ಆ ಸುಂದರ ರಂಗೋಲಿಯನ್ನು ಕಸದ ರಾಶಿ ಎಂದೋ ಅಳಿಸಿಹಾಕಿದೆ
ಬೆಂಗಳೂರು, ನವೆಂಬರ್ 08 : ಹಸಿರು ಕೋಟ್ ಹಾಕಿಕೊಂಡು, ಕೈಯಲ್ಲಿ ಪೊರಕೆ ಹಿಡಿದುಕೊಂಡು, ನಾವು ಹೊಲಸು ಮಾಡುವ ರಸ್ತೆಯನ್ನು ಗುಡಿಸುವ ಪೌರ ಕಾರ್ಮಿಕ ಮಹಿಳೆಯೊಬ್ಬಳು ವಯಸ್ಸಾದ ಮಹಿಳೆಯ ಮುಂದೆ ಕೈಮುಗಿದುಕೊಂಡು ನಿಂತಿದ್ದಳು.
"ನಿಮಗೆ ಕೈಮುಗಿದು ಕೇಳಿಕೊಳ್ಳುತ್ತೇನೆ. ದಯಮಾಡಿ ಇಲ್ಲಿ ಕಸ ಹಾಕಬೇಡಿ. ನಿಮ್ಮ ಮನೆ ಮುಂದೆಯೇ ಕಸ ಹಾಕುವ ಗಾಡಿ ಬರುತ್ತದೆ. ಅದರಲ್ಲಿಯೇ ಹಸಿಕಸ, ಒಣಕಸ ಬೇರ್ಪಡಿಸಿ ಹಾಕಿ" ಎಂದು ವಿನಂತಿಸಿಕೊಳ್ಳುತ್ತಿದ್ದಳು. ಈ ಜನರಿಗೆ ಎಷ್ಟು ಹೇಳಿದರೂ ಅಷ್ಟೇ ಎಂಬಂತಹ ಭಾವನೆ ಆಕೆಯಲ್ಲಿ ಮನೆ ಮಾಡಿತ್ತು.
ಏಕೆಂದರೆ, ಕಳ್ಳಬೆಕ್ಕಿನ ಹಾಗೆ ಪ್ರತಿದಿನ ಬಂದು, ಯಾರೂ ನೋಡುತ್ತಿಲ್ಲ ಅಂತ ಅಂದುಕೊಂಡೇ, ಪ್ಲಾಸ್ಟಿಕ್ ಕವರ್ ನಲ್ಲಿ ತುಂಬಿದ ಕಸವನ್ನು ಎಸೆಯುವ ಜಾಗದಲ್ಲಿ ಅಂದು ಸುಂದರವಾದ ರಂಗೋಲಿ ಅರಳಿತ್ತು. ಅದು ಬರೀ ರಂಗೋಲಿಯಲ್ಲ, ಬಣ್ಣಗಳಿಂದ ತುಂಬಿಕೊಂಡ ಸುಂದರ ಕಲಾಕೃತಿ.
ಅದರ ಮೇಲೆ ಕಸ ಬಿಸಾಕುವುದಿರಲಿ, ಆ ರಂಗೋಲಿಯ ಮೇಲೆ ಕಾಲಿಡಲೂ ಮನಸ್ಸು ಬಾರದು. ಪೌರ ಕಾರ್ಮಿಕೆಯರು ಹೆಮ್ಮೆಯಿಂದ ಬಿಡಿಸಿದಂತಹ ರಂಗೋಲಿಯದು. ಆದರೆ, ಆ ರಂಗೋಲಿ ಅಳಿಸಿಹೋಗಲು ಎಷ್ಟು ಸಮಯಬೇಕು? ಹಗಲು ಕಸ ಹಾಕದಿದ್ದರೇನಂತೆ, ನಟ್ಟನಡು ರಾತ್ರಿ ಇದ್ದೇ ಇದೆಯಲ್ಲ! ಆಗ ಯಾರು ನೋಡುತ್ತಾರೆ? ಬೆಂಗಳೂರಿನ ನಾಗರಿಕರು ತುಂಬಾ ಜಾಣರು. ರಂಗೋಲಿ ಕೆಳಗೆ ನುಗ್ಗುವುದರಲ್ಲಿ ನಿಸ್ಸೀಮರು.

