ವಂಚನೆ ಆರೋಪ ಮಾಡಿದವರೇ ವಂಚಕರು: ಧವನಂ
ಬೆಂಗಳೂರು, ಜು.1: ಗ್ರಾಹಕರಿಂದ ಚಿನ್ನ ಖರೀದಿಸಿ ಸೂಕ್ತ ಸಮಯಕ್ಕೆ ಹಣ ನೀಡಲಾಗದೆ ಧವನಂ ಜ್ಯುವೆಲ್ಲರ್ಸ್ ಕೈ ಚೆಲ್ಲಿದೆ ಎಂದು ಸಾರ್ವಜನಿಕರು ಮಾಡಿದ ಆರೋಪವನ್ನು ಧವನಂ ಜ್ಯುವೆಲ್ಲರ್ಸ್ ತಳ್ಳಿಹಾಕಿದ್ದು, ಆರೋಪ ಮಾಡಿರುವ ಗ್ರಾಹಕರನ್ನೆ ವಂಚಕರು ಎಂದು ದೂರು ನೀಡಿದ ಪ್ರಸಂಗ ನಡೆದಿದೆ.
ಕೆಲವು ವ್ಯಕ್ತಿಗಳು ಧವನಂ ಜ್ಯುವೆಲ್ಲರ್ಸ್ ಸಂಸ್ಥೆ ಹೆಸರು ಕೆಡಿಸಲು ನಕಲಿ ರಶೀದಿಗಳನ್ನು ಮುಂದಿಟ್ಟುಕೊಂಡು ಧವನಂ ಜ್ಯುವೆಲ್ಲರ್ಸ್ ಅಂಗಡಿಯ ಮೇಲೆ ಹಣ ವಂಚನೆಯ ಆರೋಪ ಮಾಡುತ್ತಿದ್ದಾರೆ. ಇಂಥವರ ಮೇಲೆ ಸೂಕ್ತ ಕ್ರಮ ಜರುಗಿಸಬೇಕು ಎಂದು ಧವನಂ ಒಡೆಯ ಅರವಿಂದ್ ಸ್ಪಷ್ಟನೆ ನೀಡಿದ್ದಾರೆ.
ನಗರದ ಪ್ರೆಸ್ಕ್ಲಬ್ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅರವಿಂದ್, ಜೂ.25ರಂದು ಹನ್ನೊಂದು ಮಂದಿಯ ಗುಂಪು ದಿಢೀರನೆ ಧವನಂ ಜ್ಯುವೆಲ್ಲರ್ಸ್ ಅಂಗಡಿಗೆ ಬಂದು ನಕಲಿ ರಶೀದಿಯನ್ನು ತೋರಿಸಿ, ಹಣ ಕೊಡಿ ಎಂದು ದುಂಬಾಲು ಬಿದ್ದರು. ಈ ವ್ಯಕ್ತಿಗಳೊಂದಿಗೆ ಧವನಂ ಜ್ಯುವೆಲ್ಲರ್ಸ್ ಯಾವುದೇ ವ್ಯವಹಾರ ನಡೆಸಿಲ್ಲ ಎಂಬುದು ಕಂಪ್ಯೂಟರ್ ದಾಖಲೆಗಳಿಂದ ತಿಳಿದು ಬಂದಿದೆ.

ರಶೀದಿ ಎಲ್ಲವೂ ನಕಲಿ :ರಾಜ್ಯದಲ್ಲಿ ನಂಬಿಕೆ ಹಾಗೂ ಪಾರದರ್ಶಕತೆಗೆ ಹೆಸರಾಗಿರುವ ಧವನಂ ಜ್ಯುವೆಲ್ಲರ್ ಒಂದು ರೂ. ವ್ಯವಹಾರ ಮಾಡಿದರು ಅಂಗಡಿಯ ಚಿಹ್ನೆ ಒಳಗೊಂಡಂತೆ ಸಂಪೂರ್ಣ ವಿಳಾಸವುಳ್ಳ ರಶೀದಿ ನೀಡುತ್ತದೆ. ಆದರೆ, ಅಂಗಡಿಯ ಮೇಲೆ ಆರೋಪ ಮಾಡಿರುವ ವ್ಯಕ್ತಿಗಳು ನಕಲಿ ರಶೀದಿಯಲ್ಲಿ ಸುಮಾರು 65 ಲಕ್ಷ ರೂ. ವಂಚನೆ ಆರೋಪ ಮಾಡಿದ್ದಾರೆ. ಈ ರಶೀದಿಯಲ್ಲಿ ಅಂಗಡಿಯ ಚಿಹ್ನೆಯಾಗಲಿ ಹಾಗೂ ವಿಳಾಸವಾಗಲಿ ಇಲ್ಲ. ಹಾಗಾಗಿ ಈ ವ್ಯಕ್ತಿಗಳ ವಿರುದ್ಧ ಪೊಲೀಸರಿಗೆ ದೂರು ಕೊಡಲಾಗಿದೆ ಎಂದು ಅವರು ತಿಳಿಸಿದರು.
