Darshan Thoogudeepa: ದರ್ಶನ್ಗೆ ಕೊನೆಗೂ ಸಿಕ್ತು ಜಾಮೀನು; ಹೈಕೋರ್ಟ್ನಿಂದ ಮಹತ್ವದ ಆದೇಶ
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ನಟ ದರ್ಶನ್ಗೆ ಕೊನೆಗೂ ಬಿಡುಗಡೆ ಭಾಗ್ಯ ಸಿಕ್ಕಿದೆ. ದರ್ಶನ್ಗೆ ಆರು ವಾರಗಳ ಷರತ್ತುಬದ್ಧ ಮಧ್ಯಂತರ ಜಾಮೀನು ನೀಡಿ ಹೈಕೋರ್ಟ್ ಆದೇಶ ನೀಡಿದೆ. ದರ್ಶನ್ ಚಿಕಿತ್ಸೆ ಪಡೆಯುವ ವಿವರವನ್ನು ಒಂದು ವಾರದಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ಕೋರ್ಟ್ ಸೂಚನೆ ಕೊಟ್ಟಿದೆ.
ದರ್ಶನ್ಗೆ ಜಾಮೀನು ಸಿಕ್ಕಿರುವುದು ಅಭಿಮಾನಿಗಳ ಖುಷಿಯನ್ನು ಹೆಚ್ಚಿಸಿದೆ. ದೀಪಾವಳಿ ಹಬ್ಬಕ್ಕೆ ಮುನ್ನವೇ ದರ್ಶನ್ಗೆ ಜಾಮೀನು ಸಿಕ್ಕಿದ್ದರೂ, ಕೋರ್ಟ್ ಆದೇಶ ಸಿಕ್ಕ ಬಳಿಕ ಜೈಲಿನಿಂದ ಬಿಡುಗಡೆಯಾಗುವ ಸಾಧ್ಯತೆ ಇದೆ.

ಷರತ್ತು ಬದ್ಧ ಜಾಮೀನು
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎರಡನೇ ಆರೋಪಿಯಾಗಿರುವ ನಟ ದರ್ಶನ್ಗೆ ಬೆನ್ನುಹುರಿ ಸಮಸ್ಯೆ ತೀವ್ರವಾಗಿದ್ದು, ಅವರು ಇಷ್ಟಪಡುವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಕರ್ನಾಟಕ ಹೈಕೋರ್ಟ್ ಆರು ವಾರಗಳ ಷರತ್ತುಬದ್ಧ ವೈದ್ಯಕೀಯ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿದೆ. ನಾಲ್ಕೂವರೆ ತಿಂಗಳ ಬಳಿಕ ದರ್ಶನ್ ತಾತ್ಕಾಲಿಕವಾಗಿ ಜೈಲಿನಿಂದ ಹೊರ ಬರಲು ಸಜ್ಜಾಗಿದ್ದಾರೆ.
ನ್ಯಾಯಮೂರ್ತಿ ಎಸ್ ವಿಶ್ವಜಿತ್ ಶೆಟ್ಟಿ ಅವರ ಏಕಸದಸ್ಯ ಪೀಠ ದರ್ಶನ್ ಪರ ವಕೀಲರ ಮನವಿಯನ್ನು ಪುರಸ್ಕರಿಸಿದೆ. ಮೂರು ತಿಂಗಳು ಮಧ್ಯಂತರ ಜಾಮೀನು ಕೊಡಬೇಕು ಎಂದು ದರ್ಶನ್ ಪರ ವಕೀಲರು ಮನವಿ ಮಾಡಿದ್ದರು, ಆದರೆ ಆರು ವಾರಗಳ ಕಾಲ ವೈದ್ಯಕೀಯ ಮಧ್ಯಂತರ ಜಾಮೀನು ನೀಡಲು ಕೋರ್ಟ್ ಒಪ್ಪಿದೆ.
ಕೋರ್ಟ್ ಹೇಳಿದ್ದೇನು?
