ಬೆಂಗಳೂರಿನಲ್ಲಿ ಗಣಿ ಭೂ ವಿಜ್ಞಾನ ಇಲಾಖೆ ಅಧಿಕಾರಿ ಹತ್ಯೆ
ಬೆಂಗಳೂರು, ನವೆಂಬರ್ 05; ಗಣಿ ಭೂ ವಿಜ್ಞಾನ ಇಲಾಖೆ ಅಧಿಕಾರಿಯನ್ನು ಹತ್ಯೆ ಮಾಡಿರುವ ಘಟನೆ ಬೆಂಗಳೂರು ನಗರದಲ್ಲಿ ನಡೆದಿದೆ. ಸುಬ್ರಮಣ್ಯ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಧಾವಿಸಿದ್ದಾರೆ.
ದೊಡ್ಡಕಲ್ಲಸಂದ್ರದ ಗೋಕುಲ್ ಅಪಾರ್ಟ್ಮೆಂಟ್ನಲ್ಲಿ ವಾಸವಾಗಿದ್ದ 37 ವರ್ಷದ ಪ್ರತಿಮಾ ಹತ್ಯೆ ಮಾಡಲಾಗಿದೆ. ಕೊಲೆಯಾಗಿರುವ ಪ್ರತಿಮಾ ಗಣಿ ಭೂ ವಿಜ್ಞಾನ ಇಲಾಖೆಯಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದರು ಎಂಬ ಮಾಹಿತಿ ಸಿಕ್ಕಿದೆ.

ಶನಿವಾರ ಸಂಜೆ 8 ಗಂಟೆ ಸುಮಾರಿಗೆ ಪ್ರತಿಮಾ ಕೆಲಸ ಮುಗಿಸಿ ಅಪಾರ್ಟ್ಮೆಂಟ್ಗೆ ವಾಪಸ್ ಆಗಿದ್ದರು. ಚಾಲಕ ಮನೆಗೆ ಬಿಟ್ಟು ಹೋದ ಬಳಿಕ ಯಾವುದೇ ಫೋನ್ ಕರೆಗೂ ಸಹ ಪ್ರತಿಮ ಉತ್ತರ ನೀಡಿರಲಿಲ್ಲ. ಫೋನ್ ರಿಸೀವ್ ಮಾಡದ ಕಾರಣ ಪ್ರತಿಮ ಸಹೋದರ ಭಾನುವಾರ ಬೆಳಗ್ಗೆ ಅಪಾರ್ಟ್ಮೆಂಟ್ಗೆ ಆಗಮಿಸಿದ್ದರು.
ಮನೆಯಿಂದಲೂ ಯಾವುದೇ ಪ್ರತಿಕ್ರಿಯೆ ಬಾರದೇ ಇದ್ದಾಗ ಬಾಗಿಲು ಮುರಿದು ನೋಡಿದಾಗ ಪ್ರತಿಮಾ ಹತ್ಯೆಯಾದ ವಿಚಾರ ಬೆಳಕಿಗೆ ಬಂದಿದೆ. ಬಳಿಕ ಸುಬ್ರಮಣ್ಯ ನಗರ ಪೊಲೀಸರಿಗೆ ಈ ಕುರಿತು ಮಾಹಿತಿ ನೀಡಲಾಗಿದೆ.
ತೀರ್ಥಹಳ್ಳಿ ಮೂಲದವರು; ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಮೂಲದ ಪ್ರತಿಮಾ ಮನೆಯಲ್ಲಿ ಒಬ್ಬರೇ ಇದ್ದರು. ದಿ.ಸಾಲೂರು ಸುಬ್ಬಯ್ಯ ಅವರ ಪುತ್ರಿಯಾದ ಪ್ರತಿಮಾ ಗಣಿ ಭೂ ವಿಜ್ಞಾನ ಇಲಾಖೆ ಹೆಚ್ಚುವರಿ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದರು. 2017ರಲ್ಲಿ ರಾಮನಗರದಲ್ಲಿಯೂ ಪ್ರತಿಮಾ ಕೆಲಸ ಮಾಡಿದ್ದರು. ಬಳಿಕ ಬೆಂಗಳೂರಿಗೆ ವರ್ಗಾವಣೆಗೊಂಡಿದ್ದರು.