ಧವನಂ ಜ್ಯುವೆಲ್ಲರ್ಸ್ ಮೇಲೆ ಇಲ್ಲದ ಸಲ್ಲ ಆರೋಪ ಬಂದಿರುವುದರಿಂದ ಅಂಗಡಿಯ ಪಾರದರ್ಶಕತೆ ಹಾಗೂ ವಿಶ್ವಾಸಕ್ಕೆ ಕುಂದುಂಟಾಗಿದೆ. ಸುಮಾರು ನೂರು ವರ್ಷಕ್ಕೂ ಹೆಚ್ಚು ಇತಿಹಾಸವಿರುವ ಧವನಂ ಜ್ಯುವೆಲ್ಲರ್ಸ್ ನ ಹೆಸರನ್ನು ಕೆಡಿಸುವುದಕ್ಕಾಗಿಯೆ ಕೆಲವರು ಷಡ್ಯಂತ್ರ ನಡೆಸುತ್ತಿದ್ದಾರೆ. ಈ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಮಾಡಲಾಗಿದೆ ಎಂದು ಅರವಿಂದ್ ತಿಳಿಸಿದರು.
ಧವನಂ ಜ್ಯುವೆಲ್ಲರ್ಸ್: 1905ರಲ್ಲಿ ಧವನಂ ಜ್ಯುವೆಲ್ಲರ್ಸ್ ಸಂಸ್ಥೆ ಕನಕಪುರ ಮೂಲದ ಸ್ವಾತಂತ್ರ್ಯ ಹೋರಾಟಗಾರದ ಕುಟುಂಬದ ಡಿ.ಎಸ್ ವೆಂಕಟನಾರಾಯಣ ಶೆಟ್ಟಿ ಅವರಿಂದ ಸ್ಥಾಪನೆಗೊಂಡಿತು. 1987ರಲ್ಲಿ ನಗರದ ಅವೆನ್ಯೂ ರಸ್ತೆಯಲ್ಲಿ ತನ್ನ ಪ್ರಮುಖ ಕೇಂದ್ರವನ್ನು ಸ್ಥಾಪಿಸಿದ್ದು ಈಗ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಹಾಗೂ ಯುಎಸ್ಎ, ಯು.ಎ.ಇ ಹಾಗೂ ಕುವೈಟ್ ಹಾಗೂ ಸಿಂಗಪುರದಲ್ಲಿ ತನ್ನ ಮಳಿಗೆಯನ್ನು ಹೊಂದಿದೆ.
ಗ್ರಾಹಕರನ್ನು ವಂಚಿಸಲಾಗಿದೆ ಎಂದು ಆರೋಪಿಸಿ ಧವನಂ ಜ್ಯುವೆಲರ್ಸ್ ವಿರುದ್ಧ ಕಮರ್ಷಿಯಲ್ ಸ್ಟ್ರೀಟ್ ಠಾಣೆಯಲ್ಲಿ ದೂರು ದಾಖಲಾಗಿದೆ. ಧವನಂ ಜ್ಯುವೆಲರ್ಸ್ ವ್ಯವಸ್ಥಾಪಕ ನಿರ್ದೇಶಕ ಅರವಿಂದ್ ವಿರುದ್ಧ 15 ಮಂದಿ ದೂರು ದಾಖಲಿಸಿದ್ದು, ರು. 65 ಲಕ್ಷ ವಂಚಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿತ್ತು[ವಿವರ ಇಲ್ಲಿ ಓದಿ]












Click it and Unblock the Notifications