ದಿನೇಶ್ ಗುಂಡೂರಾವ್ ಪದಗ್ರಹಣಕ್ಕೆ ಅತೃಪ್ತರು ಗೈರಾದರೆ..?
ಅರಮನೆ ಮೈದಾನದಲ್ಲಿ ನಡೆಯಲಿರುವ ದಿನೇಶ್ ಗುಂಡೂರಾವ್ ಪದಗ್ರಹಣದ ಅದ್ಧೂರಿ ಕಾರ್ಯಕ್ರಮಕ್ಕೆ ಅತೃಪ್ತರೂ ಹಾಜರಾಗುತ್ತಾರಾ? ಸದ್ಯಕ್ಕೆ ಎದ್ದಿರುವ ಮಹತ್ವದ ಪ್ರಶ್ನೆ ಇದೇ.
ಎಂ ಬಿ ಪಾಟೀಲ, ಎಚ್ ಕೆ ಪಾಟೀಲ್, ಸತೀಶ್ ಜಾರಕಿಹೊಳಿ ಸೇರಿದಂತೆ ಕಾಂಗ್ರೆಸ್ಸಿನ ಅತೃಪ್ತ ಶಾಸಕರು ಅಕಸ್ಮಾತ್ ಈ ಕಾರ್ಯಕ್ರಮಕ್ಕೆ ಗೈರಾದರೆ, ಪದಗ್ರಹಣದ ದಿನವೇ ದಿನೇಶ್ ಗುಂಡೂರಾವ್ ಅವರಿಗೆ ಭಾರೀ ಸವಾಲಿನ ಸೂಚನೆ ಸಿಕ್ಕುವುದು ಖಂಡಿತ!
ಕೆಪಿಸಿಸಿ ಅಧ್ಯಕ್ಷರಾಗಿ ಇಂದು ದಿನೇಶ್ ಗುಂಡೂರಾವ್ ಪದಗ್ರಹಣ
ಇಂದು ಬೆಳಿಗ್ಗೆ ಅರಮನೆ ಮೈದಾನದಲ್ಲಿ ನಡೆಯಲಿರುವ ಅದ್ಧೂರಿ ಸಮಾರಂಭದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿ ದಿನೇಶ್ ಗುಂಡೂರಾವ್ ಅವರು ಅಧಿಕಾರ ಸ್ವೀಕರಿಸಲಿದ್ದಾರೆ. ಸಮಾರಂಭಕ್ಕೆ ಸುಮಾರು 35 ಸಾವಿರದಿಂದ 50 ಸಾವಿರ ಜನ ಸೇರುವ ನಿರೀಕ್ಷೆ ಇದೆ. ರಾಜ್ಯದ ಪ್ರಭಾವೀ ಕಾಂಗ್ರೆಸ್ ನಾಯಕರೂ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಉಪಮುಖ್ಯಮಂತ್ರಿ ಜಿ. ಪರಮೇಶ್ವರ್ ಅವರು ಸಹ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಾರೆ.
ಅತೃಪ್ತರು ಹಾಜರಾಗುತ್ತಾರಾ?
ಎಂ ಬಿ ಪಾಟೀಲ, ಸತೀಶ್ ಜಾರಕಿಹೊಳಿ, ಎಚ್ ಕೆ ಪಾಟೀಲ್ ಸೇರಿದಂತೆ ಅತೃಪ್ತ ಶಾಸಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರಾ ಎಂಬುದು ಈಗಿರುವ ಮಹತ್ವದ ಪ್ರಶ್ನೆ. ಕಾಂಗ್ರೆಸ್ ಹೈಕಮಾಂಡ್ ಮೇಲೆ ಮತ್ತು ಮೈತ್ರಿ ಸರ್ಕಾರದ ಮೇಲೆ ಮುನಿಸಿಕೊಂಡಿರುವ ಅತೃಪ್ತರು, ದಿನೇಶ್ ಗುಂಡೂರಾವ್ ಅವರ ಪದಗ್ರಹಣಕ್ಕೆ ಗೈರಾದರೆ, ಆ ಮೂಲಕ ಬಂಡಾಯದ ಸಂದೇಶವನ್ನು ಮತ್ತಷ್ಟು ಪರಿಣಾಮಕಾರಿಯಾಗಿ ತೋರಿಸಿದಂತಾಗುತ್ತದೆ. ಇದು ಕಾಂಗ್ರೆಸ್ ನಾಯಕರಲ್ಲೂ ಇರಿಸುಮುರಿಸುಂಟುಮಾಡಬಹುದು.
ದಿನೇಶ್ ಗುಂಡೂರಾವ್ ಮೇಲೆ ಮುನಿಸಿದೆಯೇ?
