ಪೇಜಾವರ ಶ್ರೀಗಳ ನಿಧನ: ಸ್ಪೀಕರ್ ಕಾಗೇರಿಯಿಂದ ಶೋಕ ಪತ್ರ
ಬೆಂಗಳೂರು, ಡಿಸೆಂಬರ್ 29: ಉಡುಪಿಯ ಪೇಜಾವರ ಮಠದ ವಿಶ್ವೇಶತೀರ್ಥ ಯತಿಗಳ ನಿಧನಕ್ಕೆ ಕರ್ನಾಟಕ ವಿಧಾನಸಭಾ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಪತ್ರದ ಮೂಲಕ ಸಂತಾಪ ಸೂಚಿಸಿದ್ದಾರೆ.
"ಪೇಜಾವರ ಮಠದ ಶ್ರೀಗಳಾದ ಪರಮ ಪೂಜ್ಯನೀಯ ಶ್ರೀ ಶ್ರೀ ಶ್ರೀ ವಿಶ್ವೇಶತೀರ್ಥ ಸ್ವಾಮಿಜಿಯವರು ದೈವಾದೀನರಾಗಿರುವುದು ತುಂಬಾ ನೋವಿನ ಸಂಗತಿಯಾಗಿದೆ" ಎಂದು ತಿಳಿಸಿದ್ದಾರೆ.
ಉಡುಪಿಯ ಅಷ್ಟ ಮಠಗಳಲ್ಲಿ ಒಂದಾಗಿರುವ ಪೇಜಾವರ ಮಠದ ಸ್ವಾಮೀಜಿಯಾಗಿದ್ದ ವಿಶ್ವೇಶತೀರ್ಥ ಯತಿಗಳು ಶ್ರೀಕಷ್ಣನ ಪರಮ ಭಕ್ತರಾಗಿದ್ದರು.

ಅಪಾರ ಜ್ಞಾನಿಗಳು, ವಿದ್ವಾಂಸರೂ ಅಗಿದ್ದ ಶ್ರೀಗಳು ಉಡುಪಿಯಲ್ಲಿ ಸಾಮಾಜಿಕ, ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಮಾಜಮುಖಿ ಕಾರ್ಯದಲ್ಲಿ ತೊಡಗಿಕೊಂಡಿದ್ದರು.
ಶ್ರೀಗಳು ಸನಾತನ ಹಿಂದೂ ಧರ್ಮದ ಪ್ರಬಲ ಪ್ರತಿಪಾದಕರಾಗಿದ್ದರು. ಅಯೋಧ್ಯೆಯ ಶ್ರೀರಾಮ ಜನ್ಮಭೂಮಿಯಲ್ಲಿಯೇ ಭವ್ಯವಾದ ಶ್ರೀರಾಮ ಮಂದಿರ ನಿರ್ಮಾಣವಾಗಬೇಕೆಂದು ಗಟ್ಟಿ ಧ್ವನಿಯಲ್ಲಿ ಆಗ್ರಹಿಸಿದ್ದರು.
ಅಸ್ಪೃಶ್ಯತೆಯೆಂಬ ಹೀನ ಪದ್ದತಿಯ ವಿರುದ್ದ ಅನೇಕ ಜನಜಾಗೃತಿ ಕಾರ್ಯಕ್ರಮಗಳನ್ನು ಮಾಡಿದ್ದರು. ತಮ್ಮ ಮೂರನೆಯ ಪರ್ಯಾಯದ ಅವಧಿಯಲ್ಲಿ, ರಂಜಾನ್ ಆಚರಣೆಯನ್ನು ಉಡುಪಿಯ ರಾಜಾಂಗಣದಲ್ಲಿ ನಡೆಸಿ ಸರ್ವಧರ್ಮ ಸಮಭಾವಕ್ಕೆ ಮೇಲ್ಪಂಕ್ತಿ ಹಾಕಿ ಕೊಟ್ಟಿದ್ದರು.
ತಮ್ಮ 88 ನೇ ವಯಸ್ಸಿನಲ್ಲೂ ತುಂಬಾ ಲವಲವಿಕೆಯಿಂದ ದೇಶ ಸುತ್ತಿ ಧಾರ್ಮಿಕ, ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಶ್ರೀಗಳ ದಿವ್ಯಾತ್ಮಕ್ಕೆ ಭಗವಂತನು ಚಿರ ಶಾಂತಿಯನ್ನು ದಯಪಾಲಿಸಲಿ ಎಂದು ಸ್ಪೀಕರ್ ಕಾಗೇರಿಯವರು ಸಂತಾಪ ಸೂಚಿಸಿದ್ದಾರೆ.
ಪೇಜಾವರ ಮಠದ ಎಲ್ಲಾ ಆಡಳಿತ ಮಂಡಳಿಯವರಿಗೂ, ಅಸಂಖ್ಯಾತ ಭಕ್ತಾಧಿಳಿಗೂ ಶ್ರೀಗಲ ಅಗಲುವಿಕೆಯ ನೋವು ಭರಿಸುವ ಶಕ್ತಿಯನ್ನು ಶ್ರೀಕೃಷ್ಣ ದೇವರು ದಯಪಾಲಿಸಲಿ ಎಂದು ಪ್ರಾರ್ಥಿಸುತ್ತೇನೆ, ಹರಿ ಓಂ. ಎಂದು ತಿಳಿಸಿದ್ದಾರೆ.












Click it and Unblock the Notifications