ಸ್ವಚ್ಛತೆಯ ಪ್ರಜ್ಞೆ ಇಲ್ಲದ ನಾಗರಿಕರು
ಸ್ವಚ್ಛತೆಯ ಪ್ರಜ್ಞೆ ಇಲ್ಲದ ನಾಗರಿಕರು ತಮ್ಮ ಕೆಲಸ ಎಂದಿನಂತೆ ಮುಂದುವರಿಸಿದ್ದಾರೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಆದೇಶಕ್ಕೆ ನಯಾಪೈಸೆ ಕಿಮ್ಮತ್ತು ಇಲ್ಲದಂತೆ, ನೈಟಿ ಹಾಕಿಕೊಂಡು ಬರುವ ಮಹಿಳಾಮಣಿಗಳು, ಲುಂಗಿ ಸುತ್ತಿಕೊಂಡು ಬರುವ ಪುರುಷ ಪುಂಗವರು, ಬಕೇಟಿನಲ್ಲಿ ತುಂಬಿಕೊಂಡ ಹಸಿಒಣಸ್ಯಾನಿಟರಿ ಕಸವನ್ನು ರಸ್ತೆಯಲ್ಲಿ ಮತ್ತೆ ಬಿಸಾಡುತ್ತಿದ್ದಾರೆ. ಅಂದು ಹಾಕಿದ ರಂಗೋಲಿಯನ್ನು ಈ ನಾಗರಿಕರು ಎಂದೋ ಅಳಿಸಿಹಾಕಿದ್ದಾರೆ. ನೀವು ಯಾವುದೇ ರೀತಿಯಲ್ಲಿ ಜಾಗೃತಿ ಮೂಡಿಸಿ, ವಿನೂತನ ರೀತಿಯಲ್ಲಿ ಮನವರಿಕೆ ಮಾಡಲು ಪ್ರಯತ್ನಿಸಿ, ಎಷ್ಟೇ ಬೊಂಬಡಾ ಬಡಿದುಕೊಳ್ಳಿ, ನಮ್ಮ ನಾಗರಿಕರು ರಸ್ತೆಬದಿ ಕಸ ಹಾಕೋರೆ.

ಹೇಳಿಕೊಳ್ಳಲು ಜ್ಞಾನಭಾರತಿ ಬಿಡಿಎ ಬಡಾವಣೆ
ಬೆಂಗಳೂರಿನಾದ್ಯಂತ ಇಂಥ ಹಲವಾರು ಸ್ಥಳಗಳನ್ನು ನಾವು ನೋಡಬಹುದು. ಇದು ಕಸಮುಕ್ತ ಪ್ರದೇಶ ಅಂತ ಘೋಷಣೆ ಮಾಡಿದ್ದರೂ ಅಲ್ಲೇ ಕಸ ಬಿಸಾಕಿ ಹೋಗುವವರಿದ್ದಾರೆ. ಹಾಗೆಯೇ ಒಂದು ಸ್ಥಳವಿರುವುದು ಅಮ್ಮ ಆಶ್ರಮದ ಬಳಿ, ನಾಗದೇವನಹಳ್ಳಿ 2ನೇ ಹಂತದಲ್ಲಿ. ಹೇಳಿಕೊಳ್ಳಲು ಜ್ಞಾನಭಾರತಿ ಬಿಡಿಎ ಬಡಾವಣೆ. ವಾಸಿಸುವವರೆಲ್ಲ ಸುಂದರವಾದ ಮನೆಗಳನ್ನೂ ಕಟ್ಟಿಕೊಂಡಿದ್ದಾರೆ, ಮನೆಯನ್ನೂ ಅಷ್ಟೇ ಸ್ವಚ್ಛವಾಗಿ ಇಟ್ಟುಕೊಂಡಿರುತ್ತಾರೆ. ಆದರೆ, ರಸ್ತೆಬದಿ ಬಂದು ಕಸ ಬಿಸಾಕುವುದನ್ನು ಬಿಡುವುದಿಲ್ಲ. ಈ ಕ್ಷೇತ್ರವನ್ನು ಪ್ರತಿನಿಧಿಸುವ ಶಾಸಕರು ಎಸ್ ಟಿ ಸೋಮಶೇಖರ ಮತ್ತು ಕಾರ್ಪೊರೇಟರ್ ಶ್ರೀಮತಿ ಶಾರದ ಜಿ. ಮುನಿರಾಜು.

ಮಾಸ್ತಿ ಪ್ರತಿಷ್ಠಾನದ ಮುಂದೆ ಕಸದ ರಾಶಿ
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಜ್ಞಾನಪೀಠ ಪ್ರಶಸ್ತಿ ವಿಜೇತ ಸಾಹಿತಿ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಪ್ರತಿಷ್ಠಾನ ನಿರ್ಮಾಣವಾಗಬೇಕಾದ ಜಾಗದ ಮುಂಬದಿ ಕಸದಿಂದ ತುಂಬಿರುತ್ತದೆ. ಇಲ್ಲಿ ಹಸಿಕಸ, ಒಣಕಸ, ಸ್ಯಾನಿಟರಿ ವೇಸ್ಟ್ ಬೇರ್ಪಡಿಸಲು ಮೂರು ಡಬ್ಬಿಗಳನ್ನೂ ಇಡಲಾಗಿತ್ತಾದರೂ ಜನರು ಮತ್ತೆ ರಸ್ತೆಬದಿಯನ್ನು ಕಸದಿಂದ ಅಲಂಕರಿಸಲು ಆರಂಭಿಸಿದ್ದರಿಂದ ಮೂರು ಡಬ್ಬಿಗಳು ಕೆಲವೇ ದಿನಗಳಲ್ಲಿ ನಾಪತ್ತೆಯಾದವು. ಅಷ್ಟು ಮಾತ್ರವಲ್ಲ, ಎಣಿಸಿ ನೋಡಿದರೆ ಹದಿನೈದಿಪ್ಪತ್ತು ಬೀದಿ ನಾಯಿಗಳ ಆವಾಸ ಸ್ಥಾನವಾಗಿದೆ. ಚಳಿಗಾಲದಲ್ಲಿ ಆ ಬೀದಿನಾಯಿಗಳ ಸಂಖ್ಯೆ ದುಪ್ಪಟ್ಟು ಆದರೂ ಅಚ್ಚರಿಯಿಲ್ಲ.