ಹಾಗೆ ಹೇಳುವುದಕ್ಕೆ ಹೋದರೆ ದಿನೇಶ್ ಗುಂಡೂರಾವ್ ಅವರು ಕಾಂಗ್ರೆಸ್ಸಿನ ಎಲ್ಲಾ ನಾಯಕರೊಂದಿಗೂ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಅತೃಪ್ತರ ಬಂಡಾಯ ಶಮನಕ್ಕೂ ಅವರು ಪ್ರಯತ್ನಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ದಿನೇಶ್ ಗುಂಡೂರಾವ್ ಅವರನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದರ ಬಗ್ಗೆ ಅತೃಪ್ತರಿಗೆ ಬೇಸರವಿದ್ದಂತಿಲ್ಲ. ಕಾಂಗ್ರೆಸ್ಸಿನ ಎಲ್ಲಾ ನಾಯಕರಲ್ಲೂ ವಿಶ್ವಾಸ ಗಳಿಸಿ, ಯಾರೊಂದಿಗೂ ನಿಷ್ಠುರ ಕಟ್ಟಿಕೊಳ್ಳದ ಕಾರಣವೂ ದಿನೇಶ್ ಗುಂಡೂರಾವ್ ಅವರನ್ನು ಈ ಸ್ಥಾನಕ್ಕೆ ಆರಿಸಲು ಇದ್ದ ಅರ್ಹತೆಗಳಲ್ಲೊಂದು! ಅವರ ಮೇಲೆ ಯಾರಿಗೂ ಮುನಿಸಿದ್ದಂತಿಲ್ಲ. ಆದ್ದರಿಂದ ಅತೃಪ್ತರೂ ಕಾರ್ಯಕ್ರಮಕ್ಕೆ ಆಗಮಿಸಿದರೆ ಅಚ್ಚರಿಯಿಲ್ಲ.
ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮುಂದಿರುವ ಸವಾಲುಗಳು!
ಅತೃಪ್ತರು ಗೈರಾದರೆ ಮುಂದೇನು?
ಅಕಸ್ಮಾತ್ ಅತೃಪ್ತ ಶಾಸಕರು ಗೈರಾದರೆ ಮುಂದೇನು? ಕೆಪಿಸಿಸಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸುತ್ತಿದ್ದಂತೆಯೇ ದಿನೇಶ್ ಗುಂಡೂರಾವ್ ಅವರಿಗೆ ಮಣಬಾರದ ಸವಾಲೊಂದು ಎದುರಾದಂತಾಗುತ್ತದೆ. ಅಧಿಕಾರ ಸ್ವೀಕರಿಸಿದ ಮರುದಿನದಿಂದಲೇ ಬಂಡಾಯ ಶಮನಕ್ಕೆ ಪ್ರಯತ್ನಿಸಬೇಕಾಗುತ್ತದೆ. ಇವೆಲ್ಲವನ್ನೂ ಸಮರ್ಥವಾಗಿ ನಿಭಾಯಿಸುವ ಸಾಮರ್ಥ್ಯ ಅವರಿಗಿದೆ ಎಂಬುದನ್ನು ಮನಗಂಡೇ ಪಕ್ಷ ಈ ಸ್ಥಾನವನ್ನು ಅವರಿಗೆ ನೀಡಿದೆ. ಅದರರ್ಥ ದಿನೇಶ್ ಗುಂಡೂರಾವ್ ಅವರ ಮೇಲೆ ಪಕ್ಷದ ನಾಯಕರಲ್ಲಿ ನಿರೀಕ್ಷೆ ಹೆಚ್ಚಿದೆ!
ಲೋಕಸಭಾ ಚುನಾವಣೆಯ ಸವಾಲು!
ಮುಂಬರುವ ಲೋಕಸಭಾ ಚುನಾವಣೆಗೆ ಹೆಚ್ಚು ಸಮಯವಿಲ್ಲ. ಅಷ್ಟರಲ್ಲಿ ಪಕ್ಷವನ್ನು ಸಂಘಟಿಸಬೇಕು. ಆದರೆ ಪಕ್ಷದೊಳಗಿನ ವೈಮನಸ್ಯವನ್ನೇ ಸರಿಪಡಿಸುತ್ತ ಕಾಲಕಳೆಯುವುದಕ್ಕೆ ದಿನೇಶ್ ಗುಂಡೂರಾವ್ ಅವರಿಗೆ ಸಮಯವಿಲ್ಲ. ಆದ್ದರಿಂದ ಈ ಸವಾಲನ್ನು ಅವರು ಹೇಗೆಲ್ಲ ಸ್ವೀಕರಿಸುತ್ತಾರೆ ಎಂಬುದು ಕುತೂಹಲದ ವಿಷಯವೆನ್ನಿಸಿದೆ.