Actor Darshan Bail: ಕೋಟ್ಯಂತರ ಮೌಲ್ಯದ ನಿವೇಶನ, ಮನೆ; ಜಾಮೀನು ಅರ್ಜಿಯಲ್ಲಿದೆ ದರ್ಶನ್ ಆಸ್ತಿ ವಿವರ
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟ ದರ್ಶನ್ ಸದ್ಯ ಜಾಮೀನಿನ ಮೇಲೆ ಹೊರಬರುವ ನಿರೀಕ್ಷೆಯಲ್ಲಿದ್ದು, 57ನೇ ಸೆಷನ್ಸ್ ಕೋರ್ಟ್ನಲ್ಲಿ ಜಾಮೀನು ಅರ್ಜಿ ಸಲ್ಲಿಸಿದ್ದಾರೆ. ಒಂದು ಸಿನಿಮಾಗೆ ಕೋಟಿಗಟ್ಟಲೆ ಸಂಭಾವನೆ ಪಡೆಯುವ ದರ್ಶನ್ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿ ಹೊಂದಿದ್ದು, ಅದರ ವಿವರಗಳನ್ನು ಕೂಡ ಜಾಮೀನು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.
ಬೆಂಗಳೂರಿನಲ್ಲಿ ನಟ ದರ್ಶನ್ ಹಲವು ಕಡೆ ಆಸ್ತಿ ಹೊಂದಿದ್ದಾರೆ ಎನ್ನುವ ಮಾಹಿತಿ ಸಿಕ್ಕಿದೆ. ಬೆಳ್ಳಂದೂರಿನಲ್ಲಿ ಕೋಟ್ಯಂತರ ರೂಪಾಯಿ ಬೆಲೆ ಬಾಳುವ ನಿವೇಶನ ಹೊಂದಿದ್ದಾರೆ. ದೇವನಹಳ್ಳಿಯಲ್ಲಿರುವ ಪ್ರೆಸ್ಟೀಜ್ ಅಪಾರ್ಟ್ಮೆಂಟ್ನಲ್ಲಿ ಫ್ಲಾಟ್ ಕೂಡ ಇದೆ. ರಾಜ ರಾಜೇಶ್ವರಿ ನಗರದಲ್ಲಿರುವರುವ ಅವರ ಮನೆ ಬಗ್ಗೆ ಅಭಿಮಾನಿಗಳಿಗೆ ತಿಳಿದೇ ಇದೆ, ಇದನ್ನು ಹೊರತುಪಡಿಸಿ ಮಲ್ಲತ್ಹಳ್ಳಿಯಲ್ಲಿ ಕೂಡ ಒಂದು ಮನೆ ಇರುವುದಾಗಿ ಮಾಹಿತಿ ನೀಡಿದ್ದಾರೆ. ಇದು ಮಾತ್ರವಲ್ಲದೆ ಮೈಸೂರು ಬಳಿ ಇರುವ ಫಾರಂ ಹೌಸ್, ಸೇರಿ ಹಲವು ಆಸ್ತಿಗಳು ದರ್ಶನ್ ಹೆಸರಿನಲ್ಲಿದ್ದು ಎಲ್ಲದಕ್ಕೂ ತೆರಿಗೆ ಕಟ್ಟುತ್ತಿರುವುದಾಗಿ ವಕೀಲರು ಉಲ್ಲೇಖಿಸಿದ್ದಾರೆ.

ಕಾಟೇರ ಸಿನಿಮಾ ಸೂಪರ್ ಡೂಪರ್ ಹಿಟ್ ಆದ ಬಳಿಕ ಅವರ ಸಂಭಾವನೆ ಕೂಡ ಗಗನಕ್ಕೇರಿತ್ತು. ಡೆವಿಲ್ ಸಿನಿಮಾಗಾಗಿ ಅವರು ದಾಖಲೆಯ ಸಂಭಾವನೆ ಪಡೆದಿದ್ದರು ಎಂದು ವರದಿಯಾಗಿತ್ತು. ಡೆವಿಲ್ ಮಾತ್ರವಲ್ಲದೆ ಹಲವು ಸಿನಿಮಾ ನಿರ್ಮಾಪಕರು ಈಗಾಗಲೇ ದರ್ಶನ್ ಅವರ ಡೇಟ್ಸ್ ಪಡೆದು ಕೋಟ್ಯಂತರ ಅಡ್ವಾನ್ಸ್ ಕೂಡ ಕೊಟ್ಟಿದ್ದರು. ಆದರೆ ದರ್ಶನ್ ಬಂಧನವಾದ ಬಳಿಕ ನಿರ್ಮಾಪಕರು ಆತಂಕಗೊಂಡಿದ್ದಾರೆ.
