ಎಎಚ್ಎಲ್ ನಲ್ಲಿ ವಿಮಾನಯಾನಕ್ಕೆ ಸಚಿವ ಮನೋಹರ್ ಒಲವು
ನವದೆಹಲಿ, ಜ.16: ಎಚ್ಎಎಲ್ ವಿಮಾನ ನಿಲ್ದಾಣವನ್ನು ಸಾರ್ವಜನಿಕ ಉದ್ದೇಶಕ್ಕೆ ಬಳಸುವ ಅಗತ್ಯದ ಬಗ್ಗೆ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಒಲವು ತೋರಿದ್ದಾರೆ. ಈ ಬಗ್ಗೆ ನಾಗರಿಕ ವಿಮಾನಯಾನ ಸಚಿವ ಅಶೋಕ್ ಗಣಪತಿ ರಾಜು ಅವರಿಗೆ ಪತ್ರ ಬರೆದಿದ್ದಾರೆ.
ಈ ಹಿಂದೆ ಎಚ್ಎಎಲ್ ವಿಮಾನ ನಿಲ್ದಾಣವನ್ನು ಸಾರ್ವಜನಿಕ ಉದ್ದೇಶಕ್ಕೆ ಬಳಸುವ ಅಗತ್ಯ ಈಗ ಹೆಚ್ಚಾಗಿದೆ ಈ ಬಗ್ಗೆ ಗಮನ ಹರಿಸಿ ಎಂದು ಎಚ್ಎಎಲ್ ನಿರ್ದೇಶಕ ಆರ್.ಕೆ ತ್ಯಾಗಿ ಮಾಡಿದ ಮನವಿಗೆ ಸಿಎಂ ಸಿದ್ದರಾಮಯ್ಯ ಒಪ್ಪಿಗೆ ಸೂಚಿಸಿ ತಲೆಯಾಡಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ಎಚ್ಎಎಲ್ ವಿಮಾನ ನಿಲ್ದಾಣ 3,307 ಮೀಟರ್ ರನ್ ವೇ ಹೊಂದಿದ್ದು, ದೇಶದಲ್ಲೇ ಅತಿ ವಿಸ್ತೃತ ರನ್ ವೇಗಳಲ್ಲಿ ಒಂದೆನಿಸಿದೆ. ಬೋಯಿಂಗ್ 747 ನಂಥ ದೊಡ್ಡ ವಿಮಾನಗಳನ್ನು ನಿಭಾಯಿಸಬಲ್ಲದು. 2008ರಲ್ಲಿ ಎಚ್ಎಎಲ್ ನಲ್ಲಿ ನಾಗರಿಕ ವಿಮಾನ ಯಾನ ನಿಲ್ಲಿಸಲಾಗಿದೆ. ಇದರಿಂದಾಗಿ ಸುಮಾರು 1,500 ಕೋಟಿ ರು ಎಚ್ಎಎಲ್ ಗೆ ಹಾಗೂ ಎಎಐ ಗೆ 700 ಕೋಟಿ ರು ನಷ್ಟವುಂಟಾಗಿದೆ.
ಕೆಂಪೇಗೌಡ ಅಂತಾರಾಷ್ರೀಯ ವಿಮಾನ ನಿಲ್ದಾಣದಲ್ಲಿ ಹೆಚ್ಚುತ್ತಿರುವ ವಿಮಾನ ಹಾರಾಟ ಹಾಗೂ ಜನಸಂದಣಿ ತಗ್ಗಿಸಲು ಮತ್ತೊಂದು ವಿಮಾನ ನಿಲ್ದಾಣದ ಅಗತ್ಯವಿದೆ. [ಎಚ್ಎಎಲ್ ವಿಮಾನ ನಿಲ್ದಾಣ ಅಗತ್ಯವೇನು]
ಪುನರ್ ಅರಂಭ ಸಾಧ್ಯವೇ?:ಎಚ್ಎಎಲ್ ವಿಮಾನ ನಿಲ್ದಾಣ ಪುನರ್ ಅರಂಭಕ್ಕಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಮತ್ತು ಭಾರತದ ವಿಮಾನಯಾನ ಪ್ರಾಧಿಕಾರ(ಎಎಐ) ಎಲ್ಲವೂ ಒಗ್ಗೂಡಿ ಬಿಐಎಎಲ್ ಸಂಸ್ಥೆ(ಕೆಐಎಎಲ್ ನಿರ್ವಹಿಸುತ್ತಿರುವ ಖಾಸಗಿ ಸಂಸ್ಥೆ) ಜೊತೆ ಮಾತುಕತೆ ಮಾಡಿಕೊಳ್ಳುವ ಮೂಲಕ ಆಗಿರುವ ಒಪ್ಪಂದಕ್ಕೆ ತಿದ್ದುಪಡಿ ತರಬಹುದು ಎಂದು ಮನೋಹರ್ ಪರಿಕ್ಕಾರ್ ಅಭಿಪ್ರಾಯಪಟ್ಟಿದ್ದಾರೆ.
ಲಂಡನ್ನಿನಲ್ಲಿ ನಾಲ್ಕು ವಿಮಾನ ನಿಲ್ದಾಣವಿದ್ದರೆ, ನ್ಯೂ ಯಾರ್ಕ್ ನಲ್ಲಿ ಆರು ವಿಮಾನ ನಿಲ್ದಾಣವಿದೆ. ಹೆಚ್ಚು ವಿಮಾನ ನಿಲ್ದಾಣದಿಂದ ಆರ್ಥಿಕ ಬೆಳವಣಿಗೆ ಸಾಧ್ಯ.
ಮಾರ್ಚ್ 23,2008ರಂದು ವಾಣಿಜ್ಯ ಉದ್ದೇಶಿತ ವಿಮಾನಯಾನವನ್ನು ಎಚ್ಎಎಲ್ ವಿಮಾನ ನಿಲ್ದಾಣದಲ್ಲಿ ನಿಲ್ಲಿಸಲಾಯಿತು. ಸರ್ಕಾರ ಹಾಗೂ ಈ ಹಿಂದಿನ ಬಿಐಎಎಲ್(ಈಗಿನ ಕೆಐಎ) ನಡುವೆ ಆದ ಒಪ್ಪಂದದ ಪ್ರಕಾರ ದೇವನಹಳ್ಳಿ ವಿಮಾನ ನಿಲ್ದಾಣದಿಂದ 150 ಕಿ.ಮೀ ವ್ಯಾಪ್ತಿ ಪ್ರದೇಶದಲ್ಲಿ ಮತ್ತೊಂದು ವಾಣಿಜ್ಯ ಉದ್ದೇಶಿತ ವಿಮಾನ ನಿಲ್ದಾಣ ತಲೆ ಎತ್ತುವಂತಿಲ್ಲ. ಈ ಒಪ್ಪಂದದ ಅವಧಿ 2029ರ ತನಕ ಇದೆ.
ಪರಿಸ್ಥಿತಿ ಹೀಗಿದ್ದರೂ ಎಚ್ಎಎಲ್ ನಲ್ಲಿ ನಾಗರಿಕ ವಿಮಾನಯಾನ ಸಾಧ್ಯವೇ? ದೇಶಿ ವಿಮಾನಯಾನಕ್ಕೆ ಮಾತ್ರ ಒಪ್ಪಿಗೆ ಸೂಚಿಸಬಹುದೇ? ಎಚ್ಎಎಲ್ ವಿಮಾನ ನಿಲ್ದಾಣ ಸುರಕ್ಷಿತವಾಗಿದೆಯೇ? ಎಂಬ ಪ್ರಶ್ನೆಗಳು ಎದ್ದಿವೆ.