ್ಲಿನ ನಿವಾಸಿಗಳಿಗೆ ಕೊರೊನಾ ವೈರಸ್ ಸೋಂಕಿನ ಭೀತಿ ಎದುರಾಗಿದೆ. ಗಲಭೆ ಬಳಿಕ ಆರೋಗ್ಯದ ಬಗ್ಗೆ ಜನರು ಆತಂಕಗೊಂಡಿದ್ದಾರೆ.

ಕೊರೊನಾ ವೈರಸ್ ಸೋಂಕಿನ ಭೀತಿ
ಮಂಗಳವಾರ ರಾತ್ರಿ ಗಲಭೆ ನಡೆದ ಬೆಂಗಳೂರು ನಗರದ ಕಾವಲ್ ಭೈರಸಂದ್ರ, ಡಿ. ಜೆ. ಹಳ್ಳಿ, ಕೆ. ಜೆ. ಹಳ್ಳಿಯಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಆದರೆ, ಇಲ್ಲಿನ ನಿವಾಸಿಗಳಿಗೆ ಕೊರೊನಾ ವೈರಸ್ ಸೋಂಕು ಹರಡುವ ಭೀತಿ ಎದುರಾಗಿದೆ. ಅದಕ್ಕೆ ಕಾರಣ ಸ್ಥಳಿಯರಲ್ಲದ ಜನರು ಈ ಪ್ರದೇಶಗಳಿಗೆ ಹೆಚ್ಚಾಗಿ ಭೇಟಿ ನೀಡುತ್ತಿರುವುದು.

ವೈದ್ಯರು ಹೇಳುವುದೇನು?
ಮಂಗಳವಾರ ರಾತ್ರಿ ಗಲಭೆ ಸಂದರ್ಭದಲ್ಲಿ ಜನರು ಸಾಮಾಜಿಕ ಅಂತರವನ್ನು ಮರೆತು ಗುಂಪಾಗಿ ಸೇರಿದ್ದರು. ಪೊಲೀಸರು, ಮಾಧ್ಯಮದವರು ಸೇರಿದಂತೆ ಹಲವಾರು ಜನರು ಈ ಪ್ರದೇಶಗಳಿಗೆ ಭೇಟಿ ನೀಡುತ್ತಿದ್ದಾರೆ. ಆದ್ದರಿಂದ, ಕೊರೊನಾ ವೈರಸ್ ಸೋಂಕು ಹರಡುವ ಸಾಧ್ಯತೆ ಇದೆ. ಈ ಪ್ರದೇಶದಲ್ಲಿ ನಿಗಾವಹಿಸಬೇಕು ಎಂದು ವೈದ್ಯರು ಹೇಳಿದ್ದಾರೆ.

ಬೆಂಗಳೂರಲ್ಲಿ ಹೆಚ್ಚು ಪ್ರಕರಣಗಳು
ರಾಜ್ಯದಲ್ಲಿಯೇ ಅತಿ ಹೆಚ್ಚು ಕೊರೊನಾ ವೈರಸ್ ಸೋಂಕಿತರು ಇರುವುದು ಬೆಂಗಳೂರಿನಲ್ಲಿ. ಬುಧವಾರ ಸಹ ನಗರದಲ್ಲಿ 2802 ಹೊಸ ಕೊರೊನಾ ವೈರಸ್ ಸೋಂಕಿನ ಪ್ರಕರಣ ದಾಖಲಾಗಿದೆ. ನಗರದಲ್ಲಿನ ಒಟ್ಟು ಸೋಂಕಿತರ ಸಂಖ್ಯೆ 79,840ಕ್ಕೆ ಏರಿಕೆಯಾಗಿದೆ.

ಹಲವಾರು ಜನರು ಭೇಟಿ
ಗಲಭೆ ಸಂದರ್ಭದಲ್ಲಿ ಬೇರೆ ಬೇರೆ ಪ್ರದೇಶದ ಜನರು ಕಾವಲ್ ಭೈರಸಂದ್ರ, ಡಿ. ಜೆ. ಹಳ್ಳಿ, ಕೆ. ಜೆ. ಹಳ್ಳಿಗೆ ಭೇಟಿ ನೀಡಿರುವ ಸಾಧ್ಯತೆ ಇದೆ. ಅದೇ ರೀತಿ ಈಗ ಭದ್ರತೆಗಾಗಿ ಬೇರೆ ಪ್ರದೇಶ, ರಾಜ್ಯಗಳಿಂದ ಪೊಲೀಸ್ ಪಡೆ ಕರೆಸಲಾಗಿದೆ. ಹಲವಾರು ಜನರು ಆಗಮಿಸುತ್ತಿದ್ದಾರೆ. ಇವರಿಂದಾಗಿ ಕೋವಿಡ್ ಹರಡಬಹುದು ಎಂದು ಆತಂಕ ಎದುರಾಗಿದೆ.












Click it and Unblock the Notifications