ಪ್ರತಿಮಾ ಪರಿಚಯದವೇ ಈ ಕೊಲೆ ಮಾಡಿರಬಹುದು ಎಂದು ಪೊಲೀಸರು ಪ್ರಾಥಮಿಕವಾಗಿ ಶಂಕಿಸಿದ್ದಾರೆ. ಸ್ಥಳದಲ್ಲಿ ಪೊಲೀಸರು ಪರಿಶೀಲನೆ ನಡೆಸುತ್ತಿದ್ದು, ಅಪಾರ್ಟ್ಮೆಂಟ್ಗೆ ಬಂದು ಹೋಗಿರುವ ವ್ಯಕ್ತಿಗಳ ಕುರಿತು ಮಾಹಿತಿ ಸಂಗ್ರಹ ಮಾಡುತ್ತಿದ್ದಾರೆ.
ಮರಣೋತ್ತರ ಪರೀಕ್ಷೆಯ ಬಳಿಕ ಶವವನ್ನು ಕುಟುಂಬದವರಿಗೆ ಹಸ್ತಾಂತರ ಮಾಡಲಾಗುತ್ತದೆ. ಪ್ರತಿಮಾ ಹತ್ಯೆಗೆ ಕಾರಣವೇನು? ಎಂಬುದು ಇನ್ನೂ ತಿಳಿದುಬಂದಿಲ್ಲ, ಪೊಲೀಸರು ಈ ಕುರಿತು ತನಿಖೆ ಆರಂಭಿಸಿದ್ದಾರೆ.
ಬೆಂಗಳೂರು ನಗರ ಜಿಲ್ಲಾಧಿಕಾರಿ ಕೆ. ಎ. ದಯಾನಂದ್, ಡಿಸಿಪಿ ರಾಹುಲ್ ಸೇರಿದಂತೆ ಅನೇಕ ಹಿರಿಯ ಅಧಿಕಾರಿಗಳು ಪ್ರತಿಮಾ ನಿವಾಸಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕರ್ತವ್ಯದ ಬೆದರಿಕೆ ಕಾರಣದಿಂದ ಹತ್ಯೆಯಾಗಿದೆಯೇ? ಎಂದು ತನಿಖೆ ನಡೆಸಲಾಗುತ್ತಿದೆ.
ಮೊದಲು ಪ್ರತಿಮಾ ಅವರ ಉಸಿರುಗಟ್ಟಿಸಿ ಬಳಿಕ ಕತ್ತು ಕೊಯ್ದು ಅವರನ್ನು ಹತ್ಯೆ ಮಾಡಲಾಗಿದೆ. ರಕ್ತದ ಮುಡುವಿನಲ್ಲಿ ಅವರ ಮೃತದೇಹ ಪತ್ತೆಯಾಗಿದೆ. ಹತ್ಯೆ ಪ್ರಕರಣದ ಆರೋಪಿಗಳನ್ನು ಬಂಧಿಸಲು 3 ತಂಡಗಳನ್ನು ರಚನೆ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಕಳೆದ 10 ವರ್ಷಗಳಿಂದ ಪ್ರತಿಮಾ ಅವರು ಒಂದೇ ಮನೆಯಲ್ಲಿ ವಾಸವಾಗಿದ್ದರು.
ಅಕ್ಟೋಬರ್ 10ರಂದು ಶಿವಮೊಗ್ಗದಲ್ಲಿ ನಡೆದ ಅತ್ತೆಯ ಮನೆಯ ಗೃಹ ಪ್ರವೇಶ ಕಾರ್ಯಕ್ರಮಕ್ಕೆ ಪ್ರತಿಮಾ ತೆರಳಿದ್ದರು. ಎಲ್ಲರ ಜೊತೆ ನಗು ನಗುತ್ತಾ ಮಾತನಾಡಿದ್ದರು. ಕೆಲಸದ ವಿಚಾರದಲ್ಲಿ ಅವರಿಗೆ ಯಾವುದೇ ಬೆದರಿಕೆ ಇರಲಿಲ್ಲ ಎಂದು ಸಂಬಂಧಿಕರು ತಿಳಿಸಿದ್ದಾರೆ.
ಪ್ರತಿಮಾ ಹತ್ಯೆ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಹ ಪ್ರತಿಕ್ರಿಯೆ ನೀಡಿದ್ದಾರೆ. ಯಾವ ಕಾರಣಕ್ಕೆ ಹತ್ಯೆ ನಡೆದಿದೆ ಎಂದು ತನಿಖೆ ಮಾಡಲಾಗುತ್ತದೆ ಎಂದು ಭರವಸೆ ನೀಡಿದ್ದಾರೆ.












Click it and Unblock the Notifications