ಕ್ರಮ ಕೈಗೊಳ್ಳಲು ಪೊಲೀಸರಿಗೆ ಆದೇಶ
ಕಡೆಗೂ ಕರ್ನಾಟಕ ಹೈಕೋರ್ಟ್ ನಾಗರಿಕರ ಈ ಅನಾಗರಿಕ ವರ್ತನೆಯನ್ನು ಗಂಭೀರವಾಗಿ ತೆಗೆದುಕೊಂಡಿದೆ. ರಸ್ತೆಬದಿ ಕಸ ಬಿಸಾಕುವ ಅನಾಗರಿಕರ ಮೇಲೆ ಕ್ರಮ ಕೈಗೊಳ್ಳುವಂತೆ ಈ ನೇರವಾಗಿ ಪೊಲೀಸರಿಗೇ ಆದೇಶ ನೀಡಿದ್ದಾರೆ. ಕಸ ಬಿಸಾಕುವ ಸ್ಥಳಗಳನ್ನು ಗುರುತಿಸಿ, ಜನರಿಗೆ ಮನವರಿಕೆ ಮಾಡಲು ಯತ್ನಿಸಿದರೂ ಜನ ಮತ್ತೆ ಅದೇ ತಪ್ಪು ಮಾಡುತ್ತಿದ್ದಾರೆ ಎಂದು ಬಿಬಿಎಂಪಿ ಕರ್ನಾಟಕ ಹೈಕೋರ್ಟ್ ಗೆ ತಿಳಿಸಿರುವ ಹಿನ್ನೆಲೆಯಲ್ಲಿ ಪೊಲೀಸರಿಗೇ ಕ್ರಮ ತೆಗೆದುಕೊಳ್ಳಲು ಕೋರ್ಟ್ ಆದೇಶಿಸಿದೆ. ಈಗಲಾದರೂ ಜನರು ರಸ್ತೆಬದಿ ಕಸ ಬಿಸಾಕುವುದನ್ನು ನಿಲ್ಲಿಸುತ್ತಾರಾ?

ಬಡಾವಣೆಯ ಯುವ ನಾಗರಿಕರು ಮುಂದೆ ಬರಬೇಕು
ಇದು ಕರ್ನಾಟಕ ಹೈಕೋರ್ಟ್ ಸಮಸ್ಯೆಯೂ ಅಲ್ಲ, ಪೊಲೀಸರ ಕರ್ತವ್ಯವೂ ಅಲ್ಲ, ಬಿಬಿಎಂಪಿ ಹೊಣೆಯೂ ಅಲ್ಲ ನೇರವಾಗಿ ನಾಗರಿಕರೇ ಇದಕ್ಕೆ ಕಾರಣಕರ್ತರು. ನಮ್ಮಲ್ಲಿ ನಮ್ಮ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕೆಂಬ ಪ್ರಜ್ಞೆ ಬರುವವರೆಗೆ, ಬಿಬಿಎಂಪಿ ದಂಡ ಹಾಕಿದರೂ ಅಷ್ಟೇ ಪೊಲೀಸರು ಕಂಬಿ ಎಣಿಸುವಂತೆ ಮಾಡಿದರೂ ಅಷ್ಟೆ. ಆಯಾ ಬಡಾವಣೆಯ ಯುವ ನಾಗರಿಕರೇ ತಂಡ ಕಟ್ಟಿಕೊಂಡು ತಮ್ಮ ಬಡಾವಣೆ ಸ್ವಚ್ಛವಾಗಿಟ್ಟುಕೊಳ್ಳುವ ಪ್ರತಿಜ್ಞೆ ಮಾಡಬೇಕು, ಜನರಲ್ಲಿ ಸತತವಾಗಿ ಜಾಗೃತಿ ಮೂಡಿಸಬೇಕು. ಇದು ಒಂದು ಕ್ರಾಂತಿಯಂತೆ ಆಗದಿದ್ದರೆ ಎಷ್ಟೇ ಸಂಕ್ರಾಂತಿಗಳು ಬಂದರೂ ನಾವು ಬದಲಾಗುವುದಿಲ್ಲ.












Click it and Unblock the Notifications