ನಾವೇನೂ ಏಕಾಏಕಿ ಸರ್ಕಾರ ಮಾಡಿಲ್ಲ: ದಿನೇಶ್ ಗುಂಡೂರಾವ್
Recommended Video
ಬೆಂಗಳೂರು, ಜೂನ್ 21: 'ನಾವೇನು ಏಕಾಏಕಿ ಸಮ್ಮಿಶ್ರ ಸರ್ಕಾರ ರಚಿಸಿಲ್ಲ. ಎಚ್ ಡಿ ಕುಮಾರಸ್ವಾಮಿ ಅವರೊಂದಿಗೆ ಚರ್ಚಿಸಿ ಸರ್ಕಾರ ರಚಿಸಲಾಗಿದೆ. ಐದು ವರ್ಷ ಕಾಲ ಅವರಿಗೆ ಬೆಂಬಲ ನೀಡುವುದಾಗಿ ಘೋಷಣೆ ಮಾಡಲಾಗಿದೆ. ಅದರಂತೆ ನಡೆದುಕೊಳ್ಳುತ್ತಿದ್ದೇವೆ' ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದರು.
ಮಧ್ಯಂತರ ಚುನಾವಣೆ ನಡೆಯಬಹುದು ಎಂಬ ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿ ನಡೆಸುವ ಷಡ್ಯಂತ್ರಕ್ಕೆ ಉತ್ತರ ನೀಡಲು ಕುಮಾರಸ್ವಾಮಿ ಅವರ ಜತೆಗೆ ಕುಳಿತು ಚರ್ಚಿಸಿದ್ದೇವೆ. ದೇವೇಗೌಡರನ್ನೂ ಭೇಟಿ ಮಾಡಿ ಎಲ್ಲವನ್ನೂ ವಿವರಿಸಿದ್ದೇವೆ, ನಾವೇನು ಏಕಾಏಕಿ ಸಮ್ಮಿಶ್ರ ಸರ್ಕಾರ ರಚಿಸಿಲ್ಲ ಎಂದರು.
ದೇವೇಗೌಡರು ತಪ್ಪಾಗಿ ಹೇಳಿದ್ದಾರೆ ಎನ್ನುವುದಿಲ್ಲ. ಅವರ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಅವರು ಹೇಳಿರುವುದರಲ್ಲಿ ನಿಜಾಂಶವಿದೆ. ಎರಡೂ ಪಕ್ಷಗಳಿಗೆ ನಿರೀಕ್ಷಿತ ಮಟ್ಟದಲ್ಲಿ ಬೆಂಬಲ ಸಿಗಲಿಲ್ಲ ಎಂದರು.
"ಕಾಂಗ್ರೆಸ್ ಹೈಕಮಾಂಡ್ ಶಕ್ತಿ ಕಳೆದುಕೊಂಡಿದೆ. ಸಮ್ಮಿಶ್ರ ಸರ್ಕಾರ ಎಷ್ಟು ದಿನ ಇರುತ್ತದೆ ಎಂದು ಹೇಳುವುದು ಕಷ್ಟ. ಕರ್ನಾಟದಲ್ಲಿ ಮಧ್ಯಂತರ ಚುನಾವಣೆ ನಡೆಯಬಹುದು" ಎಂದು ಎಚ್ ಡಿ ದೇವೇಗೌಡ ಅವರು ಹೇಳಿಕೆ ನೀಡಿರುವುದು ಭಾರಿ ಚರ್ಚೆಗೆ ಗ್ರಾಸವಾಗಿದೆ.

ನಾವೂ ದೂಳೀಪಟ ಅವರೂ ದೂಳೀಪಟ
ಸಮ್ಮಿಶ್ರ ಸರ್ಕಾರದಲ್ಲಿ ಎಲ್ಲರೂ ಮಂತ್ರಿಯಾಗಬೇಕು, ಅಧ್ಯಕ್ಷನಾಗಬೇಕು, ನಮ್ಮ ಕೆಲಸ ಹೀಗೆ ಆಗಬೇಕೆಂದು ಕೂತರೆ ನಾವೂ ದೂಳೀಪಟ ಅವರೂ ದೂಳೀಪಟ ಆಗುತ್ತಾರೆ. ಏಕೆಂದರೆ ನಮ್ಮನ್ನು ಅಸ್ಥಿರಗೊಳಿಸಲು ಬಿಜೆಪಿ ಪ್ರಯತ್ನ ನಡೆಸುತ್ತಲೇ ಇದೆ. ಹೀಗಾಗಿ ನಮ್ಮ ಗಮನ ಅಧಿಕಾರಕ್ಕಿಂತ ಜನಪರ ಆಡಳಿತದ ಕಡೆಗಿರಬೇಕು ಎಂದು ಹೇಳಿದರು