ದರ್ಶನ್ ಅವರ ಮಧ್ಯಂತರ ಜಾಮೀನನ್ನು ಆರು ವಾರಗಳಿಗೆ ಸೀಮಿತಗೊಳಿಸಲಾಗಿದೆ. ದರ್ಶನ್ ತಮ್ಮ ಪಾಸ್ಪೋರ್ಟ್ ಅನ್ನು ವಿಚಾರಣಾಧೀನ ನ್ಯಾಯಾಲಯದ ವಶಕ್ಕೆ ಸಲ್ಲಿಸಬೇಕಿದೆ. ದರ್ಶನ್ ತಮಗೆ ಬೇಕಾದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬಹುದು. ಆರೋಗ್ಯ ಪರಿಸ್ಥಿತಿ, ಚಿಕಿತ್ಸೆ ಮತ್ತು ಎಷ್ಟು ದಿನ ಆಸ್ಪತ್ರೆಯಲ್ಲಿ ಇರಬೇಕು ಎನ್ನುವ ಮಾಹಿತಿಯನ್ನು ಒಂದು ವಾರದಲ್ಲಿ ಕೋರ್ಟ್ಗೆ ಸಲ್ಲಿಸಬೇಕು ಎಂದು ಆದೇಶ ಕೊಟ್ಟಿದೆ. ವಿಸ್ತೃತ ಆದೇಶ ಇನ್ನೂ ಪ್ರಕಟವಾಗಬೇಕಿದ್ದು, ಮತ್ತೇನೆಲ್ಲಾ ಷರತ್ತುಗಳನ್ನು ವಿಧಿಸಿದೆ ಎನ್ನುವುದು ತಿಳಿಯಲಿದೆ.
ವಕೀಲರು ವಾದಿಸಿದ್ದೇನು?
ದರ್ಶನ್ ಬೆನ್ನುಹುರಿ ಸಮಸ್ಯೆಯಿಂದ ಬಳಲುತ್ತಿದ್ದು, ನೋವು ಕಡಿಮೆಯಾಗಲು ಶಸ್ತ್ರ ಚಿಕಿತ್ಸೆಯ ಅಗತ್ಯವಿದೆ. ಪಾದದಲ್ಲಿ ಜೋಮು ಕಾಣಿಸಿಕೊಂಡಿದ್ದು, ಚಿಕಿತ್ಸೆ ಪಡೆಯದೇ ಇದ್ದರೆ ಮೂತ್ರ ಸಮಸ್ಯೆ ಉಂಟಾಗಲಿದೆ. ಇದರಿಂದ ಅವರ ಆರೋಗ್ಯ ಮತ್ತಷ್ಟು ಗಂಭೀರವಾಗಬಹುದು ಎಂದು ಬಳ್ಳಾರಿಯ ಸರ್ಕಾರಿ ಆಸ್ಪತ್ರೆಯ ನರರೋಗ ತಜ್ಞರಾದ ವಿಶ್ವನಾಥ್ ವರದಿ ನೀಡಿದ್ದು, ಇದನ್ನು ಪರಿಗಣಿಸಿ ನ್ಯಾಯಾಲಯ ಜಾಮೀನು ನೀಡಬೇಕು ಎಂದು ದರ್ಶನ್ ಪರ ಹಿರಿಯ ವಕೀಲ ಸಿ.ವಿ. ನಾಗೇಶ್ ವಾದಿಸಿದ್ದರು.
ದರ್ಶನ್ ಮೈಸೂರಿನ ಅಪೊಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವುದಾಗಿ ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಕೋರ್ಟ್ ಕೇಳಿರುವ ಷರತ್ತುಗಳನ್ನು ಇಂದೇ ಪೂರೈಸಿದರೆ, ಸಂಜೆ ವೇಳೆಗೆ ಅವರು ಜೈಲಿನಿಂದ ಬಿಡುಗಡೆಯಾಗುವ ಸಾಧ್ಯತೆ ಕೂಡ ಇದೆ.












Click it and Unblock the Notifications