ದೇವೇಗೌಡರ ಬದುಕಿನ ಒಂದೇ ಒಂದು ಕೊರಗು ಅಂದ್ರೆ...
Recommended Video
ಬೆಂಗಳೂರು, ಏಪ್ರಿಲ್ 24: "ನನ್ನ ರಾಜಕೀಯ ಬದುಕಿನ ಒಂದೇ ಒಂದು ಬೇಸರದ ಸಂಗತಿ ಎಂದರೆ... ನಾನು ಪ್ರಧಾನಿಯಾಗಿ ಪೂರ್ಣ ಐದು ವರ್ಷ ಪೂರೈಸದೆ ಇದ್ದಿದ್ದು..." ಎಂದು ನಿಟ್ಟುಸಿರುಬಿಟ್ಟವರು ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡರು.
ಎಎನ್ ಐ ಗೆ ಅವರು ನೀಡಿದ ವಿಶೇಷ ಸಂದರ್ಶನದಲ್ಲಿ ತಮ್ಮ ರಾಜಕೀಯ ಬದುಕಿನ ಅನುಭವಗಳನ್ನು ಸವಿವರವಾಗಿ ಹಂಚಿಕೊಂಡಿದ್ದಾರೆ. ಕರ್ನಾಟಕದ ಪ್ರಾದೇಶಿಕ ಪಕ್ಷದ ಮುಖಂಡರೊಬ್ಬರು ಪ್ರಧಾನಿಯಾದದ್ದು ಆಕಸ್ಮಿಕವೇ ಆದರೂ ಈ ಇಳಿ ವಯಸ್ಸಿನಲ್ಲಿಯೂ ಬತ್ತದ ಅವರ ಹುರುಪು, ರಾಜಕೀಯ ಇಚ್ಛಾಶಕ್ತಿ ಮನನೀಯ.
ಜೆಡಿಎಸ್ ಅಭ್ಯರ್ಥಿಯನ್ನೇ ಸೋಲಿಸಲು ಮುಂದಾದ್ರಾ ದೇವೇಗೌಡರ ಸೊಸೆ?
ಎರಡು ವರ್ಷಗಳ ಕಾಲ ಕರ್ನಾಟಕದ ಮುಖ್ಯಮಂತ್ರಿಯಾಗಿ(1994-96), 10 ತಿಂಗಳುಗಳ ಕಾಲ (1996) ದೇಶದ ಪ್ರಧಾನಿಯಾಗಿ ಕಾರ್ಯ ನಿರ್ವಹಿಸಿದ ದೇವೇಗೌಡರು, ಸದ್ಯಕ್ಕೆ ಹಾಸನ ಲೋಕಸಭಾ ಕ್ಷೇತ್ರದ ಸಂಸದರು. ಅವರು ತಮ್ಮ ರಾಜಕೀಯ ಬದುಕಿನ ಹಾದಿಯನ್ನು ಅವಲೋಕಿಸಿದ್ದು ಹೀಗೆ...
10 ತಿಂಗಳಲ್ಲಿ ಮ್ಯಾಜಿಕ್!
"ಹೌದು, ಮುಖ್ಯಮಂತ್ರಿಯಾಗಿ ನಾನು ಐದು ವರ್ಷ ಪೂರೈಸಲಿಲ್ಲ. ಪ್ರಧಾನಮಂತ್ರಿಯಾಗಿಯೂ ನಾನು ಐದು ವರ್ಷ ಪೂರೈಸಲಿಲ್ಲ. ಆದರೆ ಕೇವಲ 10 ತಿಂಗಳು ಪ್ತರಧಾನಿಯಾಗಿ ಆಡಳಿತ ನಡೆಸಿದರೂ ನಾವು ದೇಶದ ಪ್ರಮುಖ ಸಮಸ್ಯೆಗಳ ಪರಿಹಾರಕ್ಕೆ ಸಮರ್ಥ ಯೋಜನೆಗಳನ್ನು ರೂಪಿಸಿದ್ದೆವು. ಟೆಲಿಕಾಮ್ ಪಾಲಿಸಿ, ರಾಷ್ಟ್ರೀಯ ಹೆದ್ದಾರಿ, ಮೆಟ್ರೋ ಪಾಲಿಸಿ, ಅವಕ್ಕೆಲ್ಲ ದೇಣಿಗೆ ಸಂಗ್ರಹಿಸುವುದು ಹೇಗೆ?, ಕಾಶ್ಮೀರ ಸಮಸ್ಯೆ ಇತ್ಯಾದಿ ಎಲ್ಲ ವಿಷಯಗಳ ಪರಿಹಾರಕ್ಕೂ ಕೇವಲ 10 ತಿಂಗಳಿನಲ್ಲಿ ಚೌಕಟ್ಟು ಹಾಕಿಕೊಂಡಿದ್ದೆವು."- ಎಚ್. ಡಿ. ದೇವೇಗೌಡ
ಈಶಾನ್ಯ ರಾಜ್ಯಗಳಿಗೆ ಆದ್ಯತೆ
"ನನ್ನ ಅಧಿಕಾರಾವಧಿಯಲ್ಲಿ ನಾನು ಸಾಕಷ್ಟು ಬಾರಿ ಈಶಾನ್ಯ ರಾಜ್ಯಗಳಿಗೆ ತೆರಳಿದ್ದೇನೆ. ಅದಕ್ಕೂ ಮುನ್ನ ಯಾವ ಪ್ರಧಾನಿಯೂ ಈಶಾನ್ಯ ರಾಜ್ಯಗಳಿಗೆ ಅಷ್ಟು ಬಾರಿ ಭೇಟಿ ನೀಡಿರಲಿಲ್ಲ. ಮಾನು ಪ್ರಧಾನಿಯಾಗಿದ್ದ ಸಮಯದಲ್ಲಿ ಎಲ್ಲಿಯೂ ಕೋಮುಗಲಭೆಗಳಾಗಿರಲಿಲ್ಲ. ಜಮ್ಮು ಕಾಶ್ಮೀರದಲ್ಲೂ ನಾನು ಪ್ರಧಾನಿಯಾಗಿದ್ದ ಹತ್ತು ತಿಂಗಳಲ್ಲಿ ಒಮ್ಮೆಯೂ ಕೋಮು ಸೌಹಾರ್ದ ಕದಡುವಂಥ ಘಟನೆ ನಡೆದಿರಲಿಲ್ಲ. ನನಗೆ ಒಂದು ಕನಸಿತ್ತು, ನನ್ನ ದೇಶ ಎಂದಿಗೂ ಶಾಂತಿಗೆ ಹೆಸರಾಗಬೇಕು ಅಂತ"- ಎಚ್. ಡಿ. ದೇವೇಗೌಡ
ಮೊಮ್ಮಗ ರಾಷ್ಟ್ರ ರಾಜಕಾರಣಕ್ಕೆ ಬರುತ್ತಾನೆ!
2019 ರ ಲೋಕಸಭಾ ಚುನಾವಣೆಯಲ್ಲೂ ಸ್ಪರ್ಧಿಸುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನನಗೆ ಈಗ 84 ವರ್ಷ ವಯಸ್ಸು. 75-78 ವರ್ಷ ವಯಸ್ಸಾಗಿದ್ದರೆ ಬರಬಹುದಿತ್ತು. ರಾಷ್ಟ್ರ ರಾಜಕಾರಣದಲ್ಲಿ ನಾನು ವಹಿಸಿದ ಪಾತ್ರವನ್ನು ಇನ್ನು ಮುಂದೆ ನನ್ನ ಮೊಮ್ಮಗ ವಹಿಸುತ್ತಾನೆ ಎಂದು ಎಚ್ ಡಿ ರೇವಣ್ಣ ಅವರ ಮಗ ಪ್ರಜ್ವಲ್ ರೇವಣ್ಣ ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಾರೆ ಎಂಬ ಸೂಚನೆಯನ್ನು ದೇವೇಗೌಡರು ನೀಡಿದರು.
ಪ್ರಜ್ವಲ್ ರೇವಣ್ಣಗೆ ಟಿಕೆಟ್ ನೀಡುವಂತೆ ದೇವೇಗೌಡರಿಗೆ ಒತ್ತಾಯ
ಹೆಗಡೆ ಅವರನ್ನು ಪದೇ ಪದೇ ನೆನೆದ ಗೌಡ್ರು
ಕರ್ನಾಟಕದ ಮಾಜಿ ಮುಖ್ಯಮಂತ್ರಿ ದಿ.ರಾಮಕೃಷ್ಣ ಹೆಗಡೆ ಅವರನ್ನು ಗೌಡರು ತಮ್ಮ ಮಾತಿನುದ್ದಕ್ಕೂ ನೆನಪಿಸಿಕೊಂಡರು. ಅವರನ್ನು ಒಬ್ಬ ಅತ್ಯುತ್ತಮ ನಾಯಕ ಎಂದು ನಾನು ಹೆಮ್ಮೆಯಿಂದ ಹೇಳಬಲ್ಲೆ ಎಂದು ಅವರು ಹೇಳಿದರು. ಆದರೆ ಸಿದ್ದರಾಯ್ಯ ಅವರನ್ನು ನಾನು 'ನಾಯಕ' ಎನ್ನಲಾರೆ ಎಂದು ಸಿದ್ದು ಬಗೆಗಿನ ತಮ್ಮ ಮುನಿಸನ್ನು ಇಲ್ಲಿಯೂ ಹೊರಹಾಕಿದರು. ಜೆ.ಎಚ್.ಪಾಟೇಲ್, ನಿಜಲಿಂಗಪ್ಪ, ಬಿಡಿ ಜತ್ತಿ ಎಲ್ಲರನ್ನೂ ನಾನು ನೆನೆಯುತ್ತೇನೆ. ನಾನು ಇವರೆಲ್ಲರೊಂದಿಗೆ ಕೆಲಸ ಮಾಡಿದ್ದೇನೆ. ನನ್ನ ರಾಜಕೀಯ ಗುರುಗಳು ಎ.ಜಿ.ರಾಮಚಂದ್ರ ರಾವ್. ನನ್ನ ಬದುಕಿನ ಇಳಿಸಂಜೆಯ ಹೊತ್ತಲ್ಲಿ ಅವರ್ಯಾರೂ ನನ್ನೊಂದಿಗಿಲ್ಲ, ಎಲ್ಲರೂ ಹೊರಟುಹೋಗಿದ್ದಾರೆ" ಎಂದು ಅವರು ಭಾವುಕರಾಗಿ ನುಡಿದರು.
ಮೋದಿ ಅಲೆ ಮೊದಲಿನಂತಿಲ್ಲ
ಹಾಲಿ ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಗೌಡರು, 'ಪ್ರಧಾನಿ ನರೇಂದ್ರ ಮೋದಿಯವರು ಅಧಿಕಾರ ಸ್ವೀಕರಿಸುವಾಗ ಜನರಿಗೆ ಅವರ ಬಗ್ಗೆ ಇದ್ದ ವಿಶ್ವಾಸ, ಅವರಿಗಿದ್ದ ಜನಪ್ರಿಯತೆ ಈಗಿಲ್ಲ. ಅದು ನಿಧಾನವಾಗಿ ಕುಸಿಯುತ್ತಿದೆ ಎಂದು ಮಾತ್ರ ನಾನು ಹೇಳಬಲ್ಲೆ' ಎಂದರು. ಎನ್ ಡಿಎ ಮೈತ್ರಿಕೂಟದೊಂದಿಗೆ ಸೇರಲು ಮೋದಿಯವರಿಂದ ನಿಮಗೂ ಆಹ್ವಾನ ಬಂದಿತ್ತೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, 'ನನಗೆ ಸದ್ಯಕ್ಕೆ ಯಾವುದೇ ರಾಜಕೀಯ ಆಕಾಂಕ್ಷೆ ಇಲ್ಲ. ನಾನು ಬಿಜೆಪಿ ವಿರೋಧಿ ಅಥವಾ ಕಾಂಗ್ರೆಸ್ ವಿರೋಧಿ ಯಾವುದೇ ಪಕ್ಷದೊಂದಿಗೆ ಗುರುಸಿತಿಕೊಳ್ಳುವುದಕ್ಕೆ ಇಷ್ಟಪಡುವುದಿಲ್ಲ. ನನ್ನ ಬಳಿ ಮಾರ್ಗದರ್ಶನ, ಸಲಹೆ ಕೇಳುವವರಿಗೆ ಕೊಡುತ್ತೇನೆ ಅಷ್ಟೆ. ಆದರೆ ನಾನೂ ಅದರ ಭಾಗವಾಗಲಾರೆ' ಎಂದರು.
ಕುಮಾರಸ್ವಾಮಿ ಮುಖ್ಯಮಂತ್ರಿಯಾಗುತ್ತಾರಾ..?
ಮುಂಬರುವ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ನಿಮ್ಮ ಪಕ್ಷವೇ ಕಿಂಗ್ ಮೇಕರ್ ಎನ್ನಲಾಗುತ್ತಿದೆ. ಅಂಥ ಸಂದರ್ಭದಲ್ಲಿ ನಿಮ್ಮ ಮಗನನ್ನೇ ಮುಖ್ಯಮಂತ್ರಿ ಮಾಡುವುದು ನಿಮ್ಮ ಉದ್ದೇಶ ಎನ್ನಲಾಗುತ್ತಿದೆಯಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನನ್ನ ಗುರಿ ಏನಿದ್ದರೂ ಕರ್ನಾತಕದ ಪ್ರಾದೇಶಿಕ ಪಕ್ಷವಾದ ಜೆಡಿಎಸ್ ಅನ್ನು ಉಳಿಸುವುದು. ಅಕಸ್ಮಾತ್ ಕುಮಾರಸ್ವಾಮಿ ಮುಖ್ಯಮಂತ್ರಿಯಾದರೆ ಅದು ಅವರ ಅದೃಷ್ಟವಷ್ಟೆ ಎಂದು ಗೌಡರು ಪ್ರತಿಕ್ರಿಯಿಸಿದ್ದಾರೆ.