ಆಂತರಿಕವಾಗಿ ಚರ್ಚಿಸಬೇಕು
ಫಲಿತಾಂಶ ಬಂದ ಬಳಿಕ ಎಲ್ಲಿ ತಪ್ಪಾಗಿದೆ ಎಂಬುದನ್ನು ಪಕ್ಷದಲ್ಲಿ ಆಂತರಿಕವಾಗಿ ಚರ್ಚಿಸಬೇಕು. ಬಹಿರಂಗವಾಗಿ ಹೇಳುವುದರಿಂದ ಯಾವುದೇ ಪ್ರಯೋಜನವಿಲ್ಲ. ನಾವೂ ಚರ್ಚಿಸಿದ್ದೇವೆ. ಮುಖ್ಯಮಂತ್ರಿ ಕುಮಾರಸ್ವಾಮಿ ಅವರೊಂದಿಗೆ ಕುಳಿತು ನಾವು ಎಲ್ಲೆಲ್ಲಿ ಎಡವಿದ್ದೇವೆ ಎಂದು ವಿಶ್ಲೇಷಿಸಿದ್ದೇವೆ, ಸೂಕ್ತ ರೀತಿಯಲ್ಲಿ ಪ್ರಚಾರ ಮಾಡಿದ್ದರೆ ಸರಿಯಾದ ಪ್ರಚಾರ ಬರುತ್ತಿತ್ತು. ಜನರು ಬುದ್ಧಿವಂತರಿದ್ದಾರೆ. ನಾವಿಲ್ಲಿ ಯಾರ ಮೇಲೆಯೂ ಗೂಬೆ ಕೂರಿಸಲು ಸಾಧ್ಯವಿಲ್ಲ. ಈ ರೀತಿ ಆರೋಪದ ಅಗತ್ಯವಿಲ್ಲ ಎಂದರು.

ಕುಮಾರಸ್ವಾಮಿ ಅವರಿಗೆ ತಾನೆ ಬಲ
ಈ ಸರ್ಕಾರ ಸ್ಥಿರವಾಗಿದ್ದರೆ ಮುಖ್ಯಮಂತ್ರಿ ಹುದ್ದೆಯಲ್ಲಿ ಮುಂದುವರಿಯುವುದು ಕುಮಾರಸ್ವಾಮಿ ಅವರೇ ತಾನೆ? ನಾವು ಸರ್ಕಾರಕ್ಕೆ ಬೆಂಬಲ ನೀಡಿದರೆ ಬಲ ಸಿಗುವುದು ಕುಮಾರಸ್ವಾಮಿ ಅವರಿಗೆ ತಾನೆ? ಎಂದು ದೇವೇಗೌಡರ ಹೇಳಿಕೆಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದರು.

ಗೌಡರ ಚದುರಂಗದಾಟ ಊಹೆಗೆ ನಿಲುಕದ್ದು
ದೇವೇಗೌಡರ ಕೇರಂ ಆಟವೇ ಅರ್ಥವಾಗುವುದಿಲ್ಲ. ಇನ್ನು ರಾಜಕೀಯ ಚದುರಂಗದಾಟ ಯಾರಿಗೆ ತಿಳಿಯಲು ಸಾಧ್ಯ?. ಯಾವಾಗ ಯಾವ ಪಾನ್ ಹೊಡೆಯುತ್ತಾರೆ ಎಂದು ಅಂದಾಜಿಸುವುದೂ ಸಾಧ್ಯವಿಲ್ಲ. ಹೀಗೆ ಅವರು ಎದುರಾಳಿಗಳನ್ನು ಪಚೀತಿಗೆ ಸಿಲುಕಿಸುತ್ತಾರೆ ಎಂದು ಜೆಡಿಎಸ್ ಮುಖಂಡ ವೈಎಸ್ವಿ ದತ್ತ ಹೇಳಿದರು.
ಅವರು ತೆಗೆದುಕೊಳ್ಳುವ ಜನಪರ ನಿಲುವುಗಳು, ರಾಜಕೀಯ ತಂತ್ರಗಾರಿಕೆ, ತೀರ್ಮಾನಗಳು ನಿಗೂಢ. ಅವರು ಸೋತರೂ ಕಾರ್ಯಕರ್ತರನ್ನು ಬಿಡದೆ ತಮ್ಮೊಂದಿಗೆ ಕೊಂಡೊಯ್ಯುತ್ತಾರೆ. ಆ ಹಠ ಅವರಲ್ಲಿದೆ. ಕಳೆದುಕೊಂಡಲ್ಲಿಯೇ ಅದನ್ನು ಪಡೆದುಕೊಳ್ಳುತ್ತಾರೆ ಎಂದು ದತ್ತ ಬಣ್ಣಿಸಿದರು.











Click it and Unblock the Notifications