ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ, ಗೃಹಸಚಿವರಿಂದ ಮಹತ್ವದ ಆದೇಶ
ಬೆಂಗಳೂರು, ಆ. 12: ಬೆಂಗಳೂರು ಪೂರ್ವ ವಲಯದಲ್ಲಿರುವ ದೇವರ ಜೀವನಹಳ್ಳಿ, ಕಾಡುಗೊಂಡನಹಳ್ಳಿ, ಕಾವಲ್ ಭೈರಸಂದ್ರ ವ್ಯಾಪ್ತಿಯಲ್ಲಿ ಮಂಗಳವಾರ ರಾತ್ರಿ ನಡೆದ ಗಲಭೆ, ದೊಂಬಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕದ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಮಹತ್ವದ ಆದೇಶ ಹೊರಡಿಸಿದ್ದಾರೆ.
Recommended Video
ಉಡುಪಿಯಿಂದ ನೇರವಾಗಿ ಸಿಎಂ ಅಧಿಕೃತ ನಿವಾಸ ಕಾವೇರಿಗೆ ಆಗಮಿಸಿದ ಬೊಮ್ಮಾಯಿ ಅವರು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 145 ಜನರನ್ನು ಕೆಜಿ ಹಳ್ಳಿ ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದಾರೆ. ಪ್ರಮುಖ ಆರೋಪಿ ಎಸ್ಡಿಪಿಐ ಜಿಲ್ಲಾ ಕಾರ್ಯದರ್ಶಿ ಮುಜಾಮಿಲ್ ಪಾಷಾ, ಫಿರೋಜ್ ಎಂಬುವರು ಬಂಧಿತರಲಿದ್ದಾರೆ.
ಈ ಪ್ರಕರಣ ಗಂಭೀರವಾಗಿದ್ದು, ಶಾಸಕರೊಬ್ಬರ ಮನೆ, ಪೊಲೀಸ್ ಠಾಣೆ ಮೇಲೆ ದಾಳಿಯಾಗಿದೆ. ಈ ಪ್ರಕರಣವನ್ನು ಮ್ಯಾಜಿಸ್ಟ್ರೇಟ್ ತನಿಖೆಗೆ ರಾಜ್ಯ ಸರ್ಕಾರ ಆದೇಶಿಸಿದೆ ಎಂದು ಹೇಳಿದರು.
ಗಲಭೆಕೋರರಿಂದಲೇ ನಷ್ಟ ವಸೂಲಿ
ಕೆಜಿ ಹಳ್ಳಿ, ಡಿಜೆ ಹಳ್ಳಿ ಹಾಗೂ ಕಾವಲ್ ಭೈರಸಂದ್ರದ ಗಲಭೆ ಪ್ರಕರಣದಲ್ಲಿ ಅಪಾರ ಪ್ರಮಾಣವಾದ ಸಾರ್ವಜನಿಕರ ಆಸ್ತಿಪಾಸ್ತಿ ನಷ್ಟ ಉಂಟಾಗಿದೆ. ಸುಪ್ರೀಂಕೋರ್ಟ್ ನಿರ್ದೇಶನದಂತೆ ಈ ಗಲಭೆಯಲ್ಲಿ ಉಂಟಾದ ನಷ್ಟವನ್ನು ಗಲಭೆಕೋರರಿಂದಲೇ ಭರಿಸಲಾಗುತ್ತದೆ. ಗಲಭೆಕೋರರ ಆಸ್ತಿ ಜಪ್ತಿ ಮಾಡಿ ನಷ್ಟ ಸರಿದೂಗಿಸಲಾಗುತ್ತದೆ ಎಂದು ಹೇಳಿದರು.
ಪುಲಕೇಶಿ ನಗರ ಶಾಸಕ ಶ್ರೀನಿವಾಸಮೂರ್ತಿ ಮನೆ, ಡಿಜೆ ಹಳ್ಳಿ ಪೊಲೀಸ್ ಠಾಣೆ, ಪೊಲೀಸ್ ವಾಹನಕ್ಕೆ ಬೆಂಕಿ ಇಡಲಾಗಿದೆ. ಪತ್ರಕರ್ತರಿಗೂ ಗಾಯಗಳಾಗಿವೆ. ಇಡೀ ಪ್ರದೇಶದಲ್ಲಿ ಪ್ರಕ್ಷುಬ್ದ ವಾತಾವರಣ ಉಂಟು ಮಾಡಲಾಗಿತ್ತು. ಕಿಡಿಗೇಡಿಗಳ ಪತ್ತೆ ಹಚ್ಚಲು ಸಿಸಿಟಿವಿ ವಿಡಿಯೋ ನೆರವು ಪಡೆಯಲಾಗುತ್ತಿದೆ. ಘಟನೆಗೆ ಕಾರಣರಾದವರೆಲ್ಲರಿಗೂ ಶಿಕ್ಷೆಯಾಗಲಿದೆ ಎಂದು ಬೊಮ್ಮಾಯಿ ತಿಳಿಸಿದರು.