ಡೆವಿಲ್ ಸಿನಿಮಾ ನಿರ್ದೇಶ್ ಪ್ರಕಾಶ್ ಗುರುವಾರ ನಟ ದರ್ಶನ್ರನ್ನು ಬಳ್ಳಾರಿ ಜೈಲಿನಲ್ಲಿ ಭೇಟಿ ಮಾಡಿದ್ದಾರೆ. ಜಾಮೀನು ಸಿಕ್ಕ ಬಳಿಕ ಸಿನಿಮಾ ಕೆಲಸ ಆರಂಭಿಸುವ ಬಗ್ಗೆ ಚರ್ಚೆ ನಡೆಸಿರುವ ಸಾಧ್ಯತೆ ಇದೆ ಎನ್ನಲಾಗಿದೆ.
ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ
ಸೋಮವಾರ (ಸೆಪ್ಟೆಂಬರ್ 23ರಂದು) ಜಾಮೀನು ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಾಲಯ ಸೆಪ್ಟೆಂಬರ್ 27 (ಶುಕ್ರವಾರ) ಕ್ಕೆ ಮುಂದೂಡಿತ್ತು. ಇಂದು ಮತ್ತೆ ವಿಚಾರಣೆ ನಡೆಸಿದ ಕೋರ್ಟ್ ವಿಚಾರಣೆಯನ್ನು ಸೆಪ್ಟೆಂಬರ್ 30ಕ್ಕೆ ಮುಂದೂಡಿದೆ.
ಸೆಪ್ಟೆಂಬರ್ 23ರಂದು ಎಸ್ಪಿಪಿ ಪ್ರಸನ್ನ ವಾದ ಮಂಡನೆಗೆ ಅವಕಾಶ ಕೇಳಿದ್ದರಿಂದ ವಿಚಾರಣೆ ಮುಂದೂಡಲಾಗಿತ್ತು, ಈ ಬಾರಿ ದರ್ಶನ್ ಪರ ವಕೀಲರು ಕಾಲಾವಕಾಶ ಕೇಳಿದ್ದರಿಂದ ಜಾಮೀನು ಅರ್ಜಿ ವಿಚಾರಣೆಯನ್ನು ಮುಂದೂಡಲಾಗಿದೆ. ದರ್ಶನ್ ಪರ ವಾದ ಮಾಡುತ್ತಿರುವ ಹಿರಿಯ ವಕೀಲ ಸಿ.ವಿ ನಾಗೇಶ್ ಬರದೇ ಇರುವ ಕಾರಣ ಅವರ ಸಹಾಯಕ ವಕೀಲರು ಕಾಲಾವಕಾಶ ಕೇಳಿದ್ದು, ವಿಚಾರಣೆ ಸೆಪ್ಟೆಂಬರ್ 30ಕ್ಕೆ ಮುಂದೂಡಿಕೆಯಾಗಿದೆ.
ಜಾಮೀನು ಅರ್ಜಿ ಮುಂದೂಡಿಕೆಯಾಗುವ ಮೂಲಕ ದರ್ಶನ್ ಜಾಮೀನಿಗಾಗಿ ಇನ್ನಷ್ಟು ದಿನ ಕಾಯಲೇಬೇಕಾಗಿದೆ. ಸದ್ಯ ಬಳ್ಳಾರಿ ಜೈಲಿನಲ್ಲಿರುವ ಅವರು, ಜಾಮೀನು ಸಿಗುತ್ತದೆ ಎನ್ನುವ ವಿಶ್ವಾಸದಲ್ಲಿದ್ದಾರೆ. ಕಳೆದ ಕೆಲವು ದಿನಗಳಿಂತ ಉತ್ಸಾಹ ಕೂಡ ಇಮ್ಮಡಿಯಾಗಿದ್ದು, ಭೇಟಿಗೆ ಬಂದವರ ಜೊತೆ ನಗು ನಗುತ್ತಲೇ ಮಾತನಾಡುತ್ತಿದ್ದಾರೆ.












Click it and Unblock the Notifications