ಹಳೆ ಮಿತ್ರ ಸಿದ್ದರಾಮಯ್ಯ ವಿರುದ್ಧ ಗುಡುಗಿದ ದೇವೇಗೌಡ
ಬೆಂಗಳೂರು, ಜನವರಿ 31: ನಿನ್ನೆ ಅರಮನೆ ಮೈದಾನದಲ್ಲಿ ನಡೆದ ಜೆಡಿಎಸ್ ಕಾರ್ಯಕಾರಿಣಿ ಸಭೆಯಲ್ಲಿ ದೇವೇಗೌಡ ಅವರು ಮೈತ್ರಿ ಸರ್ಕಾರದ ಬಗ್ಗೆ ಆಡಿದ ಮಾತುಗಳು ರಾಜಕೀಯವಾಗಿ ಬಹು ಮಹತ್ವ ಪಡೆದುಕೊಳ್ಳುತ್ತಿವೆ.
ನಿನ್ನೆಯ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ್ದ ಅವರು, ನಾನು ನೋವಿನಲ್ಲಿದ್ದೇನೆ. ಕುಮಾರಸ್ವಾಮಿ ಅವರು ಸಿಎಂ ಆಗಿ ಆರು ತಿಂಗಳಾಯಿತು. ಈ ವರೆಗೆ ಏನೇ ನಡೆದರು ನಾನು ಮಾತನಾಡಿಲ್ಲ ಆದರೆ ಇನ್ನು ಮುಂದೆ ಸುಮ್ಮನೆ ಕೂರಲು ಸಾಧ್ಯವಿಲ್ಲ ಎಂದು ದೇವೇಗೌಡ ಎಚ್ಚರಿಕೆ ನೀಡಿದರು.
ಮೈತ್ರಿ ಸರ್ಕಾರವನ್ನು ನಡೆಸುವ ರೀತಿಯೇ ಇದು ಎಂದು ಗರಂ ಆದ ದೇವೇಗೌಡ, ಮಿತ್ರ ಪಕ್ಷದ ವಿರುದ್ಧ ಕೆಟ್ಟ ಭಾಷೆ ಬಳಸದೆ, ತಪ್ಪು ಹೇಳಿಕೆ ನೀಡದಂತೆ ಕೇಳಿಕೊಂಡು ಇರಬೇಕಾಗಿದೆ ಎಂದು ಅಸಮಾಧಾನ ಹೊರಹಾಕಿದರು.

ಸಿದ್ದರಾಮಯ್ಯ ವಿರುದ್ಧವೂ ಪರೋಕ್ಷ ವಾಗ್ದಾಳಿಗಳನ್ನು ನಡೆಸಿದ ದೇವೇಗೌಡ ಅವರು, ಕುಮಾರಸ್ವಾಮಿ ಸರ್ಕಾರದ ಬಗ್ಗೆ ಸಂಜೆ ಒಂದು ಮಾತನಾಡುತ್ತಾರೆ, ಬೆಳಿಗ್ಗೆ ಒಂದು ಮಾತನಾಡುತ್ತಾರೆ. ಕುಮಾರಸ್ವಾಮಿ ಮಾಡಿದ ಒಳ್ಳೆ ಕೆಲಸಕ್ಕೆ ಮಸಿ ಬಳಿಯುವ ಕೆಲಸ ಮಾಡುತ್ತಿದ್ದಾರೆ ಎಂದು ದೇವೇಗೌಡ ಸಿಟ್ಟಾದರು.
ನೀವು ಐದು ವರ್ಷ ಸಿಎಂ ಆಗಿದ್ದಿರಿ. ಆಗ ಅಕ್ರಮ-ಸಕ್ರಮವೋ ನೀವು ಮಾಡಿದ ಕೆಲಸದ ಬಗ್ಗೆ ನಾವೀಗ ಮಾತನಾಡುತ್ತಿಲ್ಲ. ಆದರೆ ಕುಮಾರಸ್ವಾಮಿ ಅವರ ಕೆಲಸಕ್ಕೆ ಏಕೆ ಅಡ್ಡಿ ಬರುತ್ತೀರಿ. ಕುಮಾರಸ್ವಾಮಿ ಬಗ್ಗೆ ಇಲ್ಲದ ಅಪಪ್ರಚಾರ ಯಾಕೆ ಮಾಡುತ್ತಿದ್ದೀರಿ ಎಂದು ಸಿದ್ದರಾಮಯ್ಯ ಹೆಸರು ಹೇಳದೆ ದೇವೇಗೌಡ ಪ್ರಶ್ನಿಸಿದರು.












Click it and Unblock